ಚೆನ್ನೈ ರೈಲ್ವೆ ನಿಲ್ದಾಣಕ್ಕೆ ಎಂಜಿಆರ್ ಹೆಸರು: ಮೋದಿ
ಚೆನ್ನೈ, ಮಾರ್ಚ್ 06: ಚೆನ್ನೈನ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ತಮಿಳುನಾಡಿನ ಖ್ಯಾತ ನಾಯಕ ನಟ ಆಗಿದ್ದ, ಮಾಜಿ ಸಿಎಂ ಎಂಜಿಆರ್ ಅವರ ಹೆಸರನ್ನು ಇಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಿಸಿದರು.
ತಮಿಳುನಾಡಿನ ಕಂಚಿಪುರಂ ನಲ್ಲಿ ಎನ್ಡಿಎ ಸಮಾವೇಶದಲ್ಲಿ ಮಾತನಾಡಿದ ಅವರು, ಎಂಜಿಆರ್ ಅವರ ಸಾಧನೆಗಳನ್ನು ಗುಣಗಾನ ಮಾಡಿದರು. ಶ್ರೀಲಂಕಕ್ಕೆ ಹೋಗಿದ್ದಾಗ ಎಂಜಿಆರ್ ಅವರ ಜನ್ಮಸ್ಥಳಕ್ಕೆ ಹೋಗಿದ್ದನ್ನು ನೆನಪಿಸಿಕೊಂಡರು.
ಅಷ್ಟೆ ಅಲ್ಲದೆ, ತಮಿಳುನಾಡಿಗೆ ಬರುವ ಮತ್ತು ಇಲ್ಲಿಂದ ಹೊರಡುವ ವಿಮಾನಗಳಲ್ಲಿ ತಮಿಳು ಭಾಷೆಯಲ್ಲಿ ಸೂಚನೆಗಳು ಪ್ರಸಾರ ಮಾಡುವ ಬಗ್ಗೆಯೂ ನಾವು ಆಲೋಚನೆ ಮಾಡಿದ್ದೇವೆ ಎಂದು ಹೇಳಿದರು.

'ವಿಪಕ್ಷಗಳು ನನ್ನ ವಿರುದ್ಧ ಯುದ್ಧ ಮಾಡುತ್ತಿವೆ'
ವಿರೋಧ ಪಕ್ಷಗಳು ನನ್ನ ವಿರುದ್ಧ ಯುದ್ಧವನ್ನೇ ಸಾರಿವೆ, ನನ್ನ ವಿರೋಧಿಸುವ ಭರದಲ್ಲಿ ಕೆಲವರು ದೇಶವನ್ನೂ ವಿರೋಧಿಸುತ್ತಿದ್ದಾರೆ. ಕೆಲವರು ನನ್ನ ಪೋಷಕರನ್ನು ಬೈಯುತ್ತಾರೆ, ಕೆಲವರು ನನ್ನ ಜಾತಿಯನ್ನು ಬೈಯುತ್ತಾರೆ, ಕೆಲವರು ನನ್ನ ನಾನು ಬಂದ ಆರ್ಥಿಕ ಪರಿಸ್ಥಿತಿಯನ್ನು ಜರಿಯುತ್ತಾರೆ, ಒಬ್ಬ ಕಾಂಗ್ರೆಸ್ ನಾಯಕನಂತೂ ನನ್ನನ್ನು ಕೊಲ್ಲುವ ಮಾತಾಡಿದ್ದಾರೆ ಎಂದು ಮೋದಿ ಅವರು ಹೇಳಿದರು.

ಜನರೇ ಬಿಜೆಪಿಯ ಹೈಕಮಾಂಡ್: ಮೋದಿ
ನಮ್ಮ ಇತಿಹಾಸವೇ ಹೇಳುತ್ತದೆ, ಎನ್ಡಿಎ ಸರ್ಕಾರ ಪ್ರಾದೇಶಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತದೆ ಎಂದು. ಬಿಜೆಪಿಯು ದೆಹಲಿಯ ಹೈಕಮಾಂಡ್ ಅನ್ನು ಕೇಳಿ ಕೆಲಸ ಮಾಡುವುದಿಲ್ಲ. ಬಿಜೆಪಿಯ ಹೈಕಮಾಂಡ್ ಜನರಷ್ಟೆ ಎಂದು ಮೋದಿ ಹೇಳಿದರು.

'ಕಂಚಿಪುರಂ ತಮಿಳುನಾಡಿನ ಹೆಮ್ಮೆ'
ಕಂಚಿಪುರಂ ತಮಿಳುನಾಡಿನ ಹೆಮ್ಮೆ , ಕೇಂದ್ರ ಸರ್ಕಾರವು ವಸ್ತ್ರೋದ್ಯಮಕ್ಕೆ ಒತ್ತು ನೀಡಲು ಬದ್ಧವಾಗಿದೆ. 7000 ಕೋಟಿಗೂ ಹೆಚ್ಚಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರವು ಜವಳಿ ಕಾರ್ಮಿಕರಿಗೆ, ಉದ್ಯಮಿಗಳ ಸಹಾಯಕ್ಕೆ ನೀಡಿದೆ ಎಂದು ಮೋದಿ ಮಾಹಿತಿ ನೀಡಿದರು.

'ಕಾಮರಾಜ್ ಅವರನ್ನು ಕಾಂಗ್ರೆಸ್ ಅವಮಾನಿಸಿತು'
ತಮಿಳುನಾಡಿನ ನಾಯಕ ಕೆ.ಕಾಮರಾಜು ಅವರನ್ನು ಒಂದು ಕುಟುಂಬ ತಮ್ಮ ಲಾಭಕ್ಕಾಗಿ ಅವಮಾನಿಸಿತು. ಕಾಮರಾಜರ ಅಪರಾಧ ಏನಾಗಿತ್ತು? ಅವರ ಜನರ ಪರವಾಗಿ, ಪ್ರಜಾಪ್ರಭುತ್ವದ ಪರವಾಗಿ ಮಾತನಾಡಿದ್ದು ತಪ್ಪೆ. ಅವರು ಒಂದು ಕುಟುಂಬದ ಭ್ರಷ್ಟಾಚಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನೆ ಮಾಡಿದ್ದರು ಎಂದು ಮೋದಿ ಹೇಳಿದರು.












Click it and Unblock the Notifications