'ಹಾಗಾದರೆ ಗೋಧ್ರಾ ಹಿಂಸಾಚಾರಕ್ಕೆ ನರೇಂದ್ರ ಮೋದಿ ಕಾರಣಕರ್ತರೇ?'
ಚಂಡೀಗಡ, ಮೇ 11: 1984ರ ಸಿಖ್ ವಿರೋಧಿ ದಂಗೆ ಕುರಿತಂತೆ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಅವರ ವಿವಾದಾತ್ಮಕ ಹೇಳಿಕೆ ಚರ್ಚೆ ಹುಟ್ಟುಹಾಕಿರುವ ನಡುವೆಯೇ, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಪ್ರಧಾನಿ ಮೋದಿ ಅವರ ಮುಂದೆ ಪ್ರಶ್ನೆಯೊಂದನ್ನು ಇರಿಸಿದ್ದಾರೆ.
ರಾಜೀವ್ ಗಾಂಧಿ ಅವರನ್ನು ಸಿಖ್ ದಂಗೆಗೆ ತಳುಕು ಹಾಕಿದಂತೆ ಗುಜರಾತ್ನ ಗೋಧ್ರಾದಲ್ಲಿ 2002ರಲ್ಲಿ ನಡೆದ ಹಿಂಸಾಚಾರಕ್ಕೆ ಮೋದಿ ಅವರ ಹೆಸರನ್ನು ತಳುಕು ಹಾಕಿದರೆ ಏನಾಗಬಹುದು ಎಂದು ಅವರು ಪ್ರಶ್ನಿಸಿದ್ದಾರೆ.
'ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು 1984ರ ಸಿಖ್ ವಿರೋಧಿ ದಂಗೆಯೊಂದಿಗೆ ತಳುಕು ಹಾಕಿರುವುದು ತಪ್ಪು. ಯಾರಾದರೂ ಮೋದಿ ಅವರನ್ನು ಗೋಧ್ರಾ ಗಲಭೆಯೊಂದಿಗೆ ತಳುಕು ಹಾಕಲು ಆರಂಭಿಸಿದರೆ ಏನಾಗಬಹುದು?' ಎಂದು ಅಮರಿಂದರ್ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ಆಪ್ತ ಸ್ಯಾಮ್ ಪಿತ್ರೋಡಾ ಅವರು ಸಿಖ್ ಹತ್ಯಾಕಾಂಡದ ಕುರಿತು, 'ಆಗಿದ್ದು ಆಗಿದೆ, ಏನಿವಾಗ?' ಎಂದು ಪ್ರತಿಕ್ರಿಯೆ ನೀಡಿರುವುದಕ್ಕೆ ಅಮರಿಂದರ್ ಆಘಾತ ವ್ಯಕ್ತಪಡಿಸಿದ್ದಾರೆ. ಈ ಗಲಭೆಯಲ್ಲಿ ಯಾರಾದರೂ ಮುಖಂಡರು ಭಾಗಿಯಾಗಿದ್ದರೆ ಅವರನ್ನು ಕಾನೂನಿನ ಪ್ರಕಾರ ಶಿಕ್ಷಿಸಬೇಕು ಎಂದಿದ್ದಾರೆ.
ಇಂತಹ ಕಠೋರ ಮತ್ತು ಆಧಾರ ರಹಿತ ಆರೋಪ ಮಾಡುವ ಮೂಲಕ ಮೋದಿ ಅವರು ತಮ್ಮ ಸ್ಥಾನದ ಘನತೆಯನ್ನು ಕುಗ್ಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications