'ಅಧಿಕಾರಕ್ಕೆ ಬಂದರೆ ಪಂಜಾಬ್ನ ಸಾರಿಗೆ ಸಮಸ್ಯೆ ಬಗೆಹರಿಸುತ್ತೇವೆ': ಕೇಜ್ರಿವಾಲ್
ಜಿರಾಕ್ಪುರ, ಡಿಸೆಂಬರ್ 31: ಮುಂದಿನ ವರ್ಷ ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ ಎಎಪಿ ಪಂಜಾಬ್ನಲ್ಲಿ ಭರ್ಜರಿ ಪ್ರಚಾರವನ್ನು ನಡೆಸುತ್ತಿದೆ. ಇತ್ತೀಚೆಗೆ ನಡೆದ ಚಂಡೀಗಢ ಚುನಾವಣೆಯಲ್ಲಿ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸಿದ ಎಎಪಿ ಈಗ ಮುಂದಿನ ವರ್ಷದಲ್ಲಿ ಪಂಜಾಬ್ನಲ್ಲಿ ಅಧಿಕಾರ ಪಡೆಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಈ ಮಧ್ಯೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪಂಜಾಬ್ನಲ್ಲಿ ಹಲವಾರು ಚುನಾವಣಾ ಭರವಸೆಗಳನ್ನು ನೀಡುತ್ತಿದ್ದಾರೆ.
2022ರ ರಾಜ್ಯ ವಿಧಾನಸಭಾ ಚುನಾವಣೆಯ ನಂತರ ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಪಂಜಾಬ್ನಲ್ಲಿ ಸಾರಿಗೆ ಮಾಫಿಯಾವನ್ನು ಕೊನೆಗೊಳಿಸುವುದಾಗಿ ಮತ್ತು ಸಾರಿಗೆ ಕ್ಷೇತ್ರದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಾಗಿ ಆಪ್ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಭರವಸೆ ನೀಡಿದ್ದಾರೆ.
ಚಂಡೀಗಢಕ್ಕೆ ಭೇಟಿ ನೀಡಿದ ಅರವಿಂದ್ ಕೇಜ್ರಿವಾಲ್ ಜಿರಾಕ್ಪುರದಲ್ಲಿ ನಡೆದ ಸಾರಿಗೆದಾರರ ಧರಣಿಯಲ್ಲಿ ಭಾಗಿಯಾದರು. ಪ್ರತಿಭಟನಾಕಾರರು ಅರವಿಂದ್ ಕೇಜ್ರಿವಾಲ್ರಿಗೆ ಮನವಿ ಪತ್ರವನ್ನು ನೀಡಿದ್ದಾರೆ. ಈ ಮನವಿ ಪತ್ರವನ್ನು ಸ್ವೀಕಾರ ಮಾಡಿದ ಬಳಿಕ ಮಾತನಾಡಿದ ಅರವಿಂದ್ ಕೇಜ್ರಿವಾಲ್," ಆಮ್ ಆದ್ಮಿ ಪಕ್ಷದ ನಾಯಕರು ಪಂಜಾಬ್ನಲ್ಲಿ ಮುಂದಿನ ಸರ್ಕಾರವನ್ನು ರಚಿಸಿದರೆ, ಸಾರಿಗೆ ಮಾಫಿಯಾಗೆ ಅಂತ್ಯ ಹಾಡಲು ಸಾಧ್ಯವಾಗುತ್ತದೆ. ಪ್ರತಿಭಟನಾಕಾರರ ಎಲ್ಲಾ ಬೇಡಿಕೆಗಳಿಗೆ ಪೂರೈಸುತ್ತದೆ," ಎಂದು ಹೇಳಿದರು.

"ನಾನು ರಾಜಕೀಯ ನಾಯಕನಾಗಿ ಅಲ್ಲ, ನಿಮ್ಮ ಸಹೋದರನಾಗಿ ನಿಮ್ಮ ಬಳಿಗೆ ಬಂದಿದ್ದೇನೆ, ನಾನು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿ ನಿಮ್ಮ ಜೀವನೋಪಾಯವನ್ನು ಉಳಿಸಿದರೆ ಅದು ನನ್ನ ಅದೃಷ್ಟ. ಆದ್ದರಿಂದ ಮುಂದಿನ ಚುನಾವಣೆ ಬಳಿಕ ಸರ್ಕಾರವನ್ನು ರಚನೆ ಮಾಡಲು ಎಎಪಿಗೆ ಅವಕಾಶ ನೀಡಿ, ನೀವು ಎಂದಿಗೂ ಧರಣಿ ಮಾಡುವ ಅಗತ್ಯವೇ ಬರುವುದಿಲ್ಲ," ಎಂದು ತಿಳಿಸಿದರು.
"ಪಂಜಾಬ್ನಲ್ಲಿ ಸಾರಿಗೆ ಕ್ಷೇತ್ರಕ್ಕೆ ಆಯೋಗ ರಚನೆ"
ಹಾಗೆಯೇ ಪಂಜಾಬ್ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಸಾರಿಗೆ ಕ್ಷೇತ್ರಕ್ಕೆ ಆಯೋಗವನ್ನು ಸ್ಥಾಪಿಸುವುದಾಗಿ ಕೂಡಾ ಭರವಸೆ ನೀಡಿದರು. "ಪಂಜಾಬ್ನಲ್ಲಿ ಸಾರಿಗೆ ವಲಯಕ್ಕಾಗಿ ರಾಜ್ಯದ ಟ್ರಾನ್ಸ್ಪೋರ್ಟರ್ ಯೂನಿಯನ್ಗಳ ಪ್ರತಿನಿಧಿಗಳನ್ನು ಒಳಗೊಂಡಂತೆ 10 ರಿಂದ 15 ಸದಸ್ಯರ ಆಯೋಗವನ್ನು ರಚಿಸಲಾಗುತ್ತದೆ. ಈ ಆಯೋಗವು ಹೊಸ ಸಾರಿಗೆ ನೀತಿಯನ್ನು ರೂಪಿಸುತ್ತದೆಯೇ ಹೊರತು ಅಧಿಕಾರಿಗಳು ಮತ್ತು ಸಚಿವರು ಎಸಿ ಕೊಠಡಿಗಳಲ್ಲಿ ಕುಳಿತುಕೊಳ್ಳುವುದಿಲ್ಲ," ಎಂದರು.
"ಎಎಪಿ ಸರ್ಕಾರವನ್ನು ರಚನೆ ಮಾಡಿದ ಬಳಿಕ ಈ ಆಯೋಗದ ನಿರ್ಧಾರಗಳನ್ನು ಜಾರಿಗೆ ತರುತ್ತದೆ. ಇದರಿಂದಾಗಿ ಟ್ರಕ್ ಚಾಲಕರು ಸೇರಿದಂತೆ ಈ ವ್ಯವಹಾರದಲ್ಲಿ ತೊಡಗಿರುವ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಾಲಕಾಲಕ್ಕೆ ಪರಿಹರಿಸಬಹುದು," ಎಂದು ವಿವರಿಸಿದರು. "ಪಂಜಾಬ್ನಲ್ಲಿ ವ್ಯಾಪಾರಿಗಳು ಮತ್ತು ಟ್ರಕ್ ನಿರ್ವಾಹಕರ ನಡುವೆ ಭಿನ್ನಾಭಿಪ್ರಾಯವಿದೆ. ಈ ಎರಡೂ ಕಡೆಯಲ್ಲಿನ ಭಿನ್ನಾಭಿಪ್ರಾಯವನ್ನು ಬಗೆಹರಿಸುವ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಣೆ ಮಾಡುತ್ತೇವೆ," ಎಂದು ತಿಳಿಸಿದರು.
ಇನ್ನು ಇದ್ದಕ್ಕೂ ಮುನ್ನ ಅರವಿಂದ್ ಕೇಜ್ರಿವಾಲ್, "ಪಂಜಾಬ್ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ 18 ವರ್ಷ ಮೇಲ್ಪಟ್ಟ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಹಾಕಲಾಗುವುದು," ಎಂದು ಭರವಸೆ ನೀಡಿದ್ದರು. ಆದರೆ ಈ ಭರವಸೆಯು ಟೀಕೆಗೆ ಗುರಿಯಾಗಿತ್ತು. ಈಗಾಗಲೇ ಪಂಜಾಬ್ನ ಆರ್ಥಿಕ ಸ್ಥಿತಿ ಸರಿಯಾಗಿಲ್ಲ ಎಂದು ವಿರೋಧ ಪಕ್ಷಗಳು ಹೇಳಿದ್ದವು. ಇನ್ನು ಇದಕ್ಕೆ ತಿರುಗೇಟು ನೀಡಿದ್ದ ಅರವಿಂದ್ ಕೇಜ್ರಿವಾಲ್ "ಕಾಂಗ್ರೆಸ್, ಬಿಜೆಪಿ ಹಾಗೂ ಅಕಾಲಿದಳ ಎಂಬ ರಾಜ್ಯ ವಂಶದ ಪಕ್ಷಗಳು ಪಂಜಾಬ್ನಲ್ಲಿ ಆಡಳಿತ ನಡೆಸಿದೆ. ಈಗಾಗಲೇ ಈ ಪಕ್ಷಗಳು ಸರ್ಕಾರದ ಖಜಾನೆಯನ್ನು ಬರಿದು ಮಾಡಿ ಆಗಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications