ಜಯಾ ಸಾವಿನ ತನಿಖೆ: ಶಶಿಕಲಾ, ಅಪೋಲೋ ಸಂಸ್ಥಾಪಕರಿಗೆ ಸಮನ್ಸ್
ಚೆನ್ನೈ, ಡಿಸೆಂಬರ್ 22: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಸಾವಿನ ತನಿಖೆ ನಡೆಸುತ್ತಿರುವ ತನಿಖಾ ಆಯೋಗ ಬುಧವಾರ ಶಶಿಕಲಾ ನಟರಾಜನ್ ಹಾಗೂ ಅಪೋಲೋ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ ಪ್ರತಾಪ್ ರೆಡ್ಡಿಗೆ ಸಮನ್ಸ್ ಜಾರಿ ಮಾಡಿದೆ.
ಡಿಸೆಂಬರ್ 20ರಂದು ಜಯಲಲಿತಾ ಅವರ 20 ಸೆಕೆಂಡ್ ಗಳ ವಿಡಿಯೋವನ್ನು ಅನರ್ಹಗೊಂಡ ಶಾಸಕ ಪಿ. ವೆಟ್ರಿವೆಲ್ ಬಿಡುಗಡೆ ಮಾಡಿದ್ದರು. ಇದು ತಮಿಳುನಾಡಿನಲ್ಲಿ ರಾಜಕೀಯ ವಾಗ್ಯುದ್ಧ ಹುಟ್ಟುಹಾಕಿತ್ತು.
ಶಶಿಕಲಾ ಬಣದ ಟಿಟಿವಿ ದಿನಕರನ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಆರ್.ಕೆ. ನಗರ ಉಪಚುನಾವಣೆಗೂ ಮೊದಲು ಈ ವಿಡಿಯೋ ಬಿಡುಗಡೆಯಾಗಿತ್ತು. ವಿಡಿಯೋದಲ್ಲಿ ಜಯಲಲಿತಾ ವಿರಾಮ ತೆಗೆದುಕೊಳ್ಳುತ್ತಿದ್ದು ಅವರ ಬಲ ಕೈಗೆ ಐವಿ ಡ್ರಿಪ್ ಹಾಕಿರುವುದು ಕಾಣಿಸುತ್ತದೆ. ಈ ವಿಡಿಯೋ ಬಿಡುಗಡೆಯಾದ ಸಂದರ್ಭದ ಬಗ್ಗೆ ಆಡಳಿತ ಪಕ್ಷ ಆಕ್ಷೇಪ ವ್ಯಕ್ತಪಡಿಸಿತ್ತು.

ಈ ವಿಡಿಯೋ ಬಗ್ಗೆ ಹೇಳಿಕೆ ನೀಡಿರುವ ರೆಡ್ಡಿ ನಮ್ಮ ವೈದ್ಯರು ಅವರನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಪ್ರಯತ್ನ ಪಟ್ಟಿದ್ದಾರೆ ಎಂದು ಹೇಳಿದ್ದರು.
ಸೆಪ್ಟೆಂಬರ್ 22ರಂದು ಜಯಲಲಿತಾ ಅಪೋಲೋ ಆಸ್ಪತ್ರೆ ಸೇರಿದ್ದರು. ಅದಾಗಿ 75 ದಿನಗಳ ನಂತರ ಅಂದರೆ ಡಿಸೆಂಬರ್ 5ರಂದು ಅವರು ಕೊನೆಯುಸಿರೆಳೆದಿದ್ದರು. ಇದಾದ ನಂತರ ಆಕೆಯ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿತ್ತು.
ಬಳಿಕ ಅಕ್ಟೋಬರ್ 30ರಂದು ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖಾ ಆಯೋಗ ನೇಮಿಸಲಾಗಿತ್ತು. ಮುಂದಿನ ವರ್ಷದ ಆರಂಭದಲ್ಲಿ ಈ ಆಯೋಗ ತನ್ನ ವರದಿಯನ್ನು ಸಲ್ಲಿಸಲಿದೆ.












Click it and Unblock the Notifications