ಜಲ್ಲಿಕಟ್ಟು ಕ್ರೀಡೆಗೆ ಪಟ್ಟು ಬಿಡದ ವಿದ್ಯಾರ್ಥಿಗಳು, ಗುರುವಾರ ಕಾಲೇಜು ರಜಾ
ಚೆನ್ನೈ, ಜನವರಿ 18: ಗಂಟೆಗಳು ಕಳೆದಂತೆ ಜಲ್ಲಿಕಟ್ಟು ಪರವಾಗಿ ಪ್ರತಿಭಟನೆ ಕಾವು ತಮಿಳುನಾಡಿನಲ್ಲಿ ಹೆಚ್ಚುತ್ತಲೇ ಇದೆ. ಈ ಚಳವಳಿಗೆ ವಿದ್ಯಾರ್ಥಿಗಳು ಕೂಡ ಬೆಂಬಲ ಸೂಚಿಸಿದ್ದು, ಗುರುವಾರ ತಮಿಳುನಾಡಿನ ಮೂವತ್ತೊಂದಕ್ಕೂ ಹೆಚ್ಚು ಕಾಲೇಜುಗಳಿಗೆ ರಜಾ ಘೋಷಣೆ ಮಾಡಲಾಗಿದೆ. ಪ್ರತಿಭಟನೆ ಭಾಗವಾಗಿ ಸಾವಿರಾರು ವಿದ್ಯಾರ್ಥಿಗಳು ಬುಧವಾರ ತರಗತಿಗಳನ್ನು ಬಹಿಷ್ಕರಿಸಿದ್ದರು.[ಗ್ಯಾಲರಿ : ಜಲ್ಲಿಕಟ್ಟುಗಾಗಿ ಪ್ರತಿಭಟನೆ, ತಮಿಳರ ಅರ್ಭಟ]
ಹೋರಾಟ ಮುಂದುವರಿಯುತ್ತದೆ ಎಂದು ಈಗಾಗಲೇ ಘೋಷಿಸಿರುವುದರಿಂದ ಹಲವು ಕಾಲೇಜುಗಳು ರಜಾ ಘೋಷಣೆ ಮಾಡಲು ನಿರ್ಧರಿಸಿವೆ. ಈ ಮಧ್ಯೆ ಪೊಲೀಸರು ಮರೀನಾ ಬೀಚ್ ನಲ್ಲಿ ಸೇರಿದ್ದ ಹೋರಾಟಗಾರರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದಾರೆ. ಆಕ್ರೋಶಗೊಂಡ ಸಾರ್ವಜನಿಕರನ್ನು ಚದುರಿಸಲು ಇಂಥ ಕ್ರಮ ಕೈಗೊಂಡಿದ್ದರು.[ಜಲ್ಲಿಕಟ್ಟು: ಪ್ರತಿಭಟನೆ ತಡೆಗೆ ಸರಕಾರ ಮಧ್ಯಪ್ರವೇಶ]

ಮೂರು ಸಾವಿರಕ್ಕೂ ಹೆಚ್ಚು ಹೋರಾಟಗಾರರು ಮಂಗಳವಾರ ನಡೆಸಿದಂತೆಯೇ ಮರೀನಾ ಬೀಚ್ ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ತಮಿಳುನಾಡು ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರ ಮನವಿಯನ್ನು ಲೆಕ್ಕಿಸದೆ ಪ್ರತಿಭಟನೆ ಮುಂದುವರಿಸಿದ್ದಾರೆ. ಜಲ್ಲಿಕಟ್ಟು ಕ್ರೀಡೆ ಮೇಲಿನ ನಿಷೇಧ ತೆರವು ಮಾಡಿ, ಕೇಂದ್ರದಿಂದ ಸುಗ್ರೀವಾಜ್ಞೆ ತರುವಂತೆ ಮನವಿ ಮಾಡುವುದಾಗಿ ಪನ್ನೀರ್ ಸೆಲ್ವಂ ಹೇಳಿದ್ದರು.[ಏರುತ್ತಿದೆ ಜಲ್ಲುಕಟ್ಟು ಬಿಕ್ಕಟ್ಟು! ಎಲ್ಲೆಲ್ಲೂ ಪ್ರತಿಭಟನೆಯ ಬಿಸಿ]
ಜಲ್ಲಿಕಟ್ಟು ಕ್ರೀಡೆಗೆ ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿ ತಮಿಳುನಾಡಿನಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಜತೆಗೆ, ಅಲ್ಲಿನ ಕಲಾವಿದರ ಒಕ್ಕೂಟವು ಜನವರಿ 20ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.












Click it and Unblock the Notifications