Get Updates
Get notified of breaking news, exclusive insights, and must-see stories!

ಜೈಲಿನಿಂದ ಹೊರಬಂದ ಬಳಿಕ ಎಐಎಡಿಎಂಕೆಗೆ ಮರಳುತ್ತಾರಾ ಶಶಿಕಲಾ?: ಪಳನಿಸ್ವಾಮಿ ಹೇಳಿದ್ದೇನು?

ಚೆನ್ನೈ, ಜನವರಿ 19: ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿರುವ ಎಐಎಡಿಎಂಕೆಯ ಮಾಜಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಜೈಲಿನಿಂದ ಬಿಡುಗಡೆಯಾಗುತ್ತಿರುವುದು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಎಐಎಡಿಎಂಕೆ ಮತ್ತು ತಮಿಳುನಾಡಿನ ರಾಜಕಾರಣದಲ್ಲಿ ಬದಲಾವಣೆಗಳು ಆಗಲಿವೆ ಎಂದು ನಿರೀಕ್ಷಿಸಲಾಗಿದೆ. ಆದರೆ ಉಚ್ಚಾಟಿತ ಶಶಿಕಲಾ ಅವರು ಎಐಎಡಿಎಂಕೆಗೆ ಮರಳುವ ಅವಕಾಶವೇ ಇಲ್ಲ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಹೇಳಿದ್ದಾರೆ.

ದೆಹಲಿಯಲ್ಲಿ ಸೋಮವಾರ ಗೃಹ ಸಚಿವ ಅಮಿತ್ ಶಾ ಹಾಗೂ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಪಳನಿಸ್ವಾಮಿ, ಶಶಿಕಲಾ ಈಗ ಪಕ್ಷದಲ್ಲಿಲ್ಲ. ಅವರು ಎಐಎಡಿಎಂಕೆಗೆ ಮರಳುವ ಅವಕಾಶವಿಲ್ಲ ಎಂದಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದು, ತಮಿಳುನಾಡಿಗೆ ಹಿಂದಿರುಗಲಿದ್ದಾರೆ. ಶೀಘ್ರದಲ್ಲಿಯೇ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಅವರು ಎಐಎಡಿಎಂಕೆಗೆ ಮರಳುತ್ತಾರೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ.

ಶಶಿಕಲಾ ಬರಲು ಅವಕಾಶವಿಲ್ಲ

ಶಶಿಕಲಾ ಬರಲು ಅವಕಾಶವಿಲ್ಲ

'ನಾನು ಶೇ 100ರಷ್ಟು ಹೇಳಬಲ್ಲೆ. ಶಶಿಕಲಾ ಅವರು ಎಐಎಡಿಎಂಕೆಗೆ ಮರಳಲು ಯಾವುದೇ ಅವಕಾಶವಿಲ್ಲ. ಶಶಿಕಲಾ ಅವರ ಹೆಚ್ಚಿನ ಬೆಂಬಲಿಗರು ಎಐಎಡಿಎಂಕೆಗೆ ವಾಪಸ್ ಬಂದಿದ್ದಾರೆ. ಆದರೆ ಈಗ ಅವರ ಬಳಗದಲ್ಲಿ ಕೆಲವೇ ಜನರು ಮಾತ್ರ ಉಳಿದಿದ್ದಾರೆ' ಎಂದು ಪಳನಿಸ್ವಾಮಿ ಹೇಳಿದ್ದಾರೆ.

ಜಯಲಲಿತಾ ಕೂಡ ದೂರ ಇರಿಸಿದ್ದರು

ಜಯಲಲಿತಾ ಕೂಡ ದೂರ ಇರಿಸಿದ್ದರು

'ಅಮ್ಮಾ (ಜೆ. ಜಯಲಲಿತಾ) ಕೂಡ ಶಶಿಕಲಾ ಅವರನ್ನು ಪಕ್ಷದಿಂದ ದೂರದಲ್ಲಿಯೇ ಇರಿಸಿದ್ದರು. ಅಮ್ಮಾ ಅವರ ಮರಣದ ಬಳಿಕವಷ್ಟೇ ಶಶಿಕಲಾ ಪಕ್ಷಕ್ಕೆ ಪ್ರವೇಶಿಸಿದ್ದರು. ಅಮ್ಮಾ ಜೀವಂತ ಇದ್ದಾಗ ಅವರು ಎಐಎಡಿಎಂಕೆಯಲ್ಲಿ ಇರಲಿಲ್ಲ' ಎಂದಿದ್ದಾರೆ. ವಿಶೇಷವೆಂದರೆ ಒಂದು ಕಾಲದಲ್ಲಿ ಪಳನಿಸ್ವಾಮಿ ಅವರನ್ನು ಶಶಿಕಲಾ ಅವರ ಅತ್ಯಂತ ನಿಷ್ಠಾವಂತ ಅನುಯಾಯಿ ಎಂದೇ ಪರಿಗಣಿಸಲಾಗಿತ್ತು.

ದಿನಕರನ್ ಜತೆ ಬಿಜೆಪಿ ಮಾತುಕತೆ

ದಿನಕರನ್ ಜತೆ ಬಿಜೆಪಿ ಮಾತುಕತೆ

ಶಶಿಕಲಾ ಅವರ ಸೋದರಳಿಯ ಟಿಟಿವಿ ದಿನಕರನ್ ಅವರೊಂದಿಗೆ ಬಿಜೆಪಿ ಸಂಪರ್ಕದಲ್ಲಿದ್ದು, ಶಶಿಕಲಾ ರಾಜಕೀಯ ಭವಿಷ್ಯದ ಬಗ್ಗೆ ಸಮಾಲೋಚನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಎಐಎಡಿಎಂಕೆಯಿಂದ ಪ್ರತ್ಯೇಕವಾಗಿ ದಿನಕರನ್ ಸ್ಥಾಪಿಸಿದ್ದ ಅಮ್ಮಾ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಈ ಬಾರಿ ಚುನಾವಣೆ ವೇಳೆ ಎಐಎಡಿಎಂಕೆ ಜತೆ ಸೇರಿಕೊಳ್ಳುವ ಬಗ್ಗೆ ಊಹಾಪೋಹ ಹರಿದಾಡುತ್ತಿದೆ.

ಪಳನಿಸ್ವಾಮಿ ಭಯವೇನು?

ಪಳನಿಸ್ವಾಮಿ ಭಯವೇನು?

ದಿನಕರನ್ ಕೂಡ ಎಐಎಡಿಎಂಕೆ ಸೇರ್ಪಡೆಗೆ ಆಸಕ್ತಿ ತೋರಿಸಿದ್ದಾರೆ. ಇದಕ್ಕೆ ಬಿಜೆಪಿ ಬೆಂಬಲ ನೀಡುತ್ತಿದೆ. ದಿನಕರನ್ ಸೇರ್ಪಡೆಯಿಂದ ಎಐಎಡಿಎಂಕೆ-ಬಿಜೆಪಿ ಮೈತ್ರಿ ಬಲವಾಗುತ್ತದೆ ಎನ್ನುವುದು ಅದರ ಉದ್ದೇಶ. ಆದರೆ ಎಐಎಡಿಎಂಕೆ ಒಳಗೆ ಶಶಿಕಲಾ ಅವರನ್ನು ಮತ್ತೆ ಬಿಟ್ಟುಕೊಂಡರೆ ಪಕ್ಷದ ಸಂಪೂರ್ಣ ಹಿಡಿತವನ್ನು ಅವರು ತೆಗೆದುಕೊಳ್ಳುತ್ತಾರೆ ಎನ್ನುವ ಭಯ ಪಳನಿಸ್ವಾಮಿ ಅವರಲ್ಲಿ ಮೂಡಿದೆ.

ದಿನಕರನ್ ಪ್ರಭಾವಳಿ

ದಿನಕರನ್ ಪ್ರಭಾವಳಿ

ದಿನಕರನ್ ಅವರ ಪಕ್ಷ ಸೇರ್ಪಡೆಯು ದಕ್ಷಿಣ ಭಾಗದ ಜಿಲ್ಲೆಗಳು ಮತ್ತು ಮುಖಜಭೂಮಿ ಪ್ರದೇಶಗಳಲ್ಲಿನ ಅವರ ಪ್ರಭಾವ ಮೈತ್ರಿಕೂಟಕ್ಕೆ ನೆರವಾಗಲಿದೆ ಎಂದು ಎಐಎಡಿಎಂಕೆಯ ಒಂದು ವರ್ಗ ಮತ್ತು ಬಿಜೆಪಿ ಅಭಿಪ್ರಾಯಪಟ್ಟಿದೆ. ಕಳೆದ ಚುನಾವಣೆಯಲ್ಲಿ ಅವರ ಎಎಂಎಂಕೆ ಶೇ 4ರಷ್ಟು ಮತಗಳನ್ನು ಪಡೆದುಕೊಂಡಿತ್ತು.

ವಿಲೀನ ಸಾಧ್ಯತೆ ಇದೆ

ವಿಲೀನ ಸಾಧ್ಯತೆ ಇದೆ

ಶಶಿಕಲಾ ಮತ್ತು ದಿನಕರನ್ ಅವರನ್ನು ಎಐಎಡಿಎಂಕೆಗೆ ಮರಳಿ ಸೇರಿಸಿಕೊಳ್ಳಲಾಗುತ್ತದೆ ಎಂಬ ವರದಿಗಳ ವಿರುದ್ಧ ಪಳನಿಸ್ವಾಮಿ ಹೇಳಿಕೆ ನೀಡಿದ್ದಾರೆ. ಆದರೆ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟದೊಂದಿಗೆ ಎಎಂಎಂಕೆ ಸೇರಿಕೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಚುನಾವಣೆಯಲ್ಲಿ ಪಕ್ಷ ಗೆದ್ದರೆ, ಈಗ ತಮ್ಮ ಬೆಂಬಲಕ್ಕೆ ಇರುವ ಶಶಿಕಲಾ ಬೆಂಬಲಿಗರು ಆಕೆಯತ್ತ ಪುನಃ ತಮ್ಮ ನಿಷ್ಠೆ ಬದಲಿಸಬಹುದು ಎನ್ನುವ ಆತಂಕ ಅವರಲ್ಲಿದೆ ಎಂದು ಮೂಲಗಳು ತಿಳಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+