ತೃತೀಯ ರಂಗಕ್ಕೆ ಜೀವ ತುಂಬಿದ ಜಯಲಲಿತಾ
ಚೆನ್ನೈ, ಫೆ.3: ತೃತೀಯ ರಂಗ ವೇದಿಕೆ ನಿಧಾನವಾಗಿ ಶೃಂಗಾರಗೊಳ್ಳುತ್ತಿದೆ. ತಮ್ಮ ಅಧೀನದಲ್ಲಿ 40 ಸಂಸದೀಯ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯೊಂದಿಗೆ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟುರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ತೃತೀಯ ರಂಗಕ್ಕೆ ಮತ್ತೆ ಜೀವ ತುಂಬಿದ್ದಾರೆ.
AIADMK ಅಧಿನಾಯಕಿ ಜೆ ಜಯಲಲಿತಾ ಅವರು ಭಾನುವಾರ ಸಿಪಿಐ ಜತೆ ಯಶಸ್ವಿಯಾಗಿ ಕೈಜೋಡಿಸಿದ್ದಾರೆ. ತನ್ಮೂಲಕ ತೃತೀಯ ರಂಗಕ್ಕೆ ಮತ್ತಷ್ಟು ಸನಿಹವಾಗಿದ್ದಾರೆ.

ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ಪಕ್ಷಗಳು ಫೆ. 5ರಂದು ನವದೆಹಲಿಯಲ್ಲಿ ಸಭೆ ನಡೆಸಲಿದ್ದು, ತಮಿಳುನಾಡು ಸಿಎಂ ಜಯಲಲಿತಾ ಅವರು ತಮ್ಮ ಪ್ರತಿನಿಧಿಯನ್ನು ಸಭೆಗೆ ಕಳುಹಿಸುವ ಸಾಧ್ಯತೆಯಿದೆ. ಎಡ ಪಕ್ಷಗಳಾದ ಜೆಡಿಯು, ಜೆಡಿಎಸ್, ಬಿಜೆಡಿ ಮತ್ತು ಸಮಾಜವಾದಿ ಪಕ್ಷಗಳೂ ಇದರಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ನಿನ್ನೆ AIADMK ಮತ್ತು CPI ನಿರ್ಧಾರ ತೆಗೆದುಕೊಂಡಿವೆ. ಜಯಲಲಿತಾ ಜತೆ ಭಾನುವಾರ ಸಿಪಿಐ ನೇತಾರ ಎಬಿ ಬರ್ದನ್, ಪ್ರಧಾನ ಕಾರ್ಯದರ್ಶಿ ಸುಧಾಕರ ರೆಡ್ಡಿ ಮತ್ತು ತಮಿಳುನಾಡು ರಾಜ್ಯ ಕಾರ್ಯದರ್ಶಿ ಡಿ ಪಾಂಡಿಯನ್ ಮಾತುಕತೆ ನಡೆಸಿದ ಬಳಿಕ ತಮಿಳುನಾಡು ಸಿಎಂ ಜಯಲಲಿತಾ ತಮ್ಮ ಪೋಸ್ ಗಾರ್ಡನ್ ನಿವಾಸದಲ್ಲಿ ಮೈತ್ರಿ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದರು.
ಚುನಾವಣಾ ಪೂರ್ವ ಮೈತ್ರಿಯಾಗಿ ತಮಿಳುನಾಡಿನಿಂದ ತಮಗೆ ಎರಡು ಸ್ಥಾನ ನೀಡಬೇಕು. 2009ರಲ್ಲಿಯೂ ಈ ಮೈತ್ರಿ ಕೈಗೂಡಿತ್ತು. ಚೆನ್ನೈ ಉತ್ತರ ಮತ್ತು ತೆನಕಾಶಿ ಲೋಕಸಭಾ ಕ್ಷೇತ್ರಗಳಲ್ಲಿ ಅಣ್ಣಾ ಡಿಎಂಕೆ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಾರದು ಎಂದು ಜಯಲಲಿತಾ ಅವರಿಗೆ ಮನವಿ ಮಾಡಿಕೊಂಡಿದ್ದಾಗಿ ಸಿಪಿಐ ಮೂಲಗಳು ಹೇಳಿವೆ. ಇವೆರಡರ ಪೈಕಿ ತೆನಕಾಶಿ ಲೋಕಸಭಾ ಸ್ಥಾನವನ್ನು ಸಿಪಿಐ ತನ್ನ ಮಡಿಲಿಗೆ ಹಾಕಿಕೊಂಡಿತ್ತು.
ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ತಾವೇನಾ ಎಂದು ಸುದ್ದಿಗಾರರು ಜಯಲಲಿತಾ ಅವರನ್ನು ಕೇಳಿದಾಗ 'ತಮಿಳುನಾಡು ಮತ್ತು ಪುದುಚೇರಿಯಲ್ಲಿ ಎಲ್ಲಾ 40 ಸ್ಥಾನಗಳನ್ನು ಗೆದ್ದ ಬಳಿಕವಷ್ಟೇ ಈ ವಿಷಯ ಇತ್ಯರ್ಥವಾಗಲಿದೆ' ಎಂದು ಸೂಕ್ಷ್ಮವಾಗಿ ಹೇಳಿದರು.
ಸಿಪಿಐ ಎಡ ಪಕ್ಷವು ತಮಿಳುನಾಡಿನ ನಾಗಪಟ್ಟಣಂ, ಚೆನ್ನೈ ಉತ್ತರ, ತಿರುಪೂರು, ಕೊಯಮತ್ತೂರು, ಕನ್ಯಾಕುಮಾರಿ ಸೇರಿದಂತೆ ಏಳೆಂಟು ಕ್ಷೇತ್ರಗಳಲ್ಲಿ ಬಲವಾಗಿ ತಳವೂರಿದೆ.












Click it and Unblock the Notifications