ತಮಿಳುನಾಡು: 17 ದಲಿತರ ಜೀವ ತೆಗೆದಿದ್ದು ಮಳೆಯಲ್ಲ, ಅಸ್ಪೃಶ್ಯತೆ
ಚೆನ್ನೈ, ಡಿಸೆಂಬರ್ 04: ತಮಿಳುನಾಡಿನ ಮೆಟ್ಟುಪಾಳ್ಯದಲ್ಲಿ ಭಾರಿ ಮಳೆಯಿಂದಾಗಿ ಗೋಡೆ ಕುಸಿದು 17 ಮಂದಿ ಸಾವನ್ನಪ್ಪಿದ ಘಟನೆ ಎರಡು ದಿನಗಳ ಹಿಂದಷ್ಟೆ ಎಲ್ಲ ಸುದ್ದಿಪತ್ರಿಕೆಗಳು, ವಾಹಿನಿಗಳಲ್ಲಿ ಪ್ರಕಟವಾಗಿತ್ತು. ಆದರೆ ಆ ದಲಿತರು ಸತ್ತಿದ್ದು ಮಳೆಯಿಂದಲ್ಲ, 'ಅಸ್ಪೃಶ್ಯತೆ' ಎಂಬ ಮೇಲ್ಜಾತಿಯವರ ಜಾತಿ ಅಹಂಕಾರಕ್ಕೆ.
ಘಟನೆ ನಡೆದ ಎರಡು ದಿನಗಳ ಬಳಿಕ ಘಟನೆಯ ಹಿಂದಿನ ಕಾರಣಗಳು ಒಂದೊಂದಾಗಿ ಹೊರಬರುತ್ತಿವೆ. ಮೆಟ್ಟುಪಾಳ್ಯದ ದುರಂತಕ್ಕೆ ಅಸ್ಪೃಶ್ಯತೆಯೇ ಕಾರಣ ಎಂಬುದು ಬಹಿರಂಗೊಂಡಿದೆ. ಘಟನೆ ನಡೆಯಲು ಮಳೆ ಮಾಧ್ಯಮವಷ್ಟೆ.
ಮೆಟ್ಟುಪಾಳ್ಯಂನ ನಡೂರು ಎಂಬಲ್ಲಿ ಭಾನುವಾರ ರಾತ್ರಿ 20 ಅಡಿ ಎತ್ತರದ ಗೋಡೆ ದಲಿತರ ಮನೆಗಳ ಮೇಲೆ ಉರುಳಿಬಿದ್ದ ಪರಿಣಾಮ ಮೂವರು ಮಕ್ಕಳು ಸೇರಿ ಒಟ್ಟು 17 ಮಂದಿ ಸಾವನ್ನಪ್ಪಿದ್ದರು. ಆದರೆ ದಲಿತರ ಮನೆಗಳ ಮೇಲೆ ಬಿದ್ದ ಗೋಡೆ ಸಾಮಾನ್ಯ ಗೋಡೆ ಆಗಿರಲಿಲ್ಲ ಅದು 'ಅಸ್ಪೃಶ್ಯತೆ'ಯ ಗೋಡೆ ಆಗಿತ್ತು.

ಮೇಲ್ಜಾತಿಗೆ ಸೇರಿದ್ದ ಶಿವಸುಬ್ರಹ್ಮಣಿಯಂ ಎಂಬ ಬಟ್ಟೆ ವ್ಯಾಪಾರಿ ಈ ಗೋಡೆಯನ್ನು ನಿರ್ಮಿಸಿದ್ದ. ತನ್ನ ಮನೆಯ ಅಂಗಳದಲ್ಲಿ ಹಿಂದೆಯೇ ಇದ್ದ ದಲಿತ ಕೇರೆಯ ಜನ ಹಾಯಬಾರದೆಂದು ಮೊದಲಿಗೆ ಎಂಟಡಿ ಇದ್ದ ಗೋಡೆಯನ್ನು ಒಮ್ಮೆಲೇ 20 ಅಡಿಗಳಿಗೆ ಏರಿಸಿದ್ದ.
ಎಂಟು ವರ್ಷಗಳ ಹಿಂದೆ ಗೋಡೆ ಎತ್ತರಿಸುವಾಗ ಕೆಲವು ದಲಿತರು ಪ್ರತಿಭಟಿಸಿದ್ದರು. ಆದರೆ ಮೇಲ್ಜಾತಿ ದರ್ಪದ ಮುಂದೆ ದಲಿತರ ದನಿ ಸಣ್ಣದಾಗಿತ್ತು. ಆದರೆ ಇಂದು ಜಾತಿ ಗೋಡೆಯ ಅಡಿ 17 ದಲಿತರು ಸಿಲುಕಿ ಸಮಾಧಿ ಆಗಿದ್ದಾರೆ.
ತಾನೇ ಕಟ್ಟಿಸಿದ್ದ ಗೋಡೆಯ ಅಡಿ ದಲಿತರು ಸಿಕ್ಕಿ ಸತ್ತಿರುವ ಬಗ್ಗೆ ಶಿವಸುಬ್ರಹ್ಮಣಿಯಂ ಹೀಗೆ ಹೇಳಿದ್ದಾರೆ; 'ರಾತ್ರಿ ಜೋರಾದ ಶಬ್ದ ಬಂದು ಎಚ್ಚರವಾಯ್ತು, ಹತ್ತಿದಲ್ಲಿ ಎಲ್ಲೋ ಸಿಡಿಲು ಬಡಿದಿರಬಹುದು ಎಂದುಕೊಂಡು ಮಲಗಿಬಿಟ್ಟೆ, ಬೆಳಿಗ್ಗೆ ಎದ್ದು ನೋಡಿದಾಗಲೇ ರಾತ್ರಿ ನಡೆದ ಘಟನೆ ಗೊತ್ತಾಗಿದ್ದು'. ದಲಿತರ ಚೀರಾಟ, ಕಾಪಾಡಿರೆಂದು ಇಟ್ಟ ಮೊರೆ ಶಿವಸುಬ್ರಹ್ಮಣಿಯಂ ಗೆ ಕೇಳಿಸಿಲ್ಲ.
ಘಟನೆ ನಡೆದ ಎರಡು ದಿನಗಳ ಬಳಿಕ ಈಗ ದಲಿತ ದನಿಗಳು ಮೇಲೆದ್ದಿವೆ. ಸೂಕ್ತ ಪರವಾನಗಿ ಪಡೆಯದೇ ಗೋಡೆ ಕಟ್ಟಿದ ಶಿವಸುಬ್ರಹ್ಮಣಿಯಂ ಮೇಲೆ ಪ್ರಕರಣ ದಾಖಲಾಗಿದೆ.












Click it and Unblock the Notifications