ಉಪವಾಸ ಸತ್ಯಾಗ್ರಹ: ಲೆ. ಗವರ್ನರ್ ಕಿರಣ್ ಬೇಡಿ ವಾಪಸ್ ಕರೆಸಲು ಒತ್ತಾಯ
ಪುದುಚೇರಿ,ಫೆಬ್ರವರಿ 03: ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಯನ್ನು ವಾಪಸ್ ಕರೆಸಲು ಪುದುಚೆರಿ ಕಾಂಗ್ರೆಸ್ ಮೈತ್ರಿಕೂಟ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಕಾಂಗ್ರೆಸ್ ನೇತೃತ್ವದ ಎಸ್ ಡಿಪಿಎ ಮೈತ್ರಿಕೂಟ ಕಿರಣ್ ಬೇಡಿ ಅವರ ವಿರುದ್ಧ 2ನೇ ಹಂತದ ಪ್ರತಿಭಟನೆಗೆ ಸಿದ್ದವಾಗಿದ್ದು, ಇದೇ ಫೆಬ್ರವರಿ 5ರಂದು ಉಪವಾಸ ಸತ್ಯಾಗ್ರಹ ಆರಂಭಿಸಲು ಮುಂದಾಗಿದ್ದಾರೆ.
ನಕಲಿ ವಿಡಿಯೋ ನಂಬಿ ಮತ್ತೆ ಯಾಮಾರಿದ ಕಿರಣ್ ಬೇಡಿ
ಪುದುಚೇರಿಯಲ್ಲಿ ಚುನಾಯಿತ ಸರ್ಕಾರದ ಪ್ರಸ್ತಾಪಗಳ ಅನುಷ್ಠಾನಕ್ಕೆ ಅಡ್ಡಿಯುಂಟುಮಾಡಿದ ಕಾರಣಕ್ಕಾಗಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರನ್ನು ಕೂಡಲೇ ಹಿಂದಕ್ಕೆ ಕರೆಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಅಂತೆಯೇ ಫೆಬ್ರವರಿ 16 ರಂದು ಒಂದು ದಿನದ ಬಂದ್ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.
ಮೈತ್ರಿಕೂಟದ ಜಂಟಿ ಸಭೆಯಲ್ಲಿ ನಿರ್ಧಾರ
ಮಂಗಳವಾರ ರಾತ್ರಿ ನಡೆದ ಮೈತ್ರಿಕೂಟದ ಪಕ್ಷಗಳ ಜಂಟಿ ಸಭೆಯ ಕೊನೆಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಪುದುಚೇರಿ ಮುಖ್ಯಮಂತ್ರಿ ವಿ ನಾರಾಯಣಸಾಮಿ ಅವರು, ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಚುನಾಯಿತ ಸರ್ಕಾರದ ಹಲವಾರು ಪ್ರಸ್ತಾಪಗಳನ್ನು ಅನುಷ್ಠಾನಗೊಳಿಸುವ ಮಾರ್ಗದಲ್ಲಿ ಕಿರಣ್ ಬೇಡಿ ತಡೆಯಾಗಿದ್ದಾರೆ. ಹೀಗಾಗಿ ಅವರು ಕೂಡಲೇ ಕಚೇರಿ ತ್ಯಜಿಸಬೇಕು. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಕಿರಣ್ ಬೇಡಿ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಹಿ ಅಭಿಯಾನ
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಜನವರಿ 11 ರಿಂದ ಎಲ್ಲಾ ವಿಧಾನಸಭಾ ವಿಭಾಗಗಳಲ್ಲಿ ಸಹಿ ಅಭಿಯಾನವನ್ನು ನಡೆಸಿದ್ದವು ಮತ್ತು ಸಾರ್ವಜನಿಕರಿಂದ ಸಹಿಯನ್ನು ಕೂಡ ಸಂಗ್ರಹಿಸಲಾಗಿತ್ತು. ಈ ಹಿಂದೆಯೂ ಕೂಡ ಮೈತ್ರಿಕೂಟಕ್ಕೆ ಸೇರಿದ ಪಕ್ಷಗಳ ಮುಖಂಡರು ಜನವರಿ 8 ರಿಂದ ಮೂರು ದಿನಗಳ ಕಾಲ ಇಲ್ಲಿ ಧರಣಿ ನಡೆಸಿದ್ದರು.
ಕಿರಣ್ ಬೇಡಿಯವರನ್ನು ಬದಲಿಸಬೇಕು
'ಕಿರಣ್ ಬೇಡಿ ಅವರನ್ನು ಬದಲಿಸಬೇಕೆಂದು ಒತ್ತಾಯಿಸಿ ನಮ್ಮ ನಿರಂತರ ಆಂದೋಲನಗಳ ಹೊರತಾಗಿಯೂ, ಕೇಂದ್ರವು ಈ ಬಗ್ಗೆ ಯಾವುದೇ ಗಮನ ಹರಿಸಿಲ್ಲ.
ಫೆಬ್ರವರಿ 5 ರಂದು ಉಪವಾಸ ಸತ್ಯಾಗ್ರಹ
ಆದ್ದರಿಂದ ನಾವು ಈಗ ಫೆಬ್ರವರಿ 5 ರಂದು ಉಪವಾಸ ಸತ್ಯಾಗ್ರಹ ನಡೆಸಿ ಫೆಬ್ರವರಿ 16 ರಂದು ಬಂದ್ಗೆ ಕರೆ ನೀಡುವ ಮೂಲಕ ನಮ್ಮ ಆಂದೋಲನವನ್ನು ಮುಂದುವರೆಸಿದ್ದೇವೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಫೆಬ್ರವರಿ 10 ರಂದು ಜಾತ್ಯತೀತ ಪ್ರಜಾಪ್ರಭುತ್ವ ಮೈತ್ರಿಕೂಟದ ನಿಯೋಗವನ್ನು ಭೇಟಿಯಾಗುವ ಕುರಿತು ನಮಗೆ ಮಾಹಿತಿ ಇದೆ. ಆ ದಿನ ನಮ್ಮ ಸಭೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಒತ್ತಾಯಿಸಿ ಜನರ ಸಹಿಗಳನ್ನು ಹೊಂದಿರುವ ಪ್ರತಿಗಳನ್ನು ನಾವು ಸಲ್ಲಿಸುತ್ತೇವೆ ಎಂದು ಹೇಳಿದರು.