'ಅಮ್ಮನ ಮಗ'ನ ದಾಖಲೆ ನಕಲಿ, ಆತನ ಜೈಲಿಗಟ್ಟಿ ಎಂದ ಹೈಕೋರ್ಟ್
ನಾನು ಜಯಲಲಿತಾರ ಮಗ, ಆಕೆಯ ಎಲ್ಲ ಆಸ್ತಿ ತನಗೆ ಸೇರಿದ್ದು ಎಂದು ಮದ್ರಾಸ್ ಹೈ ಕೋರ್ಟ್ ಮೆಟ್ಟಿಲೇರಿದ್ದ ಈರೋಡ್ ಮೂಲದ ಕೃಷ್ಣಮೂರ್ತಿ ಎಂಬಾತನಿಗೆ ನ್ಯಾಯಮೂರ್ತಿಗಳು ಜೈಲಿನ ಹಾದಿ ತೋರಿಸಿದ್ದಾರೆ. ಏಕೆ ಎಂದು ತಿಳಿಯಲು ಈ ವರದಿ ಓದಿ
ಚೆನ್ನೈ, ಮಾರ್ಚ್ 27: ನಾನು ಜಯಲಲಿತಾ ಅವರ ಮಗ ಎಂದು ಹೇಳಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸುವಂತೆ ಮದ್ರಾಸ್ ಹೈ ಕೋರ್ಟ್ ನ ನ್ಯಾಯಮೂರ್ತಿ ಆರ್. ಮಗದೇವನ್ ಆದೇಶಿಸಿದ್ದಾರೆ. ಅಪರಾಧ ವಿಭಾಗದ ಐಜಿ ವರದಿ ಬಂದ ನಂತರ ನ್ಯಾಯಮೂರ್ತಿಗಳು ಈ ಆದೇಶ ನೀಡಿದ್ದಾರೆ.
"ಆತ ಕೋರ್ಟ್ ಗೆ ಮಾತ್ರ ಮೋಸ ಮಾಡಿಲ್ಲ. ನಕಲಿ ದಾಖಲೆಗಳನ್ನು ಸಹ ಸೃಷ್ಟಿಸಿದ್ದಾನೆ" ಎಂದು ಅವರು ಹೇಳಿದ್ದಾರೆ. ಆತನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಕೂಡ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಕೃಷ್ಣಮೂರ್ತಿ ಎಂಬಾತ ತಾನು ದಿವಂಗತ ಮುಖ್ಯಮಂತ್ರಿ ಜಯಲಲಿತಾ ಹಾಗೂ ತೆಲುಗು ನಟ ಶೋಭನ್ ಬಾಬು ಅವರ ಮಗ ಎಂದು ಹೇಳಿಕೊಂಡಿದ್ದ.[ಜಯಲಲಿತಾ ಮಗ ಅಂತ ಹೇಳುವವನ ಮೇಲೆ ನ್ಯಾಯಾಧೀಶರು ಸಿಟ್ಟಾಗಿದ್ಯಾಕೆ?]

ಅದಕ್ಕಾಗಿ ದತ್ತು ಸ್ವೀಕಾರದ ದಾಖಲೆ ಮತ್ತು ಫೋಟೋಗಳನ್ನು ಕೋರ್ಟ್ ಗೆ ಸಲ್ಲಿಸಿದ್ದ. ಅವುಗಳನ್ನು ಫೋಟೋಶಾಪ್ ಬಳಸಿ ತಿದ್ದಿರುವುದು ಮೇಲ್ನೋಟಕ್ಕೆ ಕೋರ್ಟ್ ಗೆ ಕಂಡುಬಂತು. ಆದ್ದರಿಂದ ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡುವಂತೆ ಹಿಂದಿನ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಹೇಳಿದ್ದರು.

ಈ ಬಗ್ಗೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿಟ್ಟು, ಸೋಮವಾರ ಪೊಲೀಸ್ ಇಲಾಖೆಯ ಅಪರಾಧ ವಿಭಾಗದಿಂದ ಸಲ್ಲಿಸಲಾಗಿತ್ತು. ಆ ವರದಿಯನ್ನು ಓದಿದ ನಂತರ ನ್ಯಾಯಮೂರ್ತಿಗಳು ಅರ್ಜಿದಾರ ಕೃಷ್ಣಮೂರ್ತಿಯನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆಯನ್ನು ನೀಡಿದ್ದಾರೆ.[ಇದ್ಯಾರ್ರೀ ಜಯಲಲಿತಾರ ಹೊಸ ಮಗ, ಆಕೆ ಎಲ್ಲ ಆಸ್ತಿಯ ವಾರಸುದಾರ!]

ಕೃಷ್ಣಮೂರ್ತಿ ಮೂಲತಃ ಈರೋಡ್ ಜಿಲ್ಲೆಯವನು. ತನ್ನ ತಾಯಿ ಜಯಲಲಿತಾ. ಆಕೆಯ ಎಲ್ಲ ಆಸ್ತಿ ತನಗೆ ಸೇರಬೇಕು ಎಂದು ಆತ ಹೇಳಿದ್ದ. ಹೈಕೋರ್ಟ್ ನ ಮೆಟ್ಟಿಲೇರಿ ತನ್ನನ್ನು ಜಯಲಲಿತಾ ಅವರ ಉತ್ತರಾಧಿಕಾರಿ ಎಂದು ಘೋಷಿಸಬೇಕು ಎಂದು ಅರ್ಜಿ ಸಲ್ಲಿಸಿದ್ದ. ಆತ ಸಲ್ಲಿಸಿದ ದಾಖಲೆಗಳು ನಕಲಿ ಎಂದು ಸಾಬೀತಾಗಿದ್ದು, ಜೈಲು ಪಾಲಾಗಿದ್ದಾನೆ.

ಅಂದಹಾಗೆ, ಜಯಲಲಿತಾ ಅವರು ಅನಾರೋಗ್ಯದಿಂದ ಸೆಪ್ಟೆಂಬರ್ ನಲ್ಲಿ ಚೆನ್ನೈ ನ ಅಪೋಲೋ ಆಸ್ಪತ್ರೆ ಸೇರಿದ್ದರು. ಎಪ್ಪತ್ತೈದು ದಿನಗಳ ನಂತರ ಮೃತಪಟ್ಟಿದ್ದರು. ಅವರ ಸಾವಿನ ನಂತರ ಎಐಎಡಿಎಂಕೆಯಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆದು, ಕಡೆಗೆ ಪಳನಿಸ್ವಾಮಿ ಮುಖ್ಯಮಂತ್ರಿಯಾದರು. ಇನ್ನು ಅವರ ಆಸ್ತಿ ತಮಗೆ ಸೇರಿದ್ದು ಎಂದು ಜಯಾ ಸೋದರ ಸಂಬಂಧಿಗಳಾದ ದೀಪಾ ಹಾಗೂ ದೀಪಕ್ ಹೇಳಿದ್ದಾರೆ. ಇನ್ನೊಂದೆಡೆ ಜಯಾ ಸಾವಿನ ಸುತ್ತ ಅನುಮಾನಗಳಿವೆ.












Click it and Unblock the Notifications