ತೆವಳಿ ಹೋಗಲು ನಾನೇನು ಹಲ್ಲಿಯೇ ಅಥವಾ ಹಾವೇ?: ಸ್ಟಾಲಿನ್ ವಿರುದ್ಧ ಇಪಿಎಸ್ ಕಿಡಿ
ಚೆನ್ನೈ, ಮಾರ್ಚ್ 19: 'ರಾಜ್ಯದ ಮುಖ್ಯಮಂತ್ರಿಯಾಗಲು ಟೇಬಲ್ ಅಡಿಯಲ್ಲಿ ಅಂಬೆಗಾಲಿಟ್ಟು ತೆವಳಿ ಶಶಿಕಲಾ ಅವರ ಕಾಲಿಗೆ ಬೀಳಬೇಕಾಗಿತ್ತು' ಎಂದು ವಿರೋಧಪಕ್ಷ ಡಿಎಂಕೆ ತಮ್ಮನ್ನು ವ್ಯಂಗ್ಯವಾಡಿದ್ದಕ್ಕೆ ಹಲವುತಿಂಗಳ ಬಳಿಕ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಶುಕ್ರವಾರ ಕೊನೆಗೂ ತಿರುಗೇಟು ನೀಡಿದ್ದಾರೆ.
ಪಳಿನಿಸ್ವಾಮಿ ಅವರು ಮುಖ್ಯಮಂತ್ರಿಯಾಗಲು ಟೇಬಲ್ ಅಡಿ ನುಸುಳುಹೋಗಿ ಶಶಿಕಲಾ ಕಾಲಿಗೆ ಬಿದ್ದಿದ್ದರು ಎಂದು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಮತ್ತು ಅವರ ಮಗ ಉದಯನಿಧಿ ಸ್ಟಾಲಿನ್ ಲೇವಡಿ ಮಾಡಿದ್ದರು. ಆದರೆ ಈ ಟೀಕೆಗೆ ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಪಳನಿಸ್ವಾಮಿ ಮುಂದಾಗಿರಲಿಲ್ಲ.
ಶುಕ್ರವಾರ ಕಡ್ಡಲೋರ್ನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಪಳನಿಸ್ವಾಮಿ ಮೌನಮುರಿದಿದ್ದು ಡಿಎಂಕೆ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. 'ತೆವಳಿ ಹೋಗಲು ನಾನೇನು ಹಲ್ಲಿ ಅಥವಾ ಹಾವೇ? ನನಗೆ ಕಾಲಿಲ್ಲವೇ? ವಿರೋಧಪಕ್ಷದ ನಾಯಕರಾಗಿ ಮುಖ್ಯಮಂತ್ರಿಯೊಬ್ಬರ ಬಗ್ಗೆ ಹೇಗೆ ಮಾತನಾಡಬೇಕೆಂಬ ಜ್ಞಾನವಿಲ್ಲವೇ?' ಎಂದು ಎಂಕೆ ಸ್ಟಾಲಿನ್ ವಿರುದ್ಧ ಇಪಿಎಸ್ ಕಿಡಿಕಾರಿದ್ದಾರೆ.

ಮುಖ್ಯಮಂತ್ರಿಯಾಗಲು ಸಾಧ್ಯವಾಗದ ಕಾರಣಕ್ಕೆ ಸ್ಟಾಲಿನ್ ಅತೀವ ಹತಾಶೆಗೊಂಡಿದ್ದಾರೆ ಎಂದು ಪಳನಿಸ್ವಾಮಿ ಟೀಕಿಸಿದ್ದಾರೆ. 'ಸ್ಟಾಲಿನ್ ಅವರು ಕನಸು ಕಾಣುತ್ತಿದ್ದಂತೆ ಕಿರಿಕಿರಿಗೆ ಒಳಗಾಗಿದ್ದಾರೆ. ಅಮ್ಮಾ ಅವರ ನಿಧನದ ಬಳಿಕ ಪಕ್ಷ ಒಡೆದುಹೋಗಲಿದೆ, ಸರ್ಕಾರ ಛಿದ್ರವಾಗಲಿದೆ ಮತ್ತು ತಾವು ಸಿಎಂ ಆಗಬಹುದು ಎಂದು ಅವರು ಬಯಸಿದ್ದರು. ಆದರೆ ಒಬ್ಬ ರೈತ ಮುಖ್ಯಮಂತ್ರಿ ಆಗುತ್ತಾನೆ ಎಂದು ಅವರು ಎಂದೂ ಊಹಿಸಿರಲಿಲ್ಲ' ಎಂದು ಹೇಳಿದ್ದಾರೆ.












Click it and Unblock the Notifications