Video: 698 ಭಾರತೀಯರ ಕರೆತಂದ ನೌಕಾಪಡೆ ಬಗ್ಗೆ ಗರ್ಭಿಣಿ ಹೇಳಿದ್ದೇನು?
ತಿರುವನಂತಪುರಂ, ಮೇ.10: ನೊವೆಲ್ ಕೊರೊನಾ ವೈರಸ್ ಹರಡುವಿಕೆ ನಡುವೆಯೇ ಮಾಲ್ಡೀವ್ಸ್ ನಲ್ಲಿ ಸಿಲುಕಿರುವ 698 ಭಾರತೀಯರನ್ನು ಜಲಮಾರ್ಗದ ಮೂಲದ ದೇಶಕ್ಕೆ ವಾಪಸ್ ಕರೆ ತರಲಾಯಿತು. ಭಾನುವಾರ ವಿಶೇಷ ನೌಕಾ ಹಡಗು ಭಾರತಕ್ಕೆ ಮರಳಿದೆ.
ಭಾರತೀಯ ನೌಕಾಸೇನೆಗೆ ಸೇರಿದ ಐಎನ್ಎಸ್ ಜಲಾಶ್ವ ಹಡಗಿನಲ್ಲಿ 698 ಭಾರತೀಯರನ್ನು ಮಾಲ್ಡೀವ್ಸ್ ನ ಮಾಲೆಯಿಂದ ದೇಶಕ್ಕೆ ವಾಪಸ್ ಕರದುಕೊಂಡು ಬರಲಾಯಿತು. ಕಳೆದ ಮೇ.08ರ ಶುಕ್ರವಾರ ರಾತ್ರಿ ಪ್ರಯಾಣ ಆರಂಭಿಸಿದ ಹಡಗು ಭಾನುವಾರ ಕೇರಳದ ಕೊಚ್ಚಿಗೆ ಆಗಮಿಸಿತು.
ಬೆಂಗಳೂರಿನಿಂದ ತ್ರಿಪುರಾಕ್ಕೆ ತೆರಳಲಿದೆ ಶ್ರಮಿಕ್ ರೈಲು
ಮಾಲ್ಡೀವ್ಸ್ ನಲ್ಲಿ ನೊವೆಲ್ ಕೊರೊನಾ ವೈರಸ್ ಅಬ್ಬರ ಅಷ್ಟಾಗಿಲ್ಲ. ಮಾಲ್ಡೀವ್ಸ್ ನಲ್ಲಿ ಇದುವರೆಗೂ ಕೊವಿಡ್-19 ಮಹಾಮಾರಿಗೆ ಮೂವರರು ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ 790 ಮಂದಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದು, 29 ಸೋಂಕಿತರು ಗುಣಮುಖರಾಗಿದ್ದಾರೆ. ಬಾಕಿ 758 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.
|
ವಿದೇಶದಲ್ಲಿನ ಭಾರತೀಯರ ಕರೆ ತರಲು 'ಸಮುದ್ರ ಸೇತು'
ಮಾಲ್ಡೀವ್ಸ್ ದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆ ತರುವ ಉದ್ದೇಶದಿಂದ ಸಮುದ್ರ ಸೇತು ಯೋಜನೆ ಜಾರಿಗೊಳಿಸಲಾಯಿತು. ಏರ್ ಲಿಫ್ಟ್ ಮೂಲಕ ಕೆಲವು ರಾಷ್ಟ್ರಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆ ತಂದಿದ್ದು ಆಯಿತು. ಇದೀಗ ಜಲಮಾರ್ಗದ ಮೂಲಕ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರಲು ಸಮುದ್ರ ಸೇತು ಯೋಜನೆಯು ಸಹಕಾರಿಯಾಗಿದೆ. ಹಡಗಿನಲ್ಲಿ ಪ್ರಯಾಣಿಕರನ್ನು ಕರೆ ತರಲು ಸುಸಜ್ಜಿತ ವ್ಯವಸ್ಥೆಯ ಮಾಡಲಾಗಿದೆ.
ಮಾಲ್ಡೀವ್ಸ್ ಗೆ ಮೂರು ದಿನಗಳ ಹಿಂದೆ ಭಾರತೀಯ ಹಡಗು
ಕಳೆದ ಮೇ.07ರ ಗುರುವಾರ ಸಂಜೆ ಮಾಲ್ಡೀವ್ಸ್ ನ ಮಾಲೆ ಬಂದರಿಗೆ ಐಎನ್ಎಸ್ ಜಲಾಶ್ವ ಹಡಗು ತೆರಳಿತು. ಸ್ವದೇಶಕ್ಕೆ ಬರಲಾಗದೇ ಸಂದಿಗ್ಧ ಸ್ಥಿತಿಯಲ್ಲಿರುವ 698 ಭಾರತೀಯರನ್ನು ಹೊತ್ತ ಜಲಾಶ್ವ ಹಡಗು ಮೇ.8ರ ರಾತ್ರಿ ಮಾಲೆಯಿಂದ ಪ್ರಯಾಣ ಆರಂಭಿಸಿದ್ದು, ಮೇ.10ರ ಭಾನುವಾರ ಕೇರಳದ ಕೊಚ್ಚಿ ಬಂದರಿಗೆ ಸೇರಿದೆ. ವಿದೇಶದಿಂದ ಆಗಮಿಸಿದ ಎಲ್ಲ ಭಾರತೀಯರಿಗೆ ಕೊರೊನಾ ವೈರಸ್ ಸೋಂಕು ತಪಾಸಣೆಗೆ ಒಳಪಡಿಸಿದ ಬಳಿಕ 14 ದಿನಗಳ ಕಾಲ ಕ್ವಾರೆಂಟೈನ್ ನಲ್ಲಿ ಇರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಎರ್ನಾಕುಲಂ ಜಿಲ್ಲಾಧಿಕಾರಿ ಎಸ್.ಸುಭಾಶ್ ತಿಳಿಸಿದ್ದಾರೆ.
|
698 ಪ್ರಯಾಣಿಕರ ಪೈಕಿ 45 ಮಂದಿ ಕನ್ನಡಿಗರು
ಮಾಲ್ಡೀವ್ಸ್ ನಿಂದ ಐಎನ್ಎಸ್ ಜಲಾಶ್ವ ಹಡಗಿನ ಮೂಲಕ ಭಾನುವಾರ ಕೇರಳದ ಕೊಚ್ಚಿಗೆ ಸ್ಥಳಾಂತರಗೊಂಡ 698 ಭಾರತೀಯರ ಪೈಕಿ ಕೇರಳದ 440 ಜನರು, ತಮಿಳುನಾಡಿನ 110 ಜನ ಹಾಗೂ ಕರ್ನಾಟಕದ 45 ಮಂದಿಯಿದ್ದರು. ಉಳಿದಂತೆ ತೆಲಂಗಾಣದ 9, ಆಂಧ್ರ ಪ್ರದೇಶ 8, ಲಕ್ಷದ್ವೀಪ 4, ಹರಿಯಾಣ 3, ಹಿಮಾಚಲ ಪ್ರದೇಶ 3, ಮಹಾರಾಷ್ಟ್ರ 3, ರಾಜಸ್ಥಾನ 3, ಗೋವಾ ಒಬ್ಬ ಪ್ರಜೆಗಳನ್ನು ಕರೆ ತರಲಾಗಿದ್ದು, ಒಬ್ಬೊಬ್ಬ ಪ್ರಯಾಣಿಕರಿಗೆ ತಲಾ 2,800 ರೂಪಾಯಿ (40 ಯುೆಸ್ ಡಾಲರ್) ತೆಗೆದುಕೊಳ್ಳಲಾಗಿದೆ. ಸಮುದ್ರ ಸೇತು ಯೋಜನೆ ಮೂಲಕ ಭಾರತೀಯರನ್ನು ಕರೆ ತರಲಾಗುತ್ತಿದ್ದು, ಈ ಹಣವು ಕೇವಲ ಸಂಚಾರದ ಖರ್ಚು ನಿಭಾಯಿಸುವುದಕ್ಕಾಗಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಲಾಗಿದೆ.
|
ಐಎನ್ಎಸ್ ಜಲಾಶ್ವ ಹಡಗಿನಲ್ಲಿ 19 ಗರ್ಭಿಣಿಯರ ಸ್ಥಳಾಂತರ
ಭೂಮಾರ್ಗ ಮತ್ತು ವಾಯುಮಾರ್ಗ ಗರ್ಭಿಣಿಯರ ಸಂಚಾರಕ್ಕೆ ಅನಾನುಕೂಲವಾದ ಹಿನ್ನೆಲೆ ಸಮುದ್ರ ಮಾರ್ಗದ ಮೂಲಕ 19 ಗರ್ಭಿಣಿಯರನ್ನು ಸ್ವದೇಶಕ್ಕೆ ಕರೆ ತರಲಾಯಿತು. ಈ ವೇಳೆ ಗರ್ಭಿಣಿಯೊಬ್ಬರು ಐಎನ್ಎಸ್ ಸೇವೆಯನ್ನು ಶ್ಲಾಘಿಸಿದ್ದಾರೆ. ತಮ್ಮನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆದುಕೊಂಡು ಹೋಗುತ್ತಿರುವ ನೌಕಾ ಸೇನಾ ಅಧಿಕಾರಿಗಳಿಗೆ ಈ ವ್ಯವಸ್ಥೆ ಕಲ್ಪಿಸಿದ ಭಾರತೀಯ ಸರ್ಕಾರಕ್ಕೆ ಧನ್ಯವಾದವನ್ನು ಅರ್ಪಿಸಿದ್ದಾರೆ.