ಪ್ರಚಾರದ ಭರಾಟೆ: ತಮಿಳುನಾಡಿನಲ್ಲಿ ನಗೆಪಾಟಲಿಗೀಡಾದ ಬಿಜೆಪಿ!
ಚೆನ್ನೈ, ಮಾರ್ಚ್ 31: ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷವು ಚುನಾವಣಾ ಪ್ರೋಮೋದಲ್ಲಿ ತಮ್ಮ ಫೋಟೋವನ್ನು ಬಳಸಿರುವುದಕ್ಕೆ ಭರಟನಾಟ್ಯ ಕಲಾವಿದೆ ಮತ್ತು ಕೇಂದ್ರ ಸಚಿವ ಪಿ ಚಿದಂಬರಂ ಅವರ ಸೊಸೆ ಶ್ರೀನಿಧಿ ಚಿದಂಬರಂ ಅವರು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಎಂ ಕರುಣಾನಿಧಿ ರಚಿಸಿ, ಎ ಆರ್ ರೆಹಮಾನ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಸೆಮೋಜಿ ಹಾಡಿಗೆ ಶ್ರೀನಿಧಿ ಚಿದಂಬರಂ ನೃತ್ಯ ಮಾಡಿರುವ ವಿಡಿಯೋವನ್ನು ಬಿಜೆಪಿ ತನ್ನ ಪ್ರಚಾರಕ್ಕೆ ಬಳಸಿಕೊಂಡಿದೆ. ಇದು ತೀರಾ ಹಾಸ್ಯಾಸ್ಪದವಾಗಿದೆ ಎಂದು ಶ್ರೀನಿಧಿ ಚಿದಂಬರಂ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಮೋದಿ ಪ್ರಧಾನಿಯಾಗಲು ಹಲವು ಬಿಜೆಪಿ ನಾಯಕರನ್ನು ಕಡೆಗಣಿಸಿದ್ದಾರೆ: ಸ್ಟಾಲಿನ್
"ಕಮಲವು ಅರಳುತ್ತದೆ" ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿ ಹಾಡಿನ ವಿಡಿಯೋವನ್ನು ಪೋಸ್ಟ್ ಮಾಡಿತ್ತು. ಅದರಲ್ಲಿ ಶ್ರೀನಿಧಿ ಚಿದಂಬರಂ ಅವರು ಎರಡು ಸೆಕೆಂಡುಗಳ ಕಾಲ ಕಾಣಿಸಿಕೊಳ್ಳುತ್ತಾರೆ. ಈ ವಿಡಿಯೋವನ್ನು ಭಾನುವಾರ ಬಿಜೆಪಿ ತೆಗೆದು ಹಾಕಿದೆ.
ಬಿಜೆಪಿಯ ನಡೆ ಹಾಸ್ಪಾಸ್ಪದ:
ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಸೊಸೆ ಹಾಗೂ ಕಾರ್ತಿ ಚಿದಂಬರಂ ಅವರ ಪತ್ನಿ ಆಗಿರುವ ಶ್ರೀನಿಧಿ ಚಿದಂಬರಂ ಅವರು ಭಾರತೀಯ ಜನತಾ ಪಕ್ಷದ ವಿರುದ್ಧ ಹರಿ ಹಾಯ್ದಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಪ್ರಚಾರಕ್ಕೆ ತಮ್ಮ ಭಾವಚಿತ್ರವನ್ನು ಬಳಸಿಕೊಂಡಿರುವುದು ಹಾಸ್ಯಾಸ್ಪದವಾಗಿದೆ. ತಮಿಳುನಾಡಿನಲ್ಲಿ ಯಾವುದೇ ಕಾರಣಕ್ಕೂ ಕಮಲ ಅರಳುವುದಿಲ್ಲ ಎಂದು ಶ್ರೀನಿಧಿ ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವೀಟ್ ಏಟು:
"ಬಿಜೆಪಿಯವರಿಗೆ ಒಪ್ಪಿಗೆ ಎಂಬ ಪದದ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಕರ ಎಂಬುದು ನಮಗೆ ಅರ್ಥವಾಗುತ್ತಿದೆ. ಆದರೆ, ಶ್ರೀನಿಧಿ ಕಾರ್ತಿ ಚಿದಂಬರಂ ಅವರ ಭಾವಚಿತ್ರವನ್ನು ಅವರ ಅನುಮತಿ ಇಲ್ಲದೇ ನೀವು ಬಳಸುವಂತಿಲ್ಲ. ಇದರ ಮಧ್ಯೆ ನಿಮ್ಮ ಅಭಿಯಾನವು ಸುಳ್ಳು ಪ್ರಚಾರದಿಂದ ತುಂಬಿದೆ ಎಂಬುದನ್ನು ನೀವೇ ಸಾಬೀತುಪಡಿಸಿದ್ದೀರಿ" ಎಂದು ತಮಿಳುನಾಡು ಕಾಂಗ್ರೆಸ್ ಟ್ವೀಟ್ ಮಾಡಿದೆ.
Dear @BJP4TamilNadu, we understand 'consent' is a difficult concept for you to understand, but you cannot use Mrs Srinidhi Karti Chidambaram's image without her permission. All you've done is prove that your campaign is full of lies & propaganda. pic.twitter.com/CTYSK9S9Qw
— Tamil Nadu Congress Committee (@INCTamilNadu) March 30, 2021
ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳ ಚುನಾವಣೆಗೆ ಪ್ರಾದೇಶಿಕ ಎಐಎಡಿಎಂಕೆ ಪಕ್ಷದ ಜೊತೆಗೆ ಭಾರತೀಯ ಜನತಾ ಪಕ್ಷವು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ರಾಜ್ಯ ಚುನಾವಣಾ ಅಖಾಡದಲ್ಲಿ ಬಿಜೆಪಿಯು 20 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಜ್ಯದಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.