ತಮಿಳುನಾಡು ವಿಧಾನಸಭೆ ಚುನಾವಣೆ: ನಟ ಕಮಲ ಹಾಸನ್ ಸ್ಪರ್ಧೆ ಖಚಿತ
ಚೆನ್ನೈ, ನವೆಂಬರ್ 6: ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತಿರುವುದಾಗಿ ನಟ, ರಾಜಕಾರಣಿ ಕಮಲ ಹಾಸನ್ ಖಚಿತಪಡಿಸಿದ್ದಾರೆ. ಮಕ್ಕಳ್ ನೀಧಿ ಮಯ್ಯಮ್ (ಎಂಎನ್ಎಂ) ಮುಖ್ಯಸ್ಥರಾಗಿರುವ ಕಮಲ್, ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
2021ರ ಮೇ ತಿಂಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಬೇಕಿದೆ. ನಟ ರಜನಿಕಾಂತ್ ಅವರೊಂದಿಗೆ ತಾವು ಸಂಪರ್ಕದಲ್ಲಿದ್ದು, ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಅರಿವಿದೆ ಎಂದು ಕಮಲ ಹಾಸನ್ ತಿಳಿಸಿದ್ದಾರೆ.
ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜ ತಮ್ಮ ಪಕ್ಷದ ಪ್ರಣಾಳಿಕೆ. ಒಳ್ಳೆಯ ವ್ಯಕ್ತಿಗಳ ಜತೆಗೆ ಮಾತ್ರವೇ ತಮ್ಮ ಪಕ್ಷ ಮೈತ್ರಿ ಮಾಡಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ನಮ್ಮದು ಹಗೆತನದ ರಾಜಕೀಯವಲ್ಲ. ನಮ್ಮದು ಸೂಕ್ತ ಮಾರ್ಗದರ್ಶನ ಅಥವಾ ದಿಕ್ಕು ಹೊಂದಿರುವ ರಾಜಕಾರಣ. ನಾವು ಎಂದಿಗೂ 'ಬಿ ತಂಡ' ಆಗುವುದಿಲ್ಲ, ಎಂದಿಗೂ ಎ ತಂಡವಾಗಿರುತ್ತೇವೆ ಎಂದಿದ್ದಾರೆ.

2021ರ ವಿಧಾನಸಭೆ ಚುನಾವಣೆಯಲ್ಲಿ ಎಂಎನ್ಎಂ ಮೂರನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಕಾರ್ಯಕ್ಷೇತ್ರ, ಸಮೀಕ್ಷೆಗಳು ಮತ್ತು ಆಂತರಿಕ ವಿಶ್ಲೇಷಣೆಗಳ ಅಂದಾಜಿನಲ್ಲಿ ಇದನ್ನು ಗ್ರಹಿಸಲಾಗಿದೆ. ಇತ್ತೀಚೆಗೆ ಸುಮಾರು ಒಂದು ಲಕ್ಷ ಸದಸ್ಯರು ಎಂಎನ್ಎಂ ಸೇರಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
'ಮನುಸ್ಮೃತಿ' ಬಗ್ಗೆ ಕೇಳಲಾದ ಪ್ರಶ್ನೆಗೆ ಕಮಲ್, ಇದು ಈಗ ಚರ್ಚೆಯ ವಿಷಯವೇ ಅಲ್ಲ. ಸಂವಿಧಾನಕ್ಕೆ ಬೆದರಿಕೆಯೊಡ್ಡುವ ಸಂದರ್ಭಗಳು ಕಂಡಾಗ ನಾನು ಅದರ ವಿರುದ್ಧ ಧ್ವನಿ ಎತ್ತುತ್ತೇನೆ ಎಂದು ತಿಳಿಸಿದ್ದಾರೆ.












Click it and Unblock the Notifications