ಮೊದಲು ಓದಿ: ಚೆನ್ನೈನಲ್ಲಿ ಮಳೆ ಸೃಷ್ಟಿಸಿದ ಅವಾಂತರಗಳ ಪಟ್ಟಿ ಇಲ್ಲಿದೆ
ಚೆನ್ನೈ, ನವೆಂಬರ್ 11: ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಗುರುವಾರ ರಾತ್ರಿಯಿಂದ ಚೆನ್ನೈನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಸಂಜೆಯ ವೇಳೆಗೆ ಉತ್ತರ ತಮಿಳುನಾಡು ಮತ್ತು ಪಕ್ಕದ ದಕ್ಷಿಣ ಆಂಧ್ರಪ್ರದೇಶದ ಕರಾವಳಿ ದಾಟುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವು ಪ್ರಸ್ತುತ ಚೆನ್ನೈನಿಂದ ಪೂರ್ವ-ಆಗ್ನೇಯಕ್ಕೆ 170 ಕಿಮೀ ಮತ್ತು ಪುದುಚೇರಿಯ ಪೂರ್ವಕ್ಕೆ 170 ಕಿಮೀ ದೂರದಲ್ಲಿದೆ. ಚೆನ್ನೈನಲ್ಲಿ ನಿರಂತರ ಮಳೆಯಿಂದಾಗಿ ನಗರದ ಹಲವಾರು ಮನೆಗಳು ಮತ್ತು ಪ್ರದೇಶಗಳು ಜಲಾವೃತವಾಗಿದ್ದು, ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಚೆನ್ನೈನ ಟಿ.ನಗರ, ಮೈಲಾಪುರ್, ವೆಲಚೇರಿ, ಅಡ್ಯಾರ್, ಎಕ್ಕಟ್ಟುತಂಗಲ್ ಮತ್ತಿತರ ಪ್ರದೇಶಗಳು ಜಲಾವೃತಗೊಂಡಿವೆ.
ತಮಿಳುನಾಡಿನಲ್ಲಿ ವರುಣನ ರೌದ್ರನರ್ತನಕ್ಕೆ ಸೃಷ್ಟಿಯಾಗಿರುವ ಪ್ರವಾಹ ಪರಿಸ್ಥಿತಿ ಹಾಗೂ ಜನಜೀವನದ ಕುರಿತು ಪ್ರಮುಖ ಅಂಶಗಳನ್ನು ಮುಂದೆ ತಿಳಿಯೋಣ.

ತಮಿಳುನಾಡು ಮಳೆಯ ಕುರಿತು ಪ್ರಮುಖ ಸುದ್ದಿಗಳು:
* ತಮಿಳುನಾಡಿನಲ್ಲಿ ಭಾರಿ ಮಳೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಈವರೆಗೆ 14 ಮಂದಿ ಪ್ರಾಣ ಬಿಟ್ಟಿದ್ದಾರೆ
* ನಿರ್ದಿಷ್ಟ ಪ್ರದೇಶಗಳಲ್ಲಿ ಚದುರಿದ, ಭಾರೀ ಮಳೆ, ಅತಿ ಭಾರೀ ಮಳೆ ಮತ್ತು ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ
* ತಮಿಳುನಾಡಿನಲ್ಲಿ 11 ತಂಡಗಳು ಮತ್ತು ಪುದುಚೇರಿಯಲ್ಲಿ 2 ತಂಡಗಳನ್ನು ನಿಯೋಜಿಸಲಾಗಿದ್ದು, ಇನ್ನೂ 5 ತಂಡಗಳು ಆಗಮಿಸಲಿವೆ. ಎಲ್ಲಾ ವಿಪತ್ತುಗಳನ್ನು ಎದುರಿಸಲು ಎನ್ಡಿಆರ್ಎಫ್ ತಂಡಗಳು ಸಶಸ್ತ್ರವಾಗಿ ಸಜ್ಜಾಗಿವೆ. ಒಂದು ವೇಳೆ ನಿಮ್ಮ ಮನೆಗಳ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತಗೊಂಡಿದ್ದರೆ, ನಿಮ್ಮ ಮನೆಗಳಿಗೆ ನೀರು ನುಗ್ಗಿದ್ದರೆ ಮನೆಗಳಲ್ಲೇ ಇರಿ ಎಂದು ಎನ್ಡಿಆರ್ಎಫ್ನ ಹಿರಿಯ ಕಮಾಂಡೆಂಟ್ ರೇಖಾ ನಂಬಿಯಾರ್ ಜನರಿಗೆ ಸಲಹೆ ನೀಡಿದ್ದಾರೆ.
* ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ, ಅವಡಿ ಮತ್ತು ಅಂಬತ್ತೂರು ನಿಲ್ದಾಣಗಳಲ್ಲಿ ಭಾರಿ ನೀರು ನಿಂತಿದ್ದರಿಂದ ಚೆನ್ನೈ ಮತ್ತು ತಿರುವಳ್ಳೂರು ನಡುವೆ ಉಪನಗರ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಕೆಲವನ್ನು ಹೊರತುಪಡಿಸಿ, ಈ ವಿಭಾಗದಲ್ಲಿಯೂ ಹೆಚ್ಚಿನ ಸೇವೆಗಳನ್ನು ರದ್ದುಗೊಳಿಸಲಾಗಿದೆ.
* ತಮಿಳುನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸುಮಾರು 55,000 ಹೆಕ್ಟೇರ್ ಭೂಮಿ ಜಲಾವೃತವಾಗಿದ್ದು, 3,500 ಹೆಕ್ಟೇರ್ನಲ್ಲಿನ ಬೆಳೆಗಳು ನಾಶವಾಗಿವೆ. ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಕೇರಳದಂತಹ ನೆರೆಯ ರಾಜ್ಯಗಳಿಗೆ ತರಕಾರಿ ಪೂರೈಕೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ.
* "ಕೇರಳಕ್ಕೆ ತರಕಾರಿಗಳ ಪೂರೈಕೆಯಲ್ಲಿ ಕುಸಿತ ಕಂಡು ಬಂದಿದೆ. ಒಂದು ಅಂದಾಜಿನ ಪ್ರಕಾರ ಪೂರೈಕೆಯು ಶೇಕಡಾ 60 ಕ್ಕಿಂತ ಹೆಚ್ಚು ಪರಿಣಾಮ ಬೀರಿದೆ. ಈ ನಷ್ಟವನ್ನು ಹೇಗೆ ನಿಭಾಯಿಸಬೇಕು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
* ತಮಿಳುನಾಡಿನಲ್ಲಿ ಧಾರಾಕಾರ ಮಳೆಯಿಂದ ಹಾನಿಗೊಳಗಾದ ಎಲ್ಲ ಜನರ ಬಗ್ಗೆ ತಮ್ಮ ಸರ್ಕಾರ ಕಾಳಜಿ ವಹಿಸಲಿದ್ದು, ಬೆಂಬಲವಾಗಿ ನಿಲ್ಲಲಿದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಘೋಷಿಸಿದ್ದಾರೆ.












Click it and Unblock the Notifications