ಪಂಜಾಬ್ ಸಿಎಂ ಸ್ಥಾನದಿಂದ ಅಮರಿಂದರ್ ಸಿಂಗ್ ರನ್ನು ತೆಗೆದಿದ್ದು ಏಕೆ?: ರಾಹುಲ್ ಗಾಂಧಿ ಬಿಚ್ಚಿಟ್ಟ ಗುಟ್ಟು
ಚಂಡೀಗಢ, ಫೆಬ್ರವರಿ 17: ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರನ್ನು ಸಿಎಂ ಸ್ಥಾನದಿಂದ ಕಾಂಗ್ರೆಸ್ ಏಕೆ ತೆಗೆದು ಹಾಕಿತು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಾಜ್ಯ ವಿಧಾನಸಭೆ ಚುನಾವಣೆ ಅಖಾಡದಲ್ಲಿ ನಿಂತ ರಾಹುಲ್ ಗಾಂಧಿ, ಮಾಜಿ ಸಿಎಂ ವಿರುದ್ಧ ಬೆಂಕಿ ಉಗುಳಿದ್ದಾರೆ.
ಫತೇಘರ್ ಸಾಹಿಬ್ ಪ್ರದೇಶದಲ್ಲಿ ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಬಡವರಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಸೇವೆ ಒದಗಿಸುವುದಕ್ಕೆ ಒಪ್ಪದಿರುವ ಕಾರಣಕ್ಕಾಗಿಯೇ ಅಮರೀಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಹಾಕಲಾಯಿತು ಎಂದು ಹೇಳಿದ್ದಾರೆ.
ಪಂಜಾಬ್ ಚುನಾವಣೆ: ಚುನಾವಣಾ ಅಧಿಕಾರಿಗಳಿಂದ ಮಾರ್ಗಸೂಚಿ ಬಿಡುಗಡೆ
ಪಂಜಾಬ್ ಮುಖ್ಯಮಂತ್ರಿಯಾಗಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಏಕೆ ತೆಗೆದುಹಾಕಲಾಯಿತು ಎಂಬುದನ್ನು ನಾನು ನಿಮಗೆ ಹೇಳುತ್ತೇನೆ. ನಾನು ವಿದ್ಯುತ್ ಸರಬರಾಜು ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಬಡ ಜನರಿಗೆ ಉಚಿತ ವಿದ್ಯುತ್ ನೀಡಲು ಸಾಧ್ಯವಿಲ್ಲ ಎಂದಿದ್ದಕ್ಕೆ ಅವರನ್ನು ತೆಗೆದು ಹಾಕಲಾಯಿತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮಾದಕ ವಸ್ತುಗಳು ಯಾವಾಗಲೂ ಅಪಾಯಕಾರಿ:
ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಕುರಿತು ಪ್ರಸ್ತಾಪಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, 'ಡ್ರಗ್ಸ್ ದೇಶಕ್ಕೆ ಅಪಾಯ ಎಂದು ಹೇಳುತ್ತಲೇ ಬಂದಿದ್ದೇನೆ, ಈಗ ಮತ್ತೆ ಹೇಳುತ್ತಿದ್ದೇನೆ. ಪಂಜಾಬ್ ಡ್ರಗ್ಸ್ ಕುರಿತು ಪ್ರಯೋಗ ಮಾಡಬೇಕಾದ ರಾಜ್ಯವಲ್ಲ. ಮಾದಕ ದ್ರವ್ಯಗಳು ಇಲ್ಲಿನ ಯುವಕರ ಜೀವನವನ್ನು ನಾಶಮಾಡುವುದನ್ನು ಮುಂದುವರೆಸಿದರೆ ಪಂಜಾಬ್ನಲ್ಲಿ ಅಭಿವೃದ್ಧಿ ಮತ್ತು ಬೆಳವಣಿಗೆ ಅರ್ಥಹೀನವಾಗುತ್ತದೆ ಎಂದಿದ್ದಾರೆ.
ಪಂಜಾಬ್ನಲ್ಲಿ ಡಬಲ್ ಇಂಜಿನ್ ಸರ್ಕಾರ ರಚನೆಯಾಗಬೇಕು: ಮೋದಿ
ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ:
ಇತ್ತೀಚಿಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಚುನಾವಣಾ ಭಾಷಣಗಳಲ್ಲಿ ದೇಶದ ನಿರುದ್ಯೋಗ ಮತ್ತು ಕಪ್ಪುಹಣದ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. ನೋಟು ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಯ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಿಡಿ ಕಾರಿದರು. ನೋಟ್ ಬ್ಯಾನ್ ಮತ್ತು ಜಿಎಸ್ ಟಿ ಜಾರಿಯಿಂದ ಎರಡ್ಮೂರು ಬಿಲಿಯನೇರ್ಗಳು ಮಾತ್ರ ಲಾಭ ಪಡೆದುಕೊಂಡಿದ್ದಾರೆ ಎಂದು ದೂಷಿಸಿದರು. "ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಚರಂಜಿತ್ ಸಿಂಗ್ ಚನ್ನಿ ಬಡತನವನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಬಡವರು, ರೈತರು, ಸಣ್ಣ ವ್ಯಾಪಾರಿಗಳು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳ ಪರ ಸರ್ಕಾರವನ್ನು ಚನ್ನಿ ಮುನ್ನೆಡೆಸುತ್ತಾರೆಯೇ ವಿನಃ ಕೋಟ್ಯಾಧಿಪತಿಗಳ ಸರ್ಕಾರವನ್ನಲ್ಲ," ಎಂದಿದ್ದರು.
ಒಂದೇ ಹಂತದಲ್ಲಿ ಪಂಜಾಬ್ ಚುನಾವಣೆ:
ಪಂಜಾಬ್ ವಿಧಾನಸಭೆಗೆ ಫೆಬ್ರವರಿ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ.