ಚೆನ್ನೈ ಜಲ ಪ್ರಳಯ ಮಾನವ ನಿರ್ಮಿತ, ಬೆಂಗಳೂರಿಗೆ ಎಚ್ಚರಿಕೆ!
ಬೆಂಗಳೂರು, ಡಿ.03: ಚೆನ್ನೈ ಮಹಾನಗರದಲ್ಲಿ ಆಗಿರುವ ವಿಕೋಪಕ್ಕೆ ಕೇವಲ ವಾಯುಭಾರ ಕುಸಿತ, ಭಾರಿ ಮಳೆ, ಚಂಡಮಾರುತದ ಹೊಡೆತವೇ ಕಾರಣವಲ್ಲ, ಇದು ಮಾನವ ನಿರ್ಮಿತ ಅಥವಾ ನಾಗರಿಕ ಸಮಾಜ ಮಾಡಿಕೊಂಡಿರುವ ಅನಾಹುತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಬೆಂಗಳೂರಿಗೆ ಎಚ್ಚರಿಕೆ ಗಂಟೆ ಸದ್ದು ಕೇಳಿಸುವಂತಾಗಿದೆ.
ಎಲ್ಲವೂ ಸರಿ ಇದ್ದ ಕಾಲದಲ್ಲೇ ಚೆನ್ನೈ ನಗರದಲ್ಲಿ ಫುಟ್ ಪಾತ್ ನಲ್ಲಿ ಓಡಾಡಲು ಸಾಧ್ಯವಿಲ್ಲ.ಇನ್ನು ಈ ಪರಿ ಮಳೆ ಸುರಿದರೆ ಗತಿ ಏನು? ಪ್ರಕೃತಿ ಮುಂದೆ ಎಲ್ಲರೂ ತಲೆಬಾಗಬೇಕು ನಿಜ. ಆದರೆ, ಪ್ರಕೃತಿಯ ಮುನಿಸಿಗೆ ಇರುವ ಸಂಪನ್ಮೂಲಗಳನ್ನು ಹಾಳುಗೆಡಿಸಿ ಚೆಂದದ ನಗರ ಹಾಳು ಮಾಡಿದ್ದು ಇದೇ ನಾಗರಿಕ ಸಮಾಜ.[ಪ್ರವಾಹ ಸಂತ್ರಸ್ತರಿಗೆ ಬೆಂಗಳೂರಿಗರು ನೆರವು ನೀಡೋದು ಎಲ್ಲಿ?]

2005ರಲ್ಲಿ ಜಲಪ್ರಳಯದಿಂದ ತತ್ತರಿಸಿದರೂ ಚೆನ್ನೈ ಪಾಠ ಕಲಿಯಲಿಲ್ಲ. ಅಂದು ಸುಮಾರು 12.000 ಮಂದಿ ಚೆನ್ನೈ ನಗರದಿಂದ ಗುಳೆ ಕೀಳಬೇಕಾಯಿತು. ಈಗಿನ ಪರಿಸ್ಥಿತಿಗೆ ರಿಯಲ್ ಎಸ್ಟೇಟ್ ಉದ್ಯಮಿಗಳ ದುರಾಸೆ ಹಾಗೂ ರಾಜಕೀಯ ವ್ಯಕ್ತಿಗಳ ಮದವೇ ಕಾರಣ ಎಂದು ಪರಿಸರವಾದಿಗಳು ದೂರಿದ್ದಾರೆ. ಶತಮಾನದಲ್ಲೇ ಕಾಣದ ಮಳೆ ಬಿದ್ದಿದೆ ಎಷ್ಟೋ ಮಿಲಿ ಮೀಟರ್ ಅಣೆಕಟ್ಟುಗಳೆಲ್ಲ ತುಂಬಿದೆ ಎಂಬ ಅಂಕಿಅಂಶ ಹೊಟ್ಟೆ ತುಂಬಿಸುವುದಿಲ್ಲ.
ಚೆನ್ನೈ ನಗರ ಅಭಿವೃದ್ಧಿ ಮಾಡುವಾಗ ಸರಿಯಾದ ಮುಂದಾಲೋಚನೆ ಇಲ್ಲದೆ ಕಟ್ಟಡಗಳನ್ನು ಕಟ್ಟಿರುವುದೇ ಈ ಎಲ್ಲ ಅನಾಹುತಕ್ಕೆ ಕಾರಣ ಎಂದು ಒಂದು ಸಾಲಿನ ನಿರ್ಣಯ ಹೇಳಬಹುದು. ಚೆನ್ನೈ ನಗರದ ಒಳಚರಂಡಿ ಹಾಗೂ ಜಲ ಸಂಪನ್ಮೂಲ ಸಮರ್ಪಕ ಬಳಕೆ ಮಾಡಿಕೊಳ್ಳುವುದು ಹೇಗೆ ಎಂದು ಹೇಳಿಕೊಡಲು ಜನ ಸಿಕ್ಕರೂ ರೂಢಿಸಿಕೊಳ್ಳಲು ಹತ್ತಾರು ವರ್ಷಗಳೇ ಬೇಕು.

ವೆಲಾಚೇರಿ, ಪಲ್ಲಿಕರಣೈ, ಮತ್ತು ಓಲ್ಡ್ ಮಹಾಬಲಿಪುರಂ ರೋಡ್ (ಒಎಂಆರ್) ಮುಂತಾದ ಜಲಾವೃತ ಪ್ರದೇಶಗಳ ಜೊತೆ ನಗರದಲ್ಲಿ ಈ ಹಿಂದೆ ಇದ್ದ ಕೆರೆಗಳೆಲ್ಲವೂ ಈಗ ಐಟಿ ಕಾರಿಡಾರ್ ಹಾಗೂ ಅಪಾರ್ಟ್ಮೆಂಟ್ ಗಳಾಗಿ ಪರಿವರ್ತನೆಗೊಂಡಿದೆ. ಶ್ರೀಪೆರಂಬದೂರು ತನಕ ನಾಯಿಕೊಡೆಗಳಂತೆ ಹಬ್ಬಿರುವ ಅಪಾರ್ಟ್ಮೆಂಟ್ ಗಳು ನಿಮ್ಮನ್ನು ಸ್ವಾಗತಿಸುತ್ತವೆ.
ಚೆನ್ನೈನ ಜಲ ಪ್ರಳಯ ಚೆನ್ನೈ ಹಾಗೂ ಬೆಂಗಳೂರಿಗೆ ಎಚ್ಚರಿಕೆ ಗಂಟೆಯಾಗಿದೆ. ಜಲ ಸಂಪನ್ಮೂಲ ಸರಿಯಾಗಿ ಬಳಸದಿದ್ದರೆ, ಹಾಗೂ ನೀರು ಇಂಗಿಸಲು ಸರಿಯಾದ ಮಾರ್ಗ ಸಿಗದಿದ್ದರೆ ಈ ರೀತಿ ಅನಾಹುತ ಎದುರಿಸಬೇಕಾಗುತ್ತದೆ. ಕುಡಿಯುವ ನೀರು ಹಾಗೂ ಒಳಚರಂಡಿ ಪೈಪುಗಳು ಮಿಕ್ಸ್ ಆಗಿ ನೀರು ಬಳಸಲು ಯೋಗ್ಯವಲ್ಲದಂಥ ಪರಿಸ್ಥಿತಿ ಎದುರಿಸಬೇಕಾಗಿದೆ.[ಚೆನ್ನೈ ಅಣ್ತಮ್ಮಂದಿರಿಗೆ ಟ್ವಿಟ್ಟರ್ ಮಿತ್ರರಿಂದ ನೆರವು]

ರಸ್ತೆಗಳು ಹಾಳಾಗಿ ಗುಂಡಿಗಳ ನಗರವಾಗಿ ಅಪಘಾತಗಳಾಗುತ್ತಿದ್ದರೂ ಗುಂಡಿಯನ್ನು ತಾತ್ಕಾಲಿಕವಾಗಿ ಮುಚ್ಚುವ ಕಾರ್ಯ ಮಾತ್ರ ನಡೆಯುತ್ತಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳ ದಾಹಕ್ಕೆ ಕೆರೆಗಳು ಅಪಾರ್ಟ್ಮೆಂಟ್ ಗಳಾಗುತ್ತಿವೆ. ಸರ್ಕಾರ ಅಭಿವೃದ್ಧಿ ಯೋಜನೆಯಡಿಯಲ್ಲಿ ಜನರಿಂದ ತೆರಿಗೆ ಪಡೆದು ಪರಿಸರ ನಾಶಕ್ಕೆ ಮುನ್ನುಡಿ ಬರೆಯುತ್ತಿದೆ ಎಂದು ಶುದ್ಧ ಫೌಂಡೇಶನ್ ನ ನಿಶಾ ಆರೋಪಿಸಿದ್ದಾರೆ.
ಸ್ಮಾರ್ಟ್ ಸಿಟಿ, ಐಟಿ ಸಿಟಿ, ಗಾರ್ಡನ್ ಸಿಟಿ, ಹೈಟೆಕ್ ಸಿಟಿ ಏನೇ ಟ್ಯಾಗ್ ಸಿಕ್ಕರೂ ತಿನ್ನಲು ಫುಡ್ ಮಲಗಲು ಬೆಡ್ಡು, ಕುಡಿಯಲು ನೀರಿಲ್ಲದಿದ್ದರೆ ಯಾವ ನಗರವಾದರೂ ಅಷ್ಟೇ ಪರಿಸರ ನಾಶ ಮಾಡಿದರೆ ಭಸ್ಮಾಸುರನಂತೆ ನಮ್ಮ ನಾಶಕ್ಕೆ ನಾವೇ ಮುನ್ನಡಿ ಬರೆದಂತೆ ಎಂಬುದು ನೆನಪಿದ್ದರೆ ಸಾಕು. ಸರ್ಕಾರ ಏನು ಮಾಡುವುದಿಲ್ಲ. ನಾವು ಇಂದು ಪರಿಸರ ಉಳಿಸಿದರೆ, ಮೂಲ ಸೌಕರ್ಯ ವ್ಯವಸ್ಥೆ ಸುಧಾರಿಸಿದರೆ ಮಾತ್ರ ನಗರ ಉಳಿದೀತು.












Click it and Unblock the Notifications