ವೈದ್ಯಕೀಯ ವರದಿ: ಆಸ್ಪತ್ರೆಗೆ ಕರೆ ತಂದಾಗ ಜಯಾಗೆ ಪ್ರಜ್ಞೆಯೇ ಇರಲಿಲ್ಲ
ಚೆನ್ನೈ, ಸೆಪ್ಟೆಂಬರ್ 28: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೆ ಸಂಬಂಧಿಸಿದ ಅನುಮಾನಗಳು ಮುಂದುವರಿದಿರುವ ನಡುವೆ ವೈದ್ಯಕೀಯ ದಾಖಲೆಗಳು ಮಾಧ್ಯಮಗಳ ಕೈಗೆ ಸಿಕ್ಕಿವೆ.
ನ್ಯಾ.ಆರುಮುಗಸ್ವಾಮಿ ನೇತೃತ್ವದಲ್ಲಿ ಜಯಲಲಿತಾ ಸಾವಿನ ತನಿಖೆ
ತನಗೆ ವೈದ್ಯಕೀಯ ದಾಖಲೆಗಳು ಸಿಕ್ಕಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆ ತರುವಾಗ ಪ್ರಜ್ಞೆ ಇರಲಿಲ್ಲ ಎಂದು 'ಇಂಡಿಯಾ ಟುಡೇ' ವರದಿ ಮಾಡಿದೆ.
ಇದನ್ನು ಪುಷ್ಟೀಕರಿಸಿರುವ ಎನ್ಡಿಟಿವಿ, 'ಜಯಲಲಿತಾರನ್ನು ಸೆಪ್ಟೆಂಬರ್ 22, 2016ರಂದು ಆಸ್ಪತ್ರೆಗೆ ಕರೆ ತಂದಾಗ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಆಕೆ ಅಲ್ಪಸ್ವಲ್ಪ ಮಾತನಾಡುತ್ತಿದ್ದರು ಎಂದು ಮೊದಲ ವೈದ್ಯಕೀಯ ವರದಿ ಹೇಳುತ್ತಿದೆ,' ಎಂದು ವರದಿ ಮಾಡಿದೆ.
ವೈದ್ಯಕೀಯ ದಾಖಲೆ ಪ್ರಕಾರ ಆಕೆಯ ದೇಹದ ಮೇಲೆ ಯಾವುದೇ ಗುರುತುಗಳಿರಲಿಲ್ಲ ಮತ್ತು ಆಕೆಯ ರಕ್ತದಲ್ಲಿನ ಸಕ್ಕರೆ ಅಂಶ 508ಮಿಗ್ರಾಂ/ಡಿಎಲ್ ಆಗಿತ್ತು. ನ್ಯುಮೋನಿಯಾ ಜ್ವರ, ರಕ್ತದೊತ್ತಡ ಮತ್ತು ಗಂಟಲು ಅಲರ್ಜಿಯಿಂದ ಜಯಲಲಿತಾ ಬಳಲುತ್ತಿದ್ದರು ಎಂದು 'ಇಂಡಿಯಾ ಟುಡೇ' ವರದಿ ಮಾಡಿದೆ.
ಇದೇ ವೇಳೆ ಎಲೆಕ್ಷನ್ ಫಾರ್ಮ್ ಗೆ ಜಯಲಲಿತಾರ ಬೆರಳಚ್ಚು ಪಡೆಯುವಾಗ ಆಕೆಗೆ ಪ್ರಜ್ಞೆಯೇ ಇರಲಿಲ್ಲ ಎಂಬ ವಾದಗಳಿದ್ದು ಈ ಸಂಬಂಧ ವಿವರಣೆ ನೀಡಲು ಅಕ್ಟೋಬರ್ 6ರಂದು ಹಾಜರಾಗುವಂತೆ ಮದ್ರಾಸ್ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಸಮನ್ಸ್ ನೀಡಿದೆ.
ಇನ್ನು ಜಯಲಲಿತಾ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡಲು ನ್ಯಾಯಾಂಗ ಆಯೋಗವನ್ನು ತಮಿಳುನಾಡು ಸರಕಾರ ರಚಿಸಿದ್ದು ಮೂರು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.