ಜಯಾಗೆ ಜಾಮೀನು, ರಾಜಗೋಪುರಕ್ಕೆ ಬೆಂಕಿ!

ಕಲೈಯಾರ್ ಕೋವಿಲ್(ಕಾಳೀಶ್ವರ ದೇಗುಲ)ನ ಸುಮಾರು 150 ಅಡಿ ಎತ್ತರದ ರಾಜಗೋಪುರದ ಸಮೀಪದಲ್ಲೇ ಮತ್ತೊಂದು ಗೋಪುರ ನವೀಕರಣಗೊಳ್ಳುತ್ತಿತ್ತು. ಇದಕ್ಕೆ ಹುಲ್ಲಿನ ಹೊದಿಕೆ ಹಾಕಲಾಗಿತ್ತು. ಜಯಾಗೆ ಜಾಮೀನು ಸಿಕ್ಕಿದೆ ಎಂದು ನಂಬಿದ ಎಐಎಡಿಎಂಕೆ ಕಾರ್ಯಕರ್ತರು ಪಟಾಕಿ ಹಚ್ಚಿ ಸಂಭ್ರಮಿಸಿ ಮೈಮರೆತಿದ್ದಾರೆ. ಪಟಾಕಿ ಕಿಡಿ ಗೋಪುರದ ಹುಲ್ಲಿನ ಹೊದಿಕೆಗೆ ತಗುಲಿ ಗೋಪುರ ಬೆತ್ತಲಾಗಿ ಕಾಣಿಸತೊಡಗಿದೆ.
ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡ ಕೆಲವರು ಸಮೀಪದ ಶಿವಗಂಗಾ, ದೇವಕೊಟ್ಟೈ, ತಿರುವದನಾದೈನಿಂದ ಅಗ್ನಿಶಾಮಕ ದಳ ಕರೆಸಿಕೊಂಡಿದ್ದಾರೆ. ಅದಾಗಲೇ ಬೆಂಕಿ ತನ್ನ ಕೆನ್ನಾಲಗೆ ಚಾಚಿ 40 ಅಡಿ ಎತ್ತರದ ಮತ್ತೊಂದು ಗೋಪುರದ ಹುಲ್ಲಿನ ಹೊದಿಕೆಯನ್ನು ಸುಟ್ಟು ಭಸ್ಮ ಮಾಡಿದೆ. ಅಕ್ಕ ಪಕ್ಕದ ಗೋಪುರಗಳು ಹತ್ತಿ ಉರಿದರೂ ರಾಜಗೋಪುರ ಅಚಲವಾಗಿ ನಿಂತಿದೆ. ಅಷ್ಟರಲ್ಲಿ ಮಳೆರಾಯನೂ ಇವರ ಸಾಹಸ ನೋಡಿ ಜೋರಾಗಿ ಮಳೆ ಸುರಿಸಿದ್ದಾನೆ. [ರಾಜಗೋಪುರ ಪತನ, ಇದು ಅಪಶಕುನವೇ ?]
ಒಂದು ವೇಳೆ ರಾಜಗೋಪುರದ ಒಂದಿಂಚು ಹಾನಿಗೊಂಡಿದ್ದರೂ ನಾಡಿನ ಅರಸರಿಗೆ ಕೇಡುಗಾಲ ಕಾದಿತ್ತು. ಪುಣ್ಯಕ್ಕೆ ಹೆಚ್ಚಿನ ಹಾನಿ ಸಂಭವಿಸಲಿಲ್ಲ ಎಂದು ದೇಗುಲದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎ ರಾಜೇಂದ್ರನ್ ಹೇಳಿದ್ದಾರೆ. ಇತ್ತ ಬೆಂಕಿಯ ತಾಪ ಇಳಿಯುತ್ತಿದ್ದಂತೆ ಅತ್ತ ಜಯಾಗೆ ಜಾಮೀನು ಸಿಕ್ಕಿಲ್ಲ ಎಂಬ ಸುದ್ದಿ ಸ್ಫೋಟಗೊಂಡಿದೆ. ಪಟಾಕಿ ಹೊಡೆದು ಅನಾಹುತಕ್ಕೆ ಕಾರಣರಾಗಿದ್ದ ಎಐಎಡಿಎಂಕೆ ಕಾರ್ಯಕರ್ತರು ಪೆಚ್ಚುಮೋರೆ ಹಾಕಿಕೊಂಡು ಅಲ್ಲಿಂದ ಕಾಲ್ತಿಕ್ಕಿತ್ತರು ಎಂದು ತಿಳಿದು ಬಂದಿದೆ.












Click it and Unblock the Notifications