ಡಿಎಂಕೆ ಸೇರಿದ ಟಿಟಿವಿ ದಿನಕರನ್ ಆಪ್ತ ತಮಿಳ್ ಸೆಲ್ವನ್
ಚೆನ್ನೈ, ಜೂನ್ 28: ಎಎಂಎಂಕೆ ನಾಯಕ ಟಿಟಿವಿ ದಿನಕರನ್ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದ ಕೆಲ ದಿನಗಳಲ್ಲೇ ದಿನಕರನ್ ಅವರ ಆಪ್ತ ತಂಗ ತಮಿಳ್ ಸೆಲ್ವನ್ ಅವರು ಪಕ್ಷವನ್ನು ತೊರೆದಿದ್ದಾರೆ. ಶುಕ್ರವಾರದಂದು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರ ಸಮ್ಮುಖದಲ್ಲಿ ಡಿಎಂಕೆ ಸೇರಿದ್ದಾರೆ.
ಎಐಎಡಿಎಂಕೆಯ ಬಂಡಾಯ ಬಣದಲ್ಲಿದ್ದ ದಿನಕರನ್ ಸ್ಥಾಪಿಸಿದ ಅಮ್ಮ ಮಕ್ಕಲ್ ಮುನ್ನೇತ್ರ ಕಳಗಮ್(ಎಎಂಎಂಕೆ) ಪಕ್ಷದಲ್ಲಿ ಟಾಪ್ 2ನೇ ಸ್ಥಾನದಲ್ಲಿದ್ದ ತಮಿಳ್ ಸೆಲ್ವನ್ ಅವರು ಡಿಎಂಕೆ ಸೇರಿದ ಎರಡನೇ ಪ್ರಮುಖ ನಾಯಕ ಎನಿಸಿದ್ದಾರೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಎಐಎಡಿಎಂಕೆ ಹಿರಿಯ ನಾಯಕ, ಮೀನುಗಾರಿಕೆ ಸಚಿವ ಡಿ ಜಯಕುಮಾರ್, 'ತಮಿಳ್ ಸೆಲ್ವನ್ ಅವರು ಆಡಳಿತಾರೂಢ ಪಕ್ಷ(ಎಐಎಡಿಎಂಕೆ) ಸೇರಿದ್ದರೆ ಎಲ್ಲಾ ಕಾಲಕ್ಕೂ ಹೀರೋ ಆಗಿರಬಹುದಾಗಿತ್ತು. ಆದರೆ, ಈಗ ಒಂದು ದಿನ ಹೀರೋ ಆಗಿದ್ದಾರೆ, ನಾಳೆ ಜೀರೋ ಆಗುತ್ತಾರೆ' ಎಂದಿದ್ದಾರೆ.

ತಮಿಳ್ ಸೆಲ್ವನ್ ಗೂ ಮೊದಲು ಡಿಎಂಕೆ ಸೇರಿದ್ದ ವಿ ಸೆಂಥಿಲ್ ಬಾಲಾಜಿ ಅವರು ಅವಕುರಚ್ಚಿ ಉಪ ಚುನಾವಣೆಯಲ್ಲಿ ಡಿಎಂಕೆ ಟಿಕೆಟ್ ನಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಲೋಕಸಭೆ ಚುನಾವಣೆ 2019ರಲ್ಲಿ 38 ಸ್ಥಾನಗಳ ಪೈಕಿ ಡಿಎಂಕೆ 37 ಸ್ಥಾನ ಗಳಿಸಿದರೆ, ಉಪ ಚುನಾವಣೆಯಲ್ಲಿ 13 ಸ್ಥಾನಗಳಿಸಿತ್ತು.

2016ರಲ್ಲಿ ಜೆ ಜಯಲಲಿತಾ ಅವರು ಮೃತರಾದ ಬಳಿಕ ಎಐಎಡಿಎಂಕೆ ಒಡೆದ ಮನೆಯಾಗಿದ್ದು, ಸಮರ್ಥ ನಾಯಕತ್ವದ ಕೊರತೆ ಅನುಭವಿಸಿತು. ಬಿಜೆಪಿ ಸಂಪೂರ್ಣ ಹಿಡಿತ ಸಾಧಿಸಿತು, ಹೀಗಾಗಿ ಎಐಎಡಿಎಂಕೆ ಸೇರಲಿಲ್ಲ. ಸ್ಟಾಲಿನ್ ಅವರ ನಾಯಕತ್ವಕ್ಕೆ ಬೆಂಬಲ ನೀಡಲು ಡಿಎಂಕೆ ಸೇರಿದೆ ಎಂದು ತಮಿಳ್ ಸೆಲ್ವನ್ ಹೇಳಿದ್ದಾರೆ. ತಮಿಳ್ ಸೆಲ್ವನ್ ಜೊತೆಗೆ ನೂರಾರು ಮಂದಿ ಎಎಂಎಂಕೆ ಕಾರ್ಯಕರ್ತರು ಕೂಡಾ ಡಿಎಂಕೆ ಸೇರಿದ್ದಾರೆ.(ಪಿಟಿಐ)












Click it and Unblock the Notifications