ತಮಿಳುನಾಡಿನಲ್ಲಿ ವರುಣನ ಅರ್ಭಟ: 2-3 ದಿನ ಭಾರೀ ಮಳೆಯ ಮನ್ಸೂಚನೆ
ಚೆನ್ನೈ ನವೆಂಬರ್ 8: ಕಳೆದ ಎರಡು ದಿನಗಳಿಂದ ಚೆನ್ನೈ ಮತ್ತು ಸಮೀಪದ ಪ್ರದೇಶಗಳಲ್ಲಿ ವರುಣನ ಅರ್ಭಟ ಜೋರಾಗಿದೆ. ಹೀಗಾಗಿ ಮುಂದಿನ ಎರಡು ದಿನಗಳ ಕಾಲ ನಾಲ್ಕು ಜಿಲ್ಲೆಗಳ ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಆದೇಶ ಸೇರಿದಂತೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ. ಜೊತೆಗೆ ರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ಕರೆಸಲಾಗಿದೆ. ಭಾನುವಾರದಂದು ತಮಿಳುನಾಡಿನ 38 ಜಿಲ್ಲೆಗಳ ಪೈಕಿ 36 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಭಾರತೀಯ ಹವಾಮಾನ ಇಲಾಖೆ (IMD) ರೆಡ್ ಅಲರ್ಟ್ ಘೋಷಿಸಿದೆ.
ರಾಜ್ಯದ ರಾಜಧಾನಿ ಚೆನ್ನೈನಲ್ಲಿ 24 ಗಂಟೆಗಳಲ್ಲಿ 134.29 ಮಿಮೀ ಅತಿ ಹೆಚ್ಚು ಮಳೆ ದಾಖಲಾಗಿದೆ. ಇದರಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ಚೆನ್ನೈನ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲು ಮೂರು ಜಲಾಶಯಗಳ ಗೇಟ್ಗಳನ್ನು ತೆರೆಯಬೇಕಾಗಿದ್ದು, ಸ್ಥಳೀಯರಿಗೆ ಎಚ್ಚರಿಕೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರೊಂದಿಗೆ ರಾಜ್ಯದ ಪರಿಸ್ಥಿತಿಯ ಬಗ್ಗೆ ಮಾತನಾಡಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ಕೇಂದ್ರದ ಬೆಂಬಲದ ಭರವಸೆ ನೀಡಿದರು. ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಇದುವರೆಗೆ ರಾಜ್ಯದಲ್ಲಿ ನಾಲ್ಕು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಂಡಗಳನ್ನು ನಿಯೋಜಿಸಲಾಗಿದೆ.
ತಮಿಳುನಾಡಿನಲ್ಲಿ ಅಧಿಕ ಮಳೆ
ಭಾನುವಾರದಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಮಾತನಾಡಿ, ರಾಜ್ಯದಲ್ಲಿ ಅಕ್ಟೋಬರ್ 1 ರಿಂದ ನವೆಂಬರ್ 7 ರ ನಡುವೆ 334.64 ಮಿಮೀ ಮಳೆಯಾಗಿದೆ, ಇದು ಈಶಾನ್ಯ ಮುಂಗಾರು ಹಂಗಾಮಿನಲ್ಲಿ ಪಡೆದ ಸಾಮಾನ್ಯ ಮಳೆಗಿಂತ 44% ಹೆಚ್ಚು. ಕೊಯಮತ್ತೂರು, ತಿರುನೆಲ್ವೇಲಿ, ತಿರುವರೂರ್, ವಿಲ್ಲುಪುರಂ, ಈರೋಡ್, ಕರೂರ್, ಕಡಲೂರು, ಪುದುಕೊಟ್ಟೈ ಮತ್ತು ಪೆರಂಬಲೂರು ಸೇರಿದಂತೆ ಜಿಲ್ಲೆಗಳಲ್ಲಿ ಶೇ.60ಕ್ಕೂ ಅಧಿಕ ಮಳೆಯಾಗಿದೆ ಎಂದಿದ್ದಾರೆ.
ಭಾನುವಾರದಂದು ಚೆನ್ನೈನಲ್ಲಿ ಭಾರೀ ಮಳೆ
ಶನಿವಾರ ಬೆಳಗ್ಗೆಯಿಂದ ಚೆನ್ನೈ ಮತ್ತು ಚೆಂಗಲ್ಪೇಟ್, ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲೆಗಳ ಹಲವಾರು ಉಪನಗರಗಳಲ್ಲಿ ಮಧ್ಯಂತರ ಮಳೆಯಾಗಿದೆ. ಶನಿವಾರ ರಾತ್ರಿ ತುಂತುರು ಮಳೆ ಜೋರಾಗಿದ್ದು ರಾತ್ರಿಯಿಡೀ ಎಡೆಬಿಡದೆ ಸುರಿಯಿತು. ಇದರ ಪರಿಣಾಮವಾಗಿ 2015 ರ ಪ್ರವಾಹದ ನಂತರ ಆರು ವರ್ಷಗಳಲ್ಲಿ ಕಂಡ ಅತ್ಯಂತ ಭಾರೀ ಮಳೆಗೆ ಚೆನ್ನೈ ಸಾಕ್ಷಿಯಾಗಿದೆ. ಇದರ ಮಧ್ಯೆ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲು ಮೂರು ನಗರ ಜಲಾಶಯಗಳನ್ನು ಹಂತಹಂತವಾಗಿ ತೆರೆದಿರುವುದರಿಂದ ಅಧಿಕಾರಿಗಳು ಜನರಿಗೆ ಪ್ರಾಥಮಿಕ ಪ್ರವಾಹದ ಎಚ್ಚರಿಕೆ ನೀಡಿದ್ದಾರೆ.
ಚೆನ್ನೈನಲ್ಲಿ ಮರಗಳು ನೆಲಕ್ಕುರುಳಿವೆ, ಮನೆಗಳು ಜಲಾವೃತವಾಗಿವೆ
ಚೆನ್ನೈ ಮತ್ತು ಅದರ ಉಪನಗರಗಳಲ್ಲಿನ ಕೆಲವು ನೆರೆಹೊರೆಗಳಲ್ಲಿ ಹಲವಾರು ಮನೆಗಳಿಗೆ ಮಳೆನೀರು ನುಗ್ಗಿ 2015 ರ ಪ್ರವಾಹದ ನೆನಪುಗಳನ್ನು ಮರುಕಳಿಸಿತು. ಇದರಿಂದ ನಗರದ ಕೆಲವು ಭಾಗಗಳಿಂದ ಗಾಳಿ ತುಂಬಿದ ದೋಣಿಗಳಲ್ಲಿ ಜನರನ್ನು ಸ್ಥಳಾಂತರಿಸಬೇಕಾಯಿತು. ಮಳೆಯ ಅರ್ಭಟಕ್ಕೆ ಹಲವು ರಸ್ತೆಗಳು ಜಲಾವೃತವಾಗಿದ್ದು, ಹಲವು ಮರಗಳು ನೆಲಕ್ಕುರುಳಿವೆ. ಹೀಗಾಗಿ ನಗರದಲ್ಲಿ ಸಂಚಾರ ವ್ಯತ್ಯಯ ಉಂಟಾಗಿದೆ. ಜಲಾವೃತಗೊಂಡ ಕನಿಷ್ಠ ಆರು ಸುರಂಗಮಾರ್ಗಗಳನ್ನು ಮುಚ್ಚಲಾಗಿದೆ.
ಪರಿಹಾರ ಮತ್ತು ಪಾರುಗಾಣಿಕಾ ಕೆಲಸ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್) ನಾಲ್ಕು ತಂಡಗಳನ್ನು ಮಧುರೈ, ಚೆಂಗಲ್ಪೇಟ್ ಮತ್ತು ತಿರುವಳ್ಳೂರಿನಲ್ಲಿ ರಕ್ಷಣಾ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡಗಳನ್ನು ತಂಜಾವೂರು ಮತ್ತು ಕಡಲೂರು ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಕೊಯಮತ್ತೂರು, ತಿರುನಲ್ವೇಲಿ, ತಿರುವರೂರ್, ವಿಲ್ಲುಪುರಂ, ಈರೋಡ್, ಕರೂರ್, ಕಡಲೂರು, ಪುದುಕೊಟ್ಟೈ ಮತ್ತು ಪೆರಂಬಲೂರು ಜಿಲ್ಲೆಗಳಲ್ಲಿ 5,000ಕ್ಕೂ ಹೆಚ್ಚು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಗ್ರೇಟರ್ ಚೆನ್ನೈ ಕಾರ್ಪೊರೇಷನ್ ರಾಜಧಾನಿಯಲ್ಲಿ 160 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ. ಚೆನ್ನೈನಲ್ಲಿ ಮಳೆ ಸಂಬಂಧಿತ ದೂರುಗಳನ್ನು ಸ್ವೀಕರಿಸಲು 24 ಗಂಟೆಗಳ ಟೋಲ್-ಫ್ರೀ ಸಂಖ್ಯೆಯನ್ನು (1070) ಸ್ಥಾಪಿಸಲಾಗಿದೆ.
ಬಾಧಿತ ಪ್ರದೇಶಗಳಿಗೆ ಸಿಎಂ ಭೇಟಿ
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಭಾನುವಾರ ಚೆನ್ನೈ ಮತ್ತು ಅದರ ಉಪನಗರಗಳಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಕೊಳತ್ತೂರ್, ಸೈದಾಪೇಟ್, ಪೆರಂಬೂರ್, ಪುರಸೈವಾಲ್ಕಂ, ಕೊಸಪ್ಪೆಟ್ ಮತ್ತು ಒಟ್ಟೇರಿಗಳಿಗೆ ಭೇಟಿ ನೀಡಿ ಶಿಬಿರಗಳಲ್ಲಿ ನೆಲೆಸಿರುವ ಸಂತ್ರಸ್ತರಿಗೆ ಆಹಾರ ಮತ್ತು ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು. ಎಂಕೆ ಸ್ಟಾಲಿನ್ ಅವರು ಯಾವುದೇ ಪ್ರದೇಶ ಜಲಾವೃತವಾಗದಂತೆ ನೋಡಿಕೊಳ್ಳಲು ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪರಿಹಾರ ಶಿಬಿರಗಳಲ್ಲಿ ಕೋವಿಡ್-19 ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆಗಳನ್ನು ನೀಡಲಾಗಿದೆ.
|
ಪ್ರಧಾನಿ ಮೋದಿ ಬೆಂಬಲದ ಭರವಸೆ
ರಾಜ್ಯದ ಕೆಲವೆಡೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರೊಂದಿಗೆ ಮಾತನಾಡಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ಕೇಂದ್ರದಿಂದ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿ ಅವರು ಭರವಸೆ ನೀಡಿದರು.
ಪ್ರಧಾನಿ ಮೋದಿ ಟ್ವೀಟ್ ಮಾಡಿ, "ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ತಮಿಳುನಾಡು ಸಿಎಂ ಜೊತೆ ಮಾತನಾಡಿದ್ದಾರೆ ಮತ್ತು ಪರಿಸ್ಥಿತಿಯನ್ನು ಚರ್ಚಿಸಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ಕೇಂದ್ರದಿಂದ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರತಿಯೊಬ್ಬರ ಯೋಗಕ್ಷೇಮ ಮತ್ತು ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಬರೆದಿದ್ದಾರೆ.
ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಎಂಕೆ ಸ್ಟಾಲಿನ್, "ಧನ್ಯವಾದಗಳು ಪ್ರಧಾನಿ ಮೋದಿ. ತಮಿಳುನಾಡು ಕೋವಿಡ್ ಪರಿಹಾರಕ್ಕಾಗಿ 2020-21 ರ ರಾಜ್ಯ ವಿಪತ್ತು ಪರಿಹಾರ ನಿಧಿಯನ್ನು ಖಾಲಿ ಮಾಡಿದೆ ಎಂದು ಚರ್ಚಿಸಲಾಗಿದೆ. ಈ ಚಂಡಮಾರುತ ಋತುವಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಹಣವನ್ನು ಬಿಡುಗಡೆ ಮಾಡಲು ವಿನಂತಿಸಿದೆ" ಎಂದಿದ್ದಾರೆ.
Recommended Video
ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಭಾರೀ ಮಳೆಯ ಪರಿಣಾಮವಾಗಿ ನವೆಂಬರ್ 8 ಮತ್ತು 9 ರಂದು ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪೇಟ್ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ. ಜೊತೆಗೆ ಸಿಎಂ ಎಂಕೆ ಸ್ಟಾಲಿನ್ ದೀಪಾವಳಿಗಾಗಿ ಚೆನ್ನೈನಿಂದ ಇತರ ಸ್ಥಳಗಳಿಗೆ ಪ್ರಯಾಣಿಸಿದ ಜನರಿಗೆ ನಗರಕ್ಕೆ ಮರಳುವುದನ್ನು ಮೂರು ದಿನಗಳವರೆಗೆ ಮುಂದೂಡುವಂತೆ ಮನವಿ ಮಾಡಿದರು. ಉತ್ತರ ತಮಿಳುನಾಡಿನಲ್ಲಿ ಚಂಡಮಾರುತದ ಬಗ್ಗೆ IMD ಎಚ್ಚರಿಕೆ ನೀಡಿದೆ ಮತ್ತು ಮುಂದಿನ ಎರಡು ಮೂರು ದಿನಗಳ ಕಾಲ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದೆ.