ತ.ನಾಡು ಕಡಲ ಪ್ರದೇಶಕ್ಕೆ 'ಗಜ' ಚಂಡಮಾರುತ; ಸನ್ನದ್ಧ ಸ್ಥಿತಿಯಲ್ಲಿ ಸಾವಿರಾರು ಮಂದಿ
'ಗಜ' ಚಂಡಮಾರುತವು ಗುರುವಾರ ಸಂಜೆ ಅಥವಾ ರಾತ್ರಿ ವೇಳೆಗೆ ದಕ್ಷಿಣ ತಮಿಳುನಾಡಿನ ಕಡಲು ಪ್ರದೇಶಕ್ಕೆ ಅಪ್ಪಳಿಸಬಹುದು ಎಂಬ ನಿರೀಕ್ಷೆಯಲ್ಲಿ ಸಾವಿರಾರು ಮಂದಿ ಸಿಬ್ಬಂದಿಯನ್ನು ಪರಿಹಾರ ಕಾರ್ಯಾಚರಣೆಗಾಗಿ ಸಿದ್ಧಗೊಳಿಸಿದ್ದು, 26 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಹೀಗೆ ಸ್ಥಳಾಂತರ ಮಾಡಿದವರನ್ನು 164 ಶಿಬಿರಗಳಲ್ಲಿ ಇರಿಸಲಾಗಿದೆ.
ಚೆನ್ನೈನಲ್ಲಿರುವ ಹವಾಮಾನ ಇಲಾಖೆಯವರು ಗುರುವಾರ ಸಂಜೆ ನೀಡಿದ ಮಾಹಿತಿ ಪ್ರಕಾರ, ಇನ್ನ್ನೆರಡು ಗಂಟೆ ಅವಧಿಯಲ್ಲಿ 'ಗಜ' ಚಂಡಮಾರುತವು ಇನ್ನೆರಡು ಗಂಟೆಯಲ್ಲಿ ತಮಿಳುನಾಡು ಕಡಲ ತೀರವನ್ನು ಅಪ್ಪಳಿಸಲಿದೆ ಎಂದು ತಿಳಿಸಿದ್ದರು.
ಇನ್ನು ತಮಿಳುನಾಡಿನ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಟ್ವೀಟ್ ಮಾಡಿ, ಗುರುವಾರ ರಾತ್ರಿ ಎಂಟರಿಂದ ಹನ್ನೊಂದು ಗಂಟೆ ಮಧ್ಯ ನಾಗಪಟ್ಟಿಣಂ ಜಿಲ್ಲೆಗೆ 'ಗಜ' ಚಂಡಮಾರುತವು ಅಪ್ಪಳಿಸಬಹುದು. ಆ ವೇಳೆಗೆ ಗಂಟೆಗೆ ನೂರು ಕಿ.ಮೀ ವೇಗದಲ್ಲಿ ಗಾಳಿ ಬೀಶಿ, ಭಾರೀ ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಕಚೇರಿಯಿಂದ ತಿಳಿಸಲಾಗಿದೆ.

ನಾಗಪಟ್ಟಿಣಂ ಜಿಲ್ಲೆ ಅದರ ಸುತ್ತಮುತ್ತಲ ಪ್ರದೇಶಗಳಾದ ಕಾರೈಕಲ್ ಸೇರಿದಂತೆ ಇತರೆಡೆಗಳಲ್ಲಿ ಭಾರೀ ಮಳೆ ಈಗಾಗಲೇ ಆಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಗುರುವಾರ ಸಂಜೆಯಿಂದಲೇ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.
30 ಸಾವಿರ ಮಂದಿ ರಕ್ಷಣಾ ಸಿಬ್ಬಂದಿ, 931 ಪರಿಹಾರ ರಕ್ಷಣಾ ವಾಹನಗಳು, 400 ಅಂಬುಲೆನ್ಸ್ ಅನ್ನು ಕಡಲ ಭಾಗದಲ್ಲಿ ಇರುವ ಏಳು ಜಿಲ್ಲೆಗಳಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ನಾಗಪಟ್ಟಿಣಂನಲ್ಲಿ, ತಜಾವೂರ್, ಪುದುಕೋಟೈ, ತಿರುವರೂರ್, ಕುಡಲೂರ್ ನ ತಗ್ಗು ಪ್ರದೇಶದಲ್ಲಿ ವಾಸಿಸುವ 14000 ಮಂದಿಯನ್ನು ಬುಧವಾರವೇ ಸ್ಥಳಾಂತರ ಮಾಡಲಾಗಿದೆ.

ವಿಶಾಖಪಟ್ಟಣದಿಂದ ನಾಗಪಟ್ಟಿಣಂಗೆ ಆಹಾರ ಹಾಗೂ ವಿವಿಧ ವಸ್ತುಗಳ ಜತೆಗೆ ಹೆಲಿಕಾಪ್ಟರ್ ಗಳು ಕೂಡ ತಲುಪಿವೆ. ಚಾಲಕರು, ಹೆಲಿಕಾಪ್ಟರ್ ಗಳು ಹಾಗೂ ದೋಣಿಗಳ ಜತೆಗೆ ಸಜ್ಜಾಗಿರುವ ಎರಡು ನೌಕಾ ಸೇನೆ ಹಡಗು ಕೂಡ ಸ್ಥಳದಲ್ಲಿದ್ದು, ಅಗತ್ಯ ಪರಿಹಾರ ಕಾರ್ಯ ಕೈಗೊಳ್ಳಲು ಸನ್ನದ್ಧ ಸ್ಥಿತಿಯಲ್ಲಿದೆ.

ನಾಗಪಟ್ಟಿಣಂ, ಕುಡಲೂರು, ಪುದುಕೋಟೈ, ತಿರುವರೂರ್, ರಾಮನಾಥಪುರಂ ಹಾಗೂ ತಂಜಾವೂರ್ ಜಿಲ್ಲೆಗಳಲ್ಲಿ ಶುಕ್ರವಾರ ಶಾಲೆಗಳಿಗೆ ರಜಾ ಘೋಷಣೆ ಮಾಡಲಾಗಿದೆ.












Click it and Unblock the Notifications