ಶಶಿಕಲಾಗೆ ಕಾರು ಕೊಟ್ಟ ಸದಸ್ಯನೊಂದಿಗೆ ಏಳು ಜನರ ವಜಾ ಮಾಡಿದ ಎಐಎಡಿಎಂಕೆ
ಚೆನ್ನೈ, ಫೆಬ್ರುವರಿ 09: ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ನಾಲ್ಕು ವರ್ಷ ಜೈಲು ಪೂರೈಸಿ ಬೆಂಗಳೂರಿನಿಂದ ಸೋಮವಾರ ಶಶಿಕಲಾ ನಟರಾಜನ್ ತಮಿಳುನಾಡಿಗೆ ಮರಳುತ್ತಿದ್ದಂತೆ ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ ಆರಂಭವಾದಂತಿದೆ.
ಸೋಮವಾರವಷ್ಟೇ ತಮಿಳುನಾಡಿಗೆ ಶಶಿಕಲಾ ನಟರಾಜನ್ ಮರಳಿದ್ದು, ತಮಿಳುನಾಡಿನಲ್ಲಿ ಭರ್ಜರಿ ಸ್ವಾಗತ ದೊರೆತಿದೆ. ಎಐಎಡಿಎಂಕೆ ಪಕ್ಷದ ಕೆಲ ಸದಸ್ಯರೂ ಶಶಿಕಲಾ ಅವರಿಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ. ಈ ಬೆನ್ನಲ್ಲೇ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ, ಶಶಿಕಲಾಗೆ ಕಾರು ನೀಡಿದ್ದ ಸದಸ್ಯ ಸೇರಿದಂತೆ ಪಕ್ಷದ ಏಳು ಮಂದಿಯನ್ನು ಎಐಎಡಿಎಂಕೆಯಿಂದ ವಜಾಗೊಳಿಸಲಾಗಿದೆ. ಮುಂದೆ ಓದಿ...
ಶಶಿಕಲಾ ಅವರಿಗೆ ಕಾರು ನೀಡಿದ್ದಕ್ಕೆ ವಜಾ?
ಸೋಮವಾರ ಶಶಿಕಲಾ ನಟರಾಜನ್ ತಮಿಳುನಾಡಿಗೆ ಮರಳುತ್ತಿದ್ದಂತೆ ಎಐಎಡಿಎಂಕೆ ಪಕ್ಷದ ಏಳು ಮಂದಿಯನ್ನು ವಜಾಗೊಳಿಸಲಾಗಿದೆ. ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಆರೋಪದಲ್ಲಿ ಏಳು ಮಂದಿಯನ್ನು ವಜಾಗೊಳಿಸಿದ್ದು, ಇದರಲ್ಲಿ ಶಶಿಕಲಾ ಅವರಿಗೆ ತಮಿಳುನಾಡಿಗೆ ವಾಪಸ್ ಬರಲು ಕಾರು ನೀಡಿದ್ದ ಎಐಎಡಿಎಂಕೆ ಉಪ ಕಾರ್ಯದರ್ಶಿ ದಕ್ಷಿಣಮೂರ್ತಿ ಅವರೂ ಸೇರಿದ್ದಾರೆ. ಇನ್ನಿತರರು ಶಶಿಕಲಾ ಅವರ ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದವರು ಎನ್ನಲಾಗಿದೆ.
ಶೀಘ್ರದಲ್ಲೇ ನಿಮ್ಮನ್ನೆಲ್ಲ ಭೇಟಿಯಾಗುತ್ತೇನೆ, ಸಕ್ರಿಯ ರಾಜಕೀಯಕ್ಕೆ ಬರುತ್ತೇನೆ: ಶಶಿಕಲಾ
ಈ ಬಾರಿಯೂ ಪಕ್ಷದ ಧ್ವಜ ಬಳಸಿದ್ದ ಶಶಿಕಲಾ
ಬೆಂಗಳೂರಿನಿಂದ ತಮಿಳುನಾಡಿಗೆ ಪ್ರಯಾಣ ಮಾಡಲು ಶಶಿಕಲಾ ಎಐಎಡಿಎಂಕೆ ಸದಸ್ಯ ದಕ್ಷಿಣಮೂರ್ತಿ ಅವರ ಕಾರನ್ನು ಬಳಸಿದ್ದರು. ಈ ಕಾರಿನ ಮೇಲೆ ಪಕ್ಷದ ಧ್ವಜವೂ ಇದ್ದು, ಧ್ವಜ ತೆಗೆಯುವಂತೆ ಪೊಲೀಸರು ಸೂಚಿಸಿದ್ದರೂ ತೆರವುಗೊಳಿಸಿರಲಿಲ್ಲ. ಈ ಮುನ್ನ ತಮ್ಮ ಪಕ್ಷದ ಧ್ವಜವನ್ನು ಶಶಿಕಲಾ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಎಐಎಡಿಎಂಕೆ ಪ್ರಕರಣ ದಾಖಲಿಸಿತ್ತು.
"ಶೀಘ್ರವೇ ಪೂರ್ಣ ಪ್ರಮಾಣದ ರಾಜಕೀಯಕ್ಕೆ ಬರಲಿದ್ದೇನೆ"
ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ನಾಲ್ಕು ವರ್ಷದ ಬಳಿಕ ಮತ್ತೆ ತಮಿಳುನಾಡಿಗೆ ಮರಳಿರುವುದು ರಾಜಕೀಯದಲ್ಲಿ ಬಿರುಗಾಳಿ ತಂದಂತಿದೆ. ತಮಿಳುನಾಡಿಗೆ ಮರಳುತ್ತಿದ್ದಂತೆ ಶಶಿಕಲಾ ಅವರು ತಾವು ಸಕ್ರಿಯ ರಾಜಕಾರಣಕ್ಕೆ ಮರಳುವುದಾಗಿ ತಿಳಿಸಿದ್ದಾರೆ. 'ನಿಮ್ಮನ್ನು ಶೀಘ್ರವೇ ಭೇಟಿಯಾಗಲಿದ್ದೇನೆ; ಪೂರ್ಣ ಪ್ರಮಾಣದ ರಾಜಕೀಯ ಪ್ರವೇಶಿಸಲಿದ್ದೇನೆ' ಎಂದು ತಿಳಿಸಿದ್ದಾರೆ. "ಎಐಎಡಿಎಂಕೆ ಅನೇಕ ಸಂಕಷ್ಟಗಳನ್ನು ಎದುರಿಸಿದೆ. ಫೀನಿಕ್ಸ್ ರೀತಿ ಎದ್ದುಬಂದಿದೆ. ಎಲ್ಲರೂ ಜತೆಗೂಡಿ ಕೆಲಸ ಮಾಡಿ ನಮ್ಮ ಸಾಮಾನ್ಯ ವೈರಿಯನ್ನು ಬಗ್ಗುಬಡಿಯುವುದನ್ನು ಬಯಸುತ್ತೇನೆ' ಎಂದು ಹೇಳಿದ್ದರು.
"ದಿನಕರನ್ ಕಂಗಾಲಾಗಬೇಕಷ್ಟೆ"
ಶಶಿಕಲಾ ಅವರಿಗೂ ಎಐಎಡಿಎಂಕೆಗೂ ಸಂಬಂಧ ಇಲ್ಲ. ಎಐಎಡಿಎಂಕೆ ಧ್ವಜವನ್ನು ಬಳಸುವುದು ಅಕ್ರಮ ಎಂದು ಚೆನ್ನೈನಲ್ಲಿ ಹಿರಿಯ ಎಐಎಡಿಎಂಕೆ ಮುಖಂಡ ಹಾಗೂ ಮೀನುಗಾರಿಕಾ ಸಚಿವ ಡಿ ಜಯಕುಮಾರ್ ಹೇಳಿದ್ದರು. ಶಶಿಕಲಾ ನಟರಾಜನ್ ಬರುತ್ತಿದ್ದಂತೆ ನಿಮಗೆ ಆತಂಕವೂ ಉಂಟಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, "ನಮಗೆ ಯಾವುದೇ ಆತಂಕ ಇಲ್ಲ. ಹಲವು ವಿಷಯಗಳ ಕುರಿತು ಶಶಿಕಲಾ ಕೇಳುವ ಪ್ರಶ್ನೆಗೆ ದಿನಕರನ್ ಕಂಗಾಲಾಗಬೇಕಷ್ಟೆ" ಎಂದು ಹೇಳಿದ್ದರು.