ತಮಿಳುನಾಡು ಜನರಿಗೆ ಕಮಲ ಹಾಸನ್ ಕೊಟ್ಟ ಭರವಸೆಗಳು...
ಚೆನ್ನೈ, ಜನವರಿ 09: ಮುಂಬರುವ ತಮಿಳುನಾಡು ವಿಧಾನ ಸಭೆ ಚುನಾವಣೆ 2021ಕ್ಕೆ ಸಜ್ಜಾಗುತ್ತಿರುವ ಮಕ್ಕಳ ನೀದಿಮಯ್ಯಂ ಮುಖಂಡ, ನಟ ಕಮಲ ಹಾಸನ್ ಶನಿವಾರ ಸೇಲಂನಲ್ಲಿ ಭರ್ಜರಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಪ್ರಚಾರ ಸಂದರ್ಭ ಸಾವಿರಾರು ಜನರು ಜಮಾಯಿಸಿದ್ದು, ಕಮಲ ಹಾಸನ್ ಪರ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭ ಮಾತನಾಡಿದ ಕಮಲ ಹಾಸನ್, "ಜನರು ನನಗೆ ಇಷ್ಟೊಂದು ಮನ್ನಣೆ, ಪ್ರೀತಿ ನೀಡಿದ್ದಾರೆ. ಅವರಿಗೆ ಎಂದಿಗೂ ನಾನು ಆಭಾರಿ. ಆದರೆ ಈ ಜನರು ನನ್ನ ಸಿನಿಮಾಗಳಲ್ಲಿನ ಪಾತ್ರ ನೋಡಿ ಇಲ್ಲಿಗೆ ಬಂದಿಲ್ಲ. ನನ್ನ ರಾಜಕೀಯದ ಕಾರಣವಾಗಿ ಬೆಂಬಲ ನೀಡಲು ಸೇರಿದ್ದಾರೆ. ಜನ ನನ್ನನ್ನು ಅವರ ಮನೆಯವರಂತೆ ನೋಡುತ್ತಿದ್ದಾರೆ" ಎಂದು ಹೇಳಿದರು. ಮುಂದೆ ಓದಿ...
ಎಐಎಡಿಎಂಕೆ ವಿರುದ್ಧ ಲಂಚದ ಪಟ್ಟಿ ಬಿಡುಗಡೆ ಮಾಡಿದ ಕಮಲ್ ಹಾಸನ್
"ಬೇರೆಯವರಂತೆ ನಾನಾಗುವುದಿಲ್ಲ"
ನಾನು ಒಳ್ಳೆಯ ಉದ್ದೇಶದೊಂದಿಗೆ ರಾಜಕೀಯಕ್ಕೆ ಬಂದಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ಹೀಗಾಗಿ ನನಗೆ ಬೆಂಬಲ ನೀಡಲು ಸೇರಿದ್ದಾರೆ. ನಾನೂ ಬೇರೆಯವರಂತೆ ಆಗಬಾರದು ಎಂದು ಅವರು ಬಯಸುತ್ತಿದ್ದಾರೆ. ಅವರ ಬಯಕೆಯಂತೆಯೇ ನಾನು ನಡೆಯುತ್ತೇನೆ. ಜನರೇ ನನ್ನ ಶಕ್ತಿ ಎಂದು ಕಮಲ ಹಾಸನ್ ಹೇಳಿದ್ದಾರೆ.
"ಡಿಎಂಕೆ, ಎಐಎಡಿಎಂಕೆ ಲೂಟಿಕೋರರು"
ತಮಿಳುನಾಡು ಸರ್ಕಾರಕ್ಕೆ ಜನರು ನನ್ನನ್ನು ಈ ರೀತಿ ಸ್ವಾಗತಿಸಿರುವುದು ಇಷ್ಟವಾಗುತ್ತಿಲ್ಲ. ಇದೇ ಕಾರಣಕ್ಕೆ ನನ್ನ ಕಾರ್ಯಕ್ರಮಕ್ಕೆ ಅಡ್ಡಿ ತರಲು ಕೆಲವು ಕಡೆ ವಿದ್ಯುತ್ ಕಡಿತಗೊಳಿಸಿದ್ದಾರೆ ಎಂದು ದೂರಿದರು. ಆದರೆ ಜನರ ಕಲ್ಯಾಣವಷ್ಟೇ ನನ್ನ ಸಿದ್ಧಾಂತ. ಡಿಎಂಕೆ, ಎಐಎಡಿಎಂಕೆ ಲೂಟಿಕೋರರು. ದ್ರಾವಿಡ ಆಲೋಚನೆಗಳಿಗೆ ನಾನು ವಿರೋಧಿಯಲ್ಲ. ಪ್ರತಿಯೊಂದರಿಂದಲೂ ಒಳ್ಳೆಯದನ್ನು ತೆಗೆದುಕೊಳ್ಳುತ್ತೇನೆ. ಹೀಗಾಗಿಯೇ ನಾನು ಮಧ್ಯಸ್ಥ ಎಂದು ಹೇಳಿಕೊಳ್ಳಲು ಬಯಸುತ್ತೇನೆ. ಡಿಎಂಕೆ., ಎಐಎಡಿಎಂಕೆಯಿಂದಲೂ ಒಳ್ಳೆ ಅಂಶಗಳನ್ನು ಪಡೆದುಕೊಳ್ಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಆದರೆ ಭ್ರಷ್ಟಾಚಾರವನ್ನು ಎಂದಿಗೂ ಅನುಕರಿಸುವುದಿಲ್ಲ ಎಂದಿದ್ದಾರೆ.
ಎಂಎನ್ಎಂ ಕಡೆಗೆ ಜನರ ಒಲವು: ಕಮಲ ಹಾಸನ್ ವಿಶ್ವಾಸ
ತಮಿಳುನಾಡು ಜನರಿಗೆ ಕಮಲ ಹಾಸನ್ ಭರವಸೆಗಳು...
ನಾನು ಗೆದ್ದು ಅಧಿಕಾರಕ್ಕೆ ಬಂದರೆ ಉಚಿತ ಲ್ಯಾಪ್ ಟಾಪ್ ಗಳನ್ನು ನೀಡುತ್ತೇನೆ. ಇದು ಈಗಿನ ಅವಶ್ಯಕತೆಯಾಗಿದೆ ಎಂದು ಹೇಳಿದರು. ತಮಿಳುನಾಡಿನ ಯಾವುದೇ ಮೂಲೆಯಲ್ಲಿಯೂ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇನೆ. ಇದಕ್ಕೆಂದು ಅಧಿಕಾರಿಗಳು, ಪರಿಸರತಜ್ಞರ ತಂಡ ನಮ್ಮ ಪಕ್ಷದಲ್ಲಿದೆ. ತಮಿಳುನಾಡು ವ್ಯವಸ್ಥೆಯನ್ನು ಶುದ್ಧ ಮಾಡುವ ಬಯಕೆಯಿದೆ. ಆದರೆ ಕೆಲವರು ಅಭಿವೃದ್ಧಿಗೆ ಬಹು ದೊಡ್ಡ ಅಡ್ಡಿಯಾಗಿದ್ದಾರೆ" ಎಂದು ಹೇಳಿದರು.
"ಮೋದಿ ಸರ್ಕಾರದ ಮೇಲೆ ಕೋಪವಿದೆ"
ಮೋದಿ ಸರ್ಕಾರ ರೈತರ ಸಮಸ್ಯೆಗಳನ್ನು ಪರಿಗಣಿಸುತ್ತಿಲ್ಲ. ಈ ವಿಷಯದಲ್ಲಿ ನನಗೆ ಕೋಪವಿದೆ. ರೈತರು ನಮ್ಮ ಆರ್ಥಿಕತೆಯ ಮುಖ್ಯ ಭಾಗ. ಅವರನ್ನು ಅಲ್ಲಗಳೆಯುವಂತಿಲ್ಲ. ನಿಮ್ಮ ನೀತಿಗಳೇನೇ ಇದ್ದರೂ ರೈತರನ್ನು ಹೊರತುಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇದೇ ಸಂದರ್ಭ ನಟ ರಜನಿಕಾಂತ್ ರಾಜಕೀಯದಿಂದ ಹಿಂದೆ ಸರಿದ ಕುರಿತು ಪ್ರಸ್ತಾಪಿಸಿ, ರಜನಿಕಾಂತ್ ಅಭಿಮಾನಿಗಳಂತೆ ನನಗೂ ಅವರು ರಾಜಕೀಯದಿಂದ ಹಿಂದೆ ಸರಿದಿರುವುದು ಬೇಸರ ತಂದಿದೆ. ಆದರೆ ಆರೋಗ್ಯ ಕಾರಣದಿಂದ ಅನಿವಾರ್ಯವಾಗಿದೆ ಎಂದಿದಾರೆ.