ಉಪಚುನಾವಣೆ ನಂತರ ಒಂದಾಗುತ್ತೇವೆ: ಪನ್ನೀರ್ ಸೆಲ್ವಂ
ಪಕ್ಷದ ಅಧಿನಾಯಕಿ ಶಶಿಕಲಾ ಅವರ ಮುಂದೆ ತಮ್ಮದೇನೂ ಆಟ ನಡೆಯೋಲ್ಲ ಎಂಬುದನ್ನು ನಿಧಾನವಾಗಿ ಅರಿತುಕೊಂಡ ನಂತರ ವರಸೆ ಬದಲಾಯಿಸಿದರೇ ಪನ್ನೀರ್ ಸೆಲ್ವಂ?
ಚೆನ್ನೈ, ಏಪ್ರಿಲ್ 5: ಎಐಎಡಿಎಂಕೆ ಪಕ್ಷದಲ್ಲಿ ಉಂಟಾಗಿರುವ ಒಡಕು ಶಾಶ್ವತವೇನಲ್ಲ ಎಂದಿರುವ ಆ ಪಕ್ಷದ ಉಚ್ಛಾಟಿತ ನಾಯಕ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ, ಶೀಘ್ರದಲ್ಲೇ ಪಕ್ಷದ ಎಲ್ಲಾ ನಾಯಕರೂ ಒಂದಾಗಲಿದ್ದಾರೆಂದು ಹೇಳಿದ್ದಾರೆ.
ಇದೇ ತಿಂಗಳ 12ರಂದು ನಡೆಯಲಿರುವ ಚೆನ್ನೈ ನಗರದ ಆರ್.ಕೆ. ನಗರ ಉಪಚುನಾವಣೆಯ ನಂತರ ಪಕ್ಷವು ಮತ್ತೆ ಒಂದಾಗುತ್ತದೆ ಎಂಬ ಇರಾದೆ ಅವರದ್ದು.
ಎಐಎಡಿಎಂಕೆ ಅಧಿನಾಯಕಿ ಶಶಿಕಲಾ ಅವರ ವಿರುದ್ಧ ಬಂಡೆದ್ದ ನಂತರ, ದಿನಕ್ಕೊಂದರಂತೆ ವಿರೋಧದ ಹಾದಿ ತುಳಿಯುತ್ತಾ ಶಶಿಕಲಾ ಹಾಗೂ ಅವರ ಬಣದ ಕಿಚ್ಚಿಗೆ ಪ್ರತಿ ದಿನ ತುಪ್ಪ ಸುರಿದ್ದಿದ್ದ ಪನ್ನೀರೆ ಸೆಲ್ವಂ ಹೀಗೆ ಇದ್ದಕ್ಕಿದ್ದಂತೆ ಮೆದುವಾಗಿ ಮಾತನಾಡಲು ಕಾರಣವೇನು ಎಂಬುದು ತಿಳಿದುಬಂದಿಲ್ಲ.
ಆದರೆ, ಅವರಿಗೆ ಶಶಿಕಲಾ ಅವರು ಪಕ್ಷದ ಮೇಲೆ ಸಾಧಿಸಿರುವ ಹಿಡಿತದ ಮುಂದೆ ತಮ್ಮ ಆಟವೇನೂ ನಡೆಯಲು ಎಂಬುದು ನಿಧಾನವಾಗಿ ಅರ್ಥವಾದಂತಿದೆ. ಹಾಗಾಗಿಯೇ, ಅವರು ಭಿನ್ನಾಭಿಪ್ರಾಯ ಮರೆತು ಶಶಿಕಲಾ ಅವರ ಬಣದೊಂದಿಗೆ ತಮ್ಮ ಬೆಂಬಲಿಗರೊಡನೆ ವಿಲೀನಗೊಂಡು ಈಗ ಚಾಲ್ತಿಯಲ್ಲಿರುವ ಪಳನಿಸ್ವಾಮಿ ಸರ್ಕಾರದಲ್ಲಿ ಸೇರ್ಪಡೆಗೊಳ್ಳುವುದು ಅವರ ಹೆಜ್ಜೆಯಾಗಿರಬಹುದೆಂದು ಊಹಿಸಲಾಗಿದೆ.
ಶಶಿಕಲಾ ಅವರಿಗೆ ಸಡ್ಡುಹೊಡೆದಾಗಿನಿಂದ ಇಲ್ಲಿಯವರೆಗೆ ಪನ್ನೀರ್ ಸೆಲ್ವಂ ಅವರು, ಅನುಸರಿಸಿದ ಕಾರ್ಯತಂತ್ರ ಹಾಗೂ ಅನುಭವಿಸಿದ ವೈಫಲ್ಯಗಳ ಝಲಕ್ ಇಲ್ಲಿದೆ.
ಆದರೆ, ಶಶಿಕಲಾ ಕಾಲಿಟ್ಟ ಮೇಲೆ ಎಲ್ಲಾ ಬದಲಾಯಿತು
ಜಯಲಲಿತಾ ಅವರ ನಿಧನಕ್ಕೂ ಮುನ್ನವೇ ಪನ್ನೀರ್ ಸೆಲ್ವಂ ಅವರನ್ನೇ ಹಂಗಾಮಿ ಮುಖ್ಯಮಂತ್ರಿಯನ್ನಾಗಿ ಘೋಷಿಸಲಾಗಿತ್ತಲ್ಲದೆ, ಎಐಎಡಿಎಂಕೆ ಪಕ್ಷದ ಆಡಳಿತವೂ ಅವರ ಹಿಡಿತಕ್ಕೆ ಬಂದಿತ್ತು. ಆದರೆ, ಶಶಿಕಲಾ ಯಾವಾಗ ಪಕ್ಷದೊಳಗೆ ಕಾರ್ಯದರ್ಶಿಯಾಗಿ ಕಾಲಿಟ್ಟರೋ ಅಲ್ಲಿಂದ ನಿಧಾನವಾಗಿ ಪಕ್ಷದೊಳಗಿನ ಚಿತ್ರಣ ಬದಲಾಗುತ್ತಾ ಹೋಯಿತು.
ಶಾಸಕರ ಬೆಂಬಲವೂ ಅಧಿಕ
ಪಕ್ಷದ ಕಾರ್ಯದರ್ಶಿಯಾದ ನಂತರ, ದಿನೇ ದಿನೇ ತನ್ನ ಬೆಂಬಲಿಗ ಶಾಸಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದ ಶಶಿಕಲಾ, ನೋಡ ನೋಡುತ್ತಿದ್ದಂತೆ ತಮ್ಮ ಬೆಂಬಲಿತ ಶಾಸಕರ ಸಹಾಯದೊಂದಿಗೆ ಪಕ್ಷದ ಅಧ್ಯಕ್ಷೆಯ ಪಟ್ಟ ವಹಿಸಿಕೊಂಡರು.
ಪನ್ನೀರ್ ಗೆ ಪರೋಕ್ಷ ಸಂದೇಶ
ಎಐಎಡಿಎಂಕೆ ಪಕ್ಷದ ಅಧ್ಯಕ್ಷೆಯಾಗಿ ಘೋಷಣೆಯಾದ ನಂತರ, ನಿಧಾನವಾಗಿ ಶಾಸಕಾಂಗ ಪಕ್ಷದ ನಾಯಕಿಯಾಗಿಯೂ ಆಯ್ಕೆಯಾಗುವ ಮೂಲಕ ಪನ್ನೀರ್ ಸೆಲ್ವಂ ಅವರಿಗೆ ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಯಬೇಕೆಂಬ ಸ್ಪಷ್ಟ ಸೂಚನೆ ನೀಡಿದರು ಶಶಿಕಲಾ.
ಶಶಿಕಲಾ ವಿರುದ್ಧ ತಿರುಗಿಬಿದ್ದ ನಾಯಕ
ಆದರೆ, ಅಮ್ಮನಿಗೆ (ಜಯಲಲಿತಾ) ಅವರ ವಿಧೇಯರಾಗಿದ್ದ ಪನ್ನೀರ್ ಗೆ ಈ ಆಂತರಿಕ ಬದಲಾವಣೆಗಳು ಹಿಡಿಸಲಿಲ್ಲ. ಶಶಿಕಲಾ ಬಣದ ಆಣತಿಯ ಮೇರೆಗೆ ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ಸಲ್ಲಿಸಿದರೂ ಆಂತರಿಕ ಬೇಗುದಿಯಿಂದ ಬೇಸತ್ತ ಅವರು, ಅದೊಂದು ದಿನ ಶಶಿಕಲಾ ಅವರಿಗೆ ಸಡ್ಡು ಹೊಡೆದರು. ತಮ್ಮ ಗುಂಪಿನೊಡನೆ ಪಕ್ಷದಿಂದ ಉಚ್ಛಾಸಲ್ಪಟ್ಟರು. ಶಶಿಕಲಾ ಅವರ ವಿರುದ್ಧ ವಾಗ್ದಾಳಿಗಿಳಿದರು. ಜನರ ಅನುಕಂಪದ ಅಲೆ ಪನ್ನೀರ್ ಪರವಾಗಿಯೇ ಇತ್ತು. ಇದೇ ತಮಗೆ ಶ್ರೀರಕ್ಷೆಯಾಗುತ್ತದೆ ಎಂದು ಅವರೂ ನಂಬಿದ್ದರು. ಆದರೆ, ಪ್ರಜಾಪ್ರಭುತ್ವದ ನಿಯಮಗಳಲ್ಲಿ ಜನರ ಅನುಕಂಪಕ್ಕಿಂತ ಆಡಳಿತಾರೂಢ ಪಕ್ಷದ ಶಾಸಕರ ಬೆಂಬಲವೇ ದೊಡ್ಡದು ಎಂಬುದೇ ಸತ್ಯವಾಯಿತು.
ಆದರೂ, ಕೌಶಲ್ಯದ ನಡೆ ಅನುಸರಿಸಿದ ಶಶಿಕಲಾ
ಶಶಿಕಲಾ ಅವರ ವಿರುದ್ಧ ತಿರುಗಿಬಿದ್ದಿದ್ದು ಅವರಿಗೇನೂ ಲಾಭವಾಗಲಿಲ್ಲ. ಅದೇ ಸಂದರ್ಭಧಲ್ಲಿ, ಅಕ್ರಮ ಆಸ್ತಿ ಪ್ರಕರಣದ ತೀರ್ಪು ಹೊರಬಿದ್ದು ಶಶಿಕಲಾ ಅವರು ಜೈಲಿಗೆ ಹೋಗುವ ಪ್ರಸಂಗ ಬಂದಾಗಲಂತೂ, ತಾವು ಕಳೆದುಕೊಂಡ ಪದವಿ ಮತ್ತೆ ಸಿಗುತ್ತದೆಂಬ ಆಶಾವಾದದಲ್ಲಿದ್ದ ಪನ್ನೀರ್ ವಿರುದ್ಧ ಮತ್ತೊಂದು ಜಾಣ್ಮೆಯ ನಡೆ ಅನುಸರಿಸಿದ ಶಶಿಕಲಾ, ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ತಮ್ಮ ವಿಧೇಯ ಪಳನಿ ಸ್ವಾಮಿಯವರನ್ನು ತಂದು ಅವರು ಮುಖ್ಯಮಂತ್ರಿಯಾಗುವಂತೆ ನೋಡಿಕೊಂಡರು. ಆದರೂ, ಪಳನಿ ಸ್ವಾಮಿಯವರು ತಮಿಳುನಾಡು ವಿಧಾನ ಸಭೆಯಲ್ಲಿ ಬಹುಮತ ಸಾಬೀತುಪಡಿಸುವುದಿಲ್ಲ ಎಂದುಕೊಂಡಿದ್ದ ಪನ್ನೀರ್ ಅವರಿಗೆ ಅಲ್ಲೂ ನಿರಾಸೆಯಾಯಿತು. ಈ ಎಲ್ಲಾ ಬೆಳವಣಿಗೆಗಳಿಂದ ಅವರು ಕೊಂಚ ಮೆದುವಾದಂತೆ ಗೋಚರಿಸುತ್ತಿದೆ. ಹಾಗಾಗಿ, ಅವರು ಪುನಃ ಎಐಎಡಿಎಂಕೆ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಲಾಗಿದೆ.