1 ವರ್ಷದ ಪುಟಾಣಿ ಬದುಕುಳಿಯಲು ಸಹಾಯ ಬೇಕಿದೆ
ಬೆಂಗಳೂರು, ಅಕ್ಟೋಬರ್ 26 : ಮಾನವೀಯತೆಗೆ ಭಾಷೆಯ ಗಡಿ, ಜಾತಿಮತದ ಬೇಲಿ ಯಾವುದೂ ಇರುವುದಿಲ್ಲ. ಎಲ್ಲವನ್ನೂ ಮೀರಿದ ಮಾನವೀಯತೆಯೊಂದೇ ಆ 1 ವರ್ಷದ ಪುಟ್ಟಪುಟಾಣಿಯನ್ನು ಬದುಕಿಸಲು ಸಾಧ್ಯ.
1 ವರ್ಷದ ಮಗು ಗಗನ್ ಯಕೃತ್ತಿಗೆ ಸಂಬಂಧಿಸಿದ ತೊಂದರೆಯಿಂದ ಬಳಲುತ್ತಿದ್ದು, ಇನ್ನು ಕೇವಲ 1 ವಾರದಲ್ಲಿ ಲಿವರ್ ಟ್ರಾನ್ಸ್ ಪ್ಲಾಂಟ್ (ಯಕೃತ್ತು ಕಸಿ) ಮಾಡದಿದ್ದರೆ ಬದುಕುಳಿಯುವುದು ಬಲು ಕಷ್ಟ ಎಂದಿದ್ದಾರೆ ವೈದ್ಯರು.
ಗಗನ್ ತಂದೆಯಾದ ರವಿಯವರು ತಮ್ಮ ಲಿವರ್ ನ ಒಂದು ಭಾಗವನ್ನು ಟ್ರಾನ್ಸ್ ಪ್ಲಾಂಟ್ ಮಾಡಲು ಮುಂದೆ ಬಂದಿದ್ದಾರೆ. ಇದು ಮಗುವಿಗೆ ಸರಿ ಹೊಂದುತ್ತದಾ ಇತ್ಯಾದಿಗಳನ್ನು ಪರಿಶೀಲಿಸಿ ಕಸಿ ಮಾಡಲು ಕನಿಷ್ಠವೆಂದರೂ 20 ಲಕ್ಷ ರುಪಾಯಿ ತಗಲುವುದಾಗಿ ಕಂಚಿ ಕಾಮಕೋಟಿ ಚೈಲ್ಡ್ ಟ್ರಸ್ಟ್ ಆಸ್ಪತ್ರೆ ವಿವರ ನೀಡಿದೆ.
ಇಷ್ಟೊಂದು ಭಾರೀ ಮೊತ್ತ ಭರಿಸಲು ಮಗುವಿನ ತಂದೆಗೆ ಅಸಾಧ್ಯವಿರುವುದರಿಂದ ದಾನಿಗಳ ಮುಂದೆ ಅವರು ಕೈಚಾಚಿದ್ದಾರೆ. ಆನ್ ಲೈನ್ ಮೂಲಕ ಈಗಾಗಲೆ 7.6 ಲಕ್ಷ ರುಪಾಯಿಯನ್ನು ಸಂಗ್ರಹಿಸಲಾಗಿದೆ. ಮಗುವಿನ ಚಿಕಿತ್ಸೆಗೆ ಇನ್ನು ಕೇವಲ 13 ದಿನಗಳು ಮಾತ್ರ ಬಾಕಿಯಿವೆ.
ದೇಣಿಗೆ ಸಂಗ್ರಹಿಸುವ ಜವಾಬ್ದಾರಿಯನ್ನು SAIL (Save An Indidividual's Life) ಹೊತ್ತುಕೊಂಡಿದೆ. ಆಸಕ್ತರು, ಮಾನವೀಯತೆಯ ಮುಖವುಳ್ಳವರು ದಾಖಲೆಗಳನ್ನು ಪರಿಶೀಲಿಸಿ ತಮಗಿಷ್ಟವಾದ ಮೊತ್ತ ದೇಣಿಗೆ ನೀಡಬಹುದು.