ಅಮ್ಮನಿಗೆ ನೊಬೆಲ್, ಮ್ಯಾಗ್ಸೆಸ್ಸೆ, ಭಾರತ ರತ್ನ ಸಿಗಬೇಕು!
ಹೊಸ ನಾಯಕಿಯನ್ನು ಪಡೆದ ಸಂತಸದಲ್ಲಿ ಜಯಲಲಿತಾ ಅವರ ಕಟ್ಟಾ ಅಭಿಮಾನಿಗಳು ರಸ್ತೆರಸ್ತೆಗಳಲ್ಲಿ ಹುಚ್ಚೆದ್ದು ಕುಣಿದರು, ಎಲ್ಲ ಪ್ರಶಸ್ತಿಗಳು ಬಂದಷ್ಟೇ ಸಂಭ್ರಮಿಸಿದರು. ಪಕ್ಷದ ವತಿಯಿಂದ ಎಲ್ಲರಿಗೂ ಲಡ್ಡು ಹಂಚಲಾಯಿತು.
ಚೆನ್ನೈ, ಡಿಸೆಂಬರ್ 29 : "ಅವರಿಗೆ ಭಾರತ ರತ್ನ ಪ್ರಶಸ್ತಿ ಸಿಗಬೇಕು, ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಬೇಕು, ಪ್ರತಿಷ್ಠಿತ ರೋಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯೂ ದಕ್ಕಬೇಕು, ಅವರ ಕಂಚಿನ ಪ್ರತಿಮೆ ಸಂಸತ್ತಿನಲ್ಲಿ ಪ್ರತಿಷ್ಠಾಪಿಸಬೇಕು...."
ಇವು ತಮಿಳುನಾಡಿನ ಜನತೆಯ ಆರಾಧ್ಯದೈವ, ಡಿಸೆಂಬರ್ 5ರಂದು ಅಪೋಲೋ ಆಸ್ಪತ್ರೆಯಲ್ಲಿ ದೈವಾಧೀನರಾದ, 66.65 ಕೋಟಿ ರುಪಾಯಿ ಅಕ್ರಮ ಸಂಪತ್ತು ಸಂಪಾದಿಸಿದ ಆರೋಪ ಹೊತ್ತಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಈ ಎಲ್ಲ ಪ್ರಶಸ್ತಿಗಳು ಲಭಿಸಬೇಕು ಎಂಬಿತ್ಯಾದಿಯಾಗಿ ಒಟ್ಟು 14 ನಿರ್ಣಯಗಳನ್ನು ಎಐಎಡಿಎಂಕೆ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. [ತಮಿಳುನಾಡಿನಲ್ಲಿ 'ಚಿನ್ನಮ್ಮ' ಶಶಿಕಲಾ ನಟರಾಜನ್ ಯುಗಾರಂಭ!]
ಭಾವುಕತೆ ಮತ್ತು ವ್ಯಕ್ತಿನಿಷ್ಠೆಯ ಸಂಗಮದಂತಿದ್ದ ಎಐಎಡಿಎಂಕೆ ಪಕ್ಷದ ಸಭೆಯಲ್ಲಿ 'ಚಿನ್ನಮ್ಮ' ಶಶಿಕಲಾ ನಟರಾಜನ್ ಅವರು ಪಕ್ಷವನ್ನು ಮುನ್ನಡೆಸಬೇಕು ಎಂಬ ನಿರ್ಣಯವನ್ನೂ ತೆಗೆದುಕೊಳ್ಳಲಾಯಿತು. ಶಶಿಕಲಾ ಅವರ ಅನುಪಸ್ಥಿತಿಯಲ್ಲಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರು ಈ ಘೋಷಣೆ ಮಾಡಿದರು.
ಈ ನಿರ್ಣಯಗಳು ಹೊರಬೀಳುತ್ತಿದ್ದಂತೆ ಹೊರಗಡೆ ಸಂಭ್ರಮವೋ ಸಂಭ್ರಮ. ಹೊಸ ನಾಯಕಿಯನ್ನು ಪಡೆದ ಸಂತಸದಲ್ಲಿ ಜಯಲಲಿತಾ ಅವರ ಕಟ್ಟಾ ಅಭಿಮಾನಿಗಳು ರಸ್ತೆರಸ್ತೆಗಳಲ್ಲಿ ಹುಚ್ಚೆದ್ದು ಕುಣಿದರು, ಎಲ್ಲ ಪ್ರಶಸ್ತಿಗಳು ಬಂದಷ್ಟೇ ಸಂಭ್ರಮಿಸಿದರು. ಪಕ್ಷದ ವತಿಯಿಂದ ಎಲ್ಲರಿಗೂ ಲಡ್ಡು ಹಂಚಲಾಯಿತು. ಅಂದ ಹಾಗೆ ಆ 14 ನಿರ್ಣಯಗಳಲ್ಲಿ ಪ್ರಮುಖವಾದವು ಇಲ್ಲಿವೆ. [ಚಿನ್ನಮ್ಮ ತಮಿಳ್ನಾಡಿನ ಕಿಂಗ್ ಮೇಕರ್ ಆಗಿದ್ದು ಹೇಗೆ?]
ತ್ಯಾಗಮಯಿ ಅಮ್ಮನಿಗೆ ಪಕ್ಷ ಚಿರಋಣಿ
ಪಕ್ಷವನ್ನು ಈ ಮಟ್ಟಿಗೆ ಯಶಸ್ವಿಗೊಳಿಸಲು ಪುರಚ್ಚಿ ತಲೈವಿ ಜಯಲಲಿತಾ ಅವರು ಅಪಾರವಾಗಿ ತ್ಯಾಗ ಮಾಡಿದ್ದಾರೆ. ಅವರಿಗೆ ನಾವು ಎಂದೆಂದಿಗೂ ಚಿರಋಣಿ. ಅವರಿಗೆ ನಮೋನ್ನಮಃ
ಅಮ್ಮನ ಹುಟ್ಟುಹಬ್ಬ ರೈತರ ದಿನವಾಗಬೇಕು
ಅಮ್ಮ ಜಯಲಲಿತಾ ಅವರ ಹುಟ್ಟುಹಬ್ಬ(24ನೇ ಫೆಬ್ರವರಿ)ವನ್ನು ರೈತರ ದಿನವನ್ನಾಗಿ ಕೇಂದ್ರ ಸರಕಾರ ಘೋಷಿಸಬೇಕು ಮತ್ತು ಸಂಸತ್ತಿನಲ್ಲಿ ಜಯಲಲಿತಾ ಅವರು ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕು.
ಪುರಚ್ಚಿ ತಲೈವಿಗೆ ಭಾರತ ರತ್ನ!
ಮಹಿಳೆಯ ಕಲ್ಯಾಣಕ್ಕಾಗಿ ಮತ್ತು ರಾಜ್ಯದ ಜನತೆಯ ಉನ್ನತಿಗಾಗಿ ಜಯಲಲಿತಾ ಅವರು ಮಾಡಿರುವ ಎಲ್ಲ ಕಾರ್ಯಗಳನ್ನು ಪರಿಗಣಿಸಿ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ' ನೀಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಬೇಕು.
ಮ್ಯಾಗ್ಸೆಸ್ಸೆಯೂ ಸಿಗಲಿ, ನೊಬೆಲ್ ಕೂಡ ಬರಲಿ
ಫಿಲಿಪೈನ್ಸ್ ದೇಶದ ಮಾಜಿ ಅಧ್ಯಕ್ಷ ರಾಮೋನ್ ಮ್ಯಾಗ್ಸೆಸ್ಸೆ ಅವರ ನೆನಪಿನಲ್ಲಿ ನೀಡಲಾಗುವ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಶಿಫಾರಸು ಮಾಡಬೇಕು. ಅಲ್ಲದೆ, ಜನತೆಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಿದ್ದಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನೂ ನೀಡಬೇಕು.
ಜಯಾ ಆತ್ಮಕ್ಕೆ ಶಾಂತಿ ಸಿಗಬೇಕಿದ್ದರೆ...
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಅವರು 100ನೇ ಹುಟ್ಟುಹಬ್ಬ(ಜನವರಿ 17, 2017)ದ ದಿನವನ್ನು ಮಕ್ಕಳ್ ಪಾಣಿ ಸೋಷಿಯಲ್ ವರ್ಕ್ ದಿನವನ್ನಾಗಿ ಆಚರಿಸಿದರೆ ಜಯಲಲಿತಾ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ.
ಜಯಲಲಿತಾ ಅವರ ನೆನಪು ಚಿರಾಯುವಾಗಿರಲು
ಜಯಲಲಿತಾ ಅವರ ನೆನಪು ಚಿರಾಯುವಾಗಿರಲು ರಾಜ್ಯದ ಅಭಿವೃದ್ಧಿಗಾಗಿ ಮತ್ತು ಪಕ್ಷದ ಪ್ರಗತಿಗಾಗಿ ಪ್ರತಿ ಕಾರ್ಯಕರ್ತ ದುಡಿಯಬೇಕು. ಮತ್ತು ಗೌರವಯುತ ಚಿನ್ನಮ್ಮ (ಶಶಿಕಲಾ ನಟರಾಜನ್) ಅವರ ನೇತೃತ್ವ, ಮಾರ್ಗದರ್ಶನದಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು.
ಶ್ರದ್ಧಾಂಜಲಿ ಅರ್ಪಿಸಿದವರಿಗೆ ಧನ್ಯವಾದ
ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದಾಗ ಬಂದು ಭೇಟಿಯಾದ, ಅವರು ಅಸುನೀಗಿದಾಗ ಬಂದು ಶ್ರದ್ಧಾಂಜಲಿ ಅರ್ಪಿಸಿದ ಗಣ್ಯ ನಾಯಕರಿಗೆ, ವಿವಿಧ ಪಕ್ಷಗಳ ಪ್ರತಿನಿಧಿಗಳಿಗೆ, ದೇಶವಿದೇಶಗಳ ಮುಖಂಡರಿಗೆ, ಸರಕಾರಿ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತದೆ.