'ಪಂಜಾಬ್ನಲ್ಲಿ ಎಎಪಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ': ರಾಘವ್ ಚಡ್ಡಾ
ಚಂಡೀಗಢ, ಡಿಸೆಂಬರ್ 02: ಪಂಜಾಬ್ನ ಜನರಿಗೆ ಈಗ ದೆಹಲಿ ಮಾದರಿಯ ಆಡಳಿತವು ಬೇಕಾಗಿದೆ, ಇಲ್ಲಿನ ಜನರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಡಳಿತದ ಮಾದರಿಯು ಬೇಕಾಗಿದೆ ಎಂದು ಎಎಪಿ ನಾಯಕ, ಪಂಜಾಬ್ ಚುನಾವಣಾ ಉಸ್ತುವಾರಿ ರಾಘವ್ ಚಡ್ಡಾ ಗುರುವಾರ ಹೇಳಿದ್ದಾರೆ. ಹಾಗೆಯೇ ಈ ಸಂದರ್ಭದಲ್ಲೇ "ಎಎಪಿಯು ಸಂಪೂರ್ಣ ಬಹುಮತದೊಂದಿಗೆ ಪಂಜಾಬ್ನಲ್ಲಿ ಸರ್ಕಾರವನ್ನು ರಚನೆ ಮಾಡಲಿದೆ," ಎಂದು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರ ಆಪ್ತ, ಎಎಪಿಯ ರಾಷ್ಟ್ರೀಯ ಸಂಚಾಲಕರಾದ 32 ವರ್ಷ ಪ್ರಾಯದ ರಾಘವ್ ಚಡ್ಡಾ, "ಸರಿಯಾದ ಸಮಯವನ್ನು ನೋಡಿಕೊಂಡು ಪಂಜಾಬ್ನ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಲಾಗುವುದು," ಎಂದು ತಿಳಿಸಿದ್ದಾರೆ. "ಸಾಂಪ್ರಾದಾಯಿಕವಾದ ರಾಜಕೀಯ ಪಕ್ಷಗಳಾದ ಅಕಾಲಿದಳ ಹಾಗೂ ಕಾಂಗ್ರೆಸ್ನ ಆಡಳಿತದಿಂದಾಗಿ ಪಂಜಾಬ್ನ ಜನರು ಬೇಸತ್ತು ಹೋಗಿದ್ದಾರೆ. ಈಗ ಆಮ್ ಆದ್ಮಿ ಪಕ್ಷಕ್ಕೆ ಒಂದು ಅವಕಾಶವನ್ನು ನೀಡಲು ಪಂಜಾಬ್ನ ಜನರು ನಿರ್ಧಾರ ಮಾಡಿದ್ದಾರೆ," ಎಂದು ರಾಘವ್ ಚಡ್ಡಾ ಹೇಳಿಕೊಂಡಿದ್ದಾರೆ.
ಪಂಜಾಬ್, ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡ, ಗೋವಾದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಚುನಾವಣಾ ತಯಾರಿಯನ್ನು ಮಾಡುತ್ತಿದೆ. ದೆಹಲಿಯಲ್ಲಿ ತನ್ನ ಸರ್ಕಾರವನ್ನು ರಚಿಸಿ ಆಡಳಿತವನ್ನು ಮಾಡುತ್ತಿರುವ ಆಮ್ ಆದ್ಮಿ ಪಕ್ಷವು ಈಗ ಈ ವಿಧಾನಸಭೆ ಚುನಾವಣೆ ನಡೆಯುವ ರಾಜ್ಯಗಳ ಮೇಲೆ ಚಿತ್ತ ಇರಿಸಿದೆ. ಪಂಜಾಬ್ನಲ್ಲಿ ಎಎಪಿಯ ಚುನಾವಣಾ ಕಾರ್ಯಗಳ ಉಸ್ತುವಾರಿಯನ್ನು ರಾಘವ್ ಚಡ್ಡಾ ವಹಿಸಿಕೊಂಡಿದ್ದಾರೆ.

"ಪಂಜಾಬ್ನಲ್ಲಿ ನಾವು ಎಲ್ಲಿ ಹೋದರೂ ಕೂಡಾ ಜನರಲ್ಲಿ ಈ ಸಾಂಪ್ರಾದಾಯಿಕ ಪಕ್ಷಗಳ ಬಗ್ಗೆ ನಿರಾಸೆ ಇರುವುದು ಎದ್ದು ಕಾಣುತ್ತದೆ. ಜನರು ಅಕಾಲಿದಳ ಪಕ್ಷವನ್ನು ವಿರೋಧ ಮಾಡುತ್ತಾರೆ. ಹಾಗೆಯೇ ಕಾಂಗ್ರೆಸ್ನಿಂದಾಗಿ ಜನರು ದ್ರೋಹಗೊಂಡಿದ್ದಾರೆ. ಪಂಜಾಬ್ನ ಎಲ್ಲಾ ಪ್ರದೇಶದಲ್ಲಿ ಎಎಪಿ ಹಾಗೂ ಅರವಿಂದ್ ಕೇಜ್ರಿವಾಲ್ಗೆ ಒಂದು ಅವಕಾಶವನ್ನು ನೀಡಬೇಕು ಎಂಬ ಭಾವನೆಯು ಇದೆ. ಈ ಭಾವನೆಯು ಪಂಜಾಬ್ನ ಎಲ್ಲೆಡೆ ವ್ಯಾಪಿಸಿದೆ," ಎಂದು ತಿಳಿಸಿದರು. '
ಪಂಜಾಬ್ನಲ್ಲಿ ಎಎಪಿ ಗೆಲುವು ಖಚಿತ ಎಂದ ರಾಘವ್ ಚಡ್ಡಾ
"ಸಂಪೂರ್ಣವಾಗಿ ಬಹುಮತದೊಂದಿಗೆ ಈ ಬಾರಿ ಪಂಜಾಬ್ನಲ್ಲಿ ಎಎಪಿ ತನ್ನ ಸರ್ಕಾರವನ್ನು ರಚನೆ ಮಾಡಲಿದೆ. ಜನರಲ್ಲಿ ಎಎಪಿ ಗೆಲುವು ಸಾಧಿಸಬೇಕು ಎಂಬ ಭಾವನೆ ಇದೆ. ಕಾಂಗ್ರೆಸ್, ಅಕಾಲಿದಳದಿಂದ ಜನರು ಬಹಳ ಬೇಸರಗೊಂಡಿದ್ದಾರೆ. ಇದಕ್ಕಿಂತಲೂ ಅಧಿಕವಾಗಿ ದೆಹಲಿಯಲ್ಲಿ ಎಎಪಿ ಸಕಾರ ಮಾಡಿರುವ ಕಾರ್ಯಗಳು ಜನರಿಗೆ ತಿಳಿದಿದೆ," ಎಂದು ಹೇಳಿರುವ ರಾಘವ್ ಚಡ್ಡಾ, "ಪಂಜಾಬ್ನ ಜನರಲ್ಲಿ ಅರವಿಂದ್ ಕೇಜ್ರಿವಾಲ್ ಮೇಲೆ ಪ್ರೀತಿ ಹಾಗೂ ನಂಬಿಕೆ ಇದೆ. ದೆಹಲಿಯಲ್ಲಿ ಸದ್ಯ ಇರುವ ಆಡಳಿತದ ಮಾದರಿಯನ್ನು ಪಂಜಾಬ್ ರಾಜ್ಯದಲ್ಲಿ ಪುನಾವರ್ತನೆ ಮಾಡಲು ಜನರು ಬಯಸುತ್ತಾರೆ," ಎಂದರು.
ಇತ್ತೀಚಿಗೆ ಅತ್ಯಂತ ಸ್ಟೈಲಿಶ್ ಆದ ರಾಜಕಾರಣಿ (Most Stylish Politician) ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿರುವ ರಾಘವ್ ಚಡ್ಡಾ ಸದ್ಯ ಪಂಜಾಬ್ನ ಎಎಪಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ರಾಘವ್ ಚಡ್ಡಾ, "ದೆಹಲಿಯಲ್ಲಿನ ಸರ್ಕಾರದ ಕಾರ್ಯ ವೈಖರಿಯನ್ನು ನೋಡಿ ಈಗ ಪಂಜಾಬ್ನ ಜನರು ಎಎಪಿಗೆ ಪಂಜಾಬ್ನಲ್ಲಿ ಒಂದು ಅವಕಾಶವನ್ನು ನೀಡಬೇಕು ಎಂದು ನಿರ್ಧಾರ ಮಾಡಿದ್ದಾರೆ," ಎಂದು ತಿಳಿಸಿದ್ದಾರೆ.
ಪಂಜಾಬ್ನ ಎಎಪಿ ಸಿಎಂ ಅಭ್ಯರ್ಥಿ ಯಾರು?
ಇನ್ನು ಪಂಜಾಬ್ನಲ್ಲಿ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಮಾಧ್ಯಮ ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಇದು ರಾಜಕೀಯ ಕಾರ್ಯತಂತ್ರ ಎಂದು ಹೇಳಿ ನುಣುಚಿಕೊಂಡಿದ್ದಾರೆ. ಈ ಸಂದರ್ಭದಲ್ಲೇ ಪಂಜಾಬ್ನ ಎಎಪಿ ಮುಖ್ಯಸ್ಥರನ್ನು ಭಗ್ವಂತ್ ಮಣ್ರನ್ನು ಪಕ್ಷದ ಬೆನ್ನೆಲುಬು ಎಂದು ಕರೆದಿದ್ದಾರೆ. "ಭಗ್ವಂತ್ ಮಣ್ ಪಂಜಾಬ್ನ ಅತ್ಯುನ್ನತ ನಾಯಕರು. ಅವರು ತನ್ನ ಸಹೋದರ ಹಾಗೂ ಪಂಜಾಬ್ನಲ್ಲಿ ಎಎಪಿಯನ್ನು ಜೊತೆ ಮಾಡುವ ಒಂದು ಬಂಧ ಅವರಾಗಿದ್ದಾರೆ," ಎಂದು ವಿವರಿಸಿದ್ದಾರೆ. ಈ ನಡುವೆ ಎಎಪಿಯ ಹಲವಾರು ಬೆಂಬಲಿಗರು ಪಂಜಾಬ್ನಲ್ಲಿ ಭಗ್ವಂತ್ ಮಣ್ರನ್ನು ಎಎಪಿ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.












Click it and Unblock the Notifications