ನಮ್ ಬೇಕರಿಯಲ್ಲಿ ಮುಸ್ಲಿಮರಿಲ್ಲ ಎಂದು ಪೋಸ್ಟ್ ಹಾಕಿದ್ದಕ್ಕೆ ಅರೆಸ್ಟ್!
ನವದೆಹಲಿ, ಮೇ.10: ನಮ್ಮ ಬೇಕರಿಯಲ್ಲಿ ಎಲ್ಲ ತಿನಿಸನ್ನು ಜೈನರೇ ತಯಾರಿಸುತ್ತಾರೆ ಹಾಗೂ ನಮ್ಮ ಬೇಕರಿಯಲ್ಲಿ ಮುಸ್ಲಿಂ ಧರ್ಮದ ಯಾವುದೇ ಕಾರ್ಮಿಕರಿಲ್ಲ. ಚೆನ್ನೈನಲ್ಲಿರುವ ಬೇಕರಿಯ ಪಾರ್ಸಲ್ ಬಾಕ್ಸ್ ಗಳಲ್ಲಿ ಈ ರೀತಿ ಬರೆಸಿದ ಹಿನ್ನೆಲೆ ಬೇಕರಿ ಮಾಲೀಕರನ್ನು ಬಂಧಿಸಲಾಗಿದೆ.
ಚೆನ್ನೈ ಟಿ.ನಗರ್ ಪ್ರದೇಶದಲ್ಲಿರುವ ಜೈನ್ ಬೇಕರಿ ಮಾಲೀಕರು ವಾಟ್ಸಾಪ್ ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟ್ ನಲ್ಲಿ ನಮ್ಮ ಬೇಕರಿಯಲ್ಲಿ ಆರ್ಡರ್ ಮಾಡಿದ ತಿನಿಸುಗಳನ್ನೆಲ್ಲ ಜೈನರೇ ತಯಾರಿಸುತ್ತಾರೆ. ನಮ್ಮ ಬೇಕರಿಯಲ್ಲಿ ಮುಸ್ಲಿಂ ಕಾರ್ಮಿಕರು ಕೆಲಸ ಮಾಡುವುದಿಲ್ಲ ಎಂದು ಬರೆಸಲಾಗಿದೆ.
Video: 698 ಭಾರತೀಯರ ಕರೆತಂದ ನೌಕಾಪಡೆ ಬಗ್ಗೆ ಗರ್ಭಿಣಿ ಹೇಳಿದ್ದೇನು?
ಜೈನ್ ಬೇಕರಿ ಮಾಲೀಕ ಶೇರ್ ಮಾಡಿದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ಬೇಕರಿ ಮಾಲೀಕ ಪ್ರಶಾಂತ್ ರನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 153, 153ಎ, 505, ಹಾಗೂ 295ಎ ಅಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಧಾರ್ಮಿಕ ವದಂತಿ, ಸುಳ್ಳು ಆರೋಪ:
ನೊವೆಲ್ ಕೊರೊನಾ ವೈರಸ್ ಹರಡುವಿಕೆ ನಡುವೆ ಧಾರ್ಮಿಕ ವದಂತಿ ಹಾಗೂ ಸುಳ್ಳು ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಯತೇಚ್ಛವಾಗಿ ಹರಿದಾಡುತ್ತಿವೆ. ಏಪ್ರಿಲ್ ತಿಂಗಳಿನಲ್ಲಿ ಮುಸ್ಲಿಂ ಧರ್ಮದ ಜನರು ಹೆಚ್ಚಾಗಿ ಕೊರೊನಾ ವೈರಸ್ ಸೋಂಕು ಹರಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಮುಸ್ಲಿಂ ಸಮುದಾಯದ ವಿರುದ್ಧ ವದಂತಿಗಳನ್ನು ಹರಿಬಿಡುವ ಹೊಸ ಟ್ರೆಂಡ್ ಕೂಡಾ ಆರಂಭವಾಗಿತ್ತು. ಹೀಗಾಗಿ ಈ ಬೆಳವಣಿಗೆಗಳ ಮೇಲೆ ಲಕ್ಷ್ಯ ವಹಿಸಲಾಗಿತ್ತು.
ಮುಸ್ಲಿಂ ಧರ್ಮವನ್ನು ಗುರಿಯಾಗಿಸಿಕೊಂಡು ಸುಳ್ಳು ವದಂತಿಗಳನ್ನು ಹರಿ ಬಿಡಲಾಗುತ್ತಿದ್ದರೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸುಮ್ಮನಿರುವುದು ಏಕೆ ಎಂದು ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಪ್ರಶ್ನೆ ಮಾಡಿದ್ದರು. ನವದೆಹಲಿ ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಸದಸ್ಯರಿಂದಲೇ ಕೊರೊನಾ ವೈರಸ್ ಸೋಂಕು ಹೆಚ್ಚಾಗಿ ಹರಡುತ್ತಿದೆ ಎಂದು ಆರೋಪಿಸಲಾಗುತ್ತಿತ್ತು. ಉತ್ತರ ಪ್ರದೇಶದ ಬಿಜೆಪಿ ಶಾಸಕರೇ ಮುಸ್ಲಿಂ ವ್ಯಾಪಾರಿಗಳಿಂದ ವಸ್ತುಗಳನ್ನು ಖರೀದಿಸುವಂತಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.












Click it and Unblock the Notifications