ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿ ಇಂದು ಘೋಷಣೆ ಸಾಧ್ಯತೆ
ಚೆನ್ನೈ, ಫೆಬ್ರವರಿ 19: ಮಹಾರಾಷ್ಟ್ರದಲ್ಲಿ ಶಿವಸೇನಾ ಜತೆಗೆ ಮೈತ್ರಿ ಖಚಿತಪಡಿಸಿಕೊಂಡ ಬಳಿಕ ತಮಿಳುನಾಡಿನ ಪಕ್ಷದ ಉಸ್ತುವಾರಿ ಪಿಯೂಷ್ ಗೋಯಲ್ ಮಂಗಳವಾರ ಚೆನ್ನೈಗೆ ಭೇಟಿ ನೀಡಲಿದ್ದು, 2019ರ ಲೋಕಸಭೆ ಚುನಾವಣೆಗಾಗಿ ಮೈತ್ರಿ ಅಂತಿಮಗೊಳಿಸಲು ಎಐಎಡಿಎಂಕೆ ಜತೆ ಮಾತುಕತೆ ನಡೆಸಲಿದ್ದಾರೆ.
ಎಐಎಡಿಎಂಕೆ ಜತೆ ಮಾತುಕತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚೆನ್ನೈಗೆ ತೆರಳಲಿದ್ದಾರೆ ಎನ್ನಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರ ಭೇಟಿ ರದ್ದುಗೊಳಿಸಲಾಗಿದೆ.
ವಿರೋಧಪಕ್ಷಗಳು ಸೇರಿ ಮಹಾಘಟಬಂಧನ್ ರಚಿಸಿರುವುದರಿಂದ ಬಿಜೆಪಿ ಅದನ್ನು ಎದುರಿಸಲು ವಿವಿಧ ರಾಜ್ಯಗಳಲ್ಲಿ ತನ್ನ ಪರ ಮೃದು ಧೋರಣೆ ಹೊಂದಿರುವ ಪ್ರಮುಖ ಪ್ರಾದೇಶಿಕ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಅಧಿಕಾರ ಉಳಿಸಿಕೊಳ್ಳುವ ಗುರಿ ಹೊಂದಿದೆ.

ರಾಜ್ಯದಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಯು ಪ್ರಬಲವಾಗುವ ಸೂಚನೆ ಕಂಡುಬಂದಿರುವುದರಿಂದ ಅದನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳಿಗೆ ಮೈತ್ರಿ ಅಗತ್ಯವಾಗಿದೆ. ಎಐಎಡಿಎಂಕೆ ಮಾತ್ರವಲ್ಲದೆ, ನಟ ವಿಜಯಕಾಂತ್ ಅವರ ಡಿಎಂಡಿಕೆ, ದಲಿತ್ ಪಾರ್ಟಿ ಪುದಿಯಾ ತಮಿಳಗಂ ಮತ್ತು ಇತರೆ ಸಣ್ಣಪುಟ್ಟ ಪಕ್ಷಗಳನ್ನೂ ಸೆಳೆದುಕೊಳ್ಳಲು ಬಿಜೆಪಿ ಉದ್ದೇಶಿಸಿದೆ. ಪಟ್ಟಾಲಿ ಮಕ್ಕಳ್ ಕಚ್ಚಿ ಪಕ್ಷದ ಸಂಸ್ಥಾಪಕ ಎಸ್ ರಾಮದಾಸ್, ಸೀಟು ಹಂಚಿಕೆ ಸಂಬಂಧ ಡಿಎಂಕೆ ಮತ್ತು ಎಐಎಡಿಎಂಕೆ ಎರಡರೊಂದಿಗೂ ಚೌಕಾಸಿ ನಡೆಸಿದ್ದಾರೆ.

ಎಐಎಡಿಎಂಕೆ ಜತೆ ಮೈತ್ರಿಗಾಗಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಫೆ. 14ರಂದು ಕೈಗಾರಿಕೋದ್ಯಮಿ ಮಹಾಲಿಂಗಂ ಪೊನ್ನುಸ್ವಾಮಿ ಅವರ ಮನೆಯಲ್ಲಿ ಪಕ್ಷದ ಮುಖಂಡರೊಂದಿಗೆ ಮೂರು ಗಂಟೆ ಚರ್ಚೆ ನಡೆಸಿದ್ದರು.












Click it and Unblock the Notifications