ಕಾಂಗ್ರೆಸ್ 20-30ಕ್ಕಿಂತ ಹೆಚ್ಚು ಸ್ಥಾನ ಪಡೆಯಲ್ಲ: ಕ್ಯಾಪ್ಟನ್ ಅಮರಿಂದರ್
ಚಂಡೀಗಢ, ಫೆಬ್ರವರಿ 20: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ 2022 ರಲ್ಲಿ ಕಾಂಗ್ರೆಸ್ 30 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಭಾನುವಾರ ಹೇಳಿದ್ದಾರೆ. ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಈ ನಡುವೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈ ಹೇಳಿಕೆಯನ್ನು ನೀಡಿದ್ದಾರೆ.
"ತಮ್ಮ ವಿರುದ್ಧವಾಗುವಂತಹ ಎಂತಹ ಕಾರ್ಯವನ್ನು ನಾನು ಮಾಡಬಹುದು ಎಂದು ಕಾಂಗ್ರೆಸ್ ಚಿಂತಿಸುತ್ತಿದೆ. ಕಾಂಗ್ರೆಸ್ 20-30 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ನಾನು ಊಹಿಸಬಲ್ಲೆ," ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದರು.
ಪಂಜಾಬ್ ಚುನಾವಣೆಯಲ್ಲಿ ಎಸ್ಎಡಿ-ಬಿಎಸ್ಪಿ ಕ್ಲೀನ್ ಸ್ವೀಪ್ ಎಂದ ಬಾದಲ್
"ಮಧ್ಯಾಹ್ನ 1 ಗಂಟೆಯವರೆಗೆ ಶೇಕಡ 30ಕ್ಕಿಂತ ಹೆಚ್ಚು ಮತದಾನವಾಗಿದೆ, ಇದು ಉತ್ತಮ ಸಂಕೇತವಾಗಿದೆ," ಎಂದು ಹೇಳಿದ ಪಂಜಾಬ್ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್, "ಬಿಜೆಪಿ-ಪಿಎಲ್ಸಿ ಮತ್ತು ಧಿಂಧ್ಸಾ ಪಕ್ಷವು ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದರೆ, ನಮಗೆ ಇನ್ನೇನು ಬೇಕು?," ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಅಮರಿಂದರ್ ವಾಗ್ದಾಳಿ
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕ್ಯಾಪ್ಟನ್, "ಚರಣ್ಜೀತ್ ಸಿಂಗ್ ಚನ್ನಿ ಯಾರು? 3 ತಿಂಗಳಲ್ಲಿ ಪಂಜಾಬ್ನಲ್ಲಿ ಪವಾಡ ಮಾಡಬಲ್ಲ ಜಾದೂಗಾರನಾ? ಚುನಾವಣೆಗೆ ಮುನ್ನ ಚನ್ನಿಯನ್ನು ಹೀರೋ ಮಾಡಲು ಪ್ರಯತ್ನ ಮಾಡಲಾಗಿದೆ. ಇಬ್ಬರೂ (ಚನ್ನಿ ಮತ್ತು ನವಜೋತ್ ಎಸ್ ಸಿಧು) ನಿಷ್ಪ್ರಯೋಜಕರು," ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್, ಎಎಪಿ, ಎಸ್ಎಡಿ-ಬಿಎಸ್ಪಿ ಮೈತ್ರಿ, ಬಿಜೆಪಿ-ಪಿಎಲ್ಸಿ-ಎಸ್ಎಡಿ (ಸಂಯುಕ್ತ) ಮತ್ತು ವಿವಿಧ ರೈತ ಸಂಘಟನೆಗಳ ರಾಜಕೀಯ ಮುಂಭಾಗವಾದ ಸಂಯುಕ್ತ ಸಮಾಜ ಮೋರ್ಚಾ ನಡುವೆ ಪಂಜಾಬ್ನಲ್ಲಿ ಸ್ಪರ್ಧೆ ನಡೆಯುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಹವಣಿಸುತ್ತಿರುವ ಆಡಳಿತಾರೂಢ ಕಾಂಗ್ರೆಸ್, ಮಾದಕ ವಸ್ತುಗಳ ಹಾವಳಿ, ಭ್ರಷ್ಟಾಚಾರ ಸೇರಿದಂತೆ ಹಲವು ವಿಷಯಗಳಲ್ಲಿ ರಾಜಕೀಯ ವಿರೋಧಿಗಳಿಂದ ತೀವ್ರ ದಾಳಿಗೆ ಒಳಗಾಗಿದೆ.
ಪಕ್ಷದ ಸಹೋದ್ಯೋಗಿ ಸೇರಿದಂತೆ ಎಲ್ಲಾ ಬಾದಲ್ಗಳನ್ನು ಸೋಲಿಸಿ ಎಂದ ಕಾಂಗ್ರೆಸ್ ಅಭ್ಯರ್ಥಿ!
ಪ್ರಸ್ತುತ ಸಿಎಂ ಚರಣ್ಜೀತ್ ಸಿಂಗ್ ಚನ್ನಿ ಅವರ 111 ದಿನಗಳ ಅಧಿಕಾರಾವಧಿಯಲ್ಲಿ ತೆಗೆದುಕೊಂಡ ವಿದ್ಯುತ್ ದರ ಮತ್ತು ಇಂಧನ ಬೆಲೆಗಳನ್ನು ಕಡಿಮೆ ಮಾಡುವ ನಿರ್ಧಾರಗಳನ್ನು ಕಾಂಗ್ರೆಸ್ಗೆ ಮತ ಬ್ಯಾಂಕ್ ಆಗುವ ಸಾಧ್ಯತೆ ಇದೆ. ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿರುವ ಆಮ್ ಆದ್ಮಿ ಪಕ್ಷವು ದೆಹಲಿಯ ಆಡಳಿತ ಮಾದರಿಯನ್ನು ಬಿಂಬಿಸುತ್ತಲೇ ಅಧಿಕಾರವನ್ನು ಕಾಂಗ್ರೆಸ್ ಕೈಯಿಂದ ಪಡೆದುಕೊಳ್ಳುವ ಯತ್ನದಲ್ಲಿದೆ.
ಯಾವುದೇ ಪಕ್ಷಕ್ಕೂ ಬಹುಮತವಿಲ್ಲ ಎಂದಿದ್ದ ಕ್ಯಾಪ್ಟನ್
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರುವುದಿಲ್ಲ ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಇತ್ತೀಚೆಗೆ ಹೇಳಿದ್ದಾರೆ. ''ನಾನು ನಿವೃತ್ತಿ ಹೊಂದಲು ಸಿದ್ಧನಿಲ್ಲ, ನನ್ನ ಜನರಿಗಾಗಿ ಕೆಲಸ ಮಾಡಲು ಬಯಸುತ್ತೇನೆ. ಇದು ನನ್ನ 9ನೇ ಚುನಾವಣೆ, ನಾನು ಎರಡು ಬಾರಿ ಸಂಸತ್ತಿಗೆ ಮತ್ತು ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ'' ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.
"ಬಹು-ಪಕ್ಷಗಳ ಸ್ಪರ್ಧೆಯು ಮತದಾರನಿಗೆ ತನಗೆ ಬೇಕಾದುದನ್ನು ನಿರ್ಧರಿಸಲು ಸುಲಭವಾಗುತ್ತದೆ. ಆದರೆ ಪಕ್ಷಗಳ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಇದು ಅವರಿಗೆ ಕಷ್ಟಕರವಾದ ಹೋರಾಟವಾಗಿದೆ. ಅವರಲ್ಲಿ ಹಲವರಿಗೆ 10, 15 ಸೀಟು ದಾಟುವ ಅವಕಾಶವೇ ಇಲ್ಲ. ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯುದಿಲ್ಲ ಅಂತ ಕಾಣಿಸುತ್ತಿದೆ," ಎಂದರು. 2021ರ ಸೆಪ್ಟೆಂಬರ್ನಲ್ಲಿ ಪಂಜಾಬ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಲಾಗಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ರನ್ನು ಸ್ಥಾನದಿಂದ ಕೆಳಗಿಳಿಸಿ, ಚರಣಜಿತ್ ಸಿಂಗ್ ಚನ್ನಿಯವರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರನ್ನು ಸಿಎಂ ಸ್ಥಾನದಿಂದ ಕಾಂಗ್ರೆಸ್ ಏಕೆ ತೆಗೆದು ಹಾಕಿತು ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಇತ್ತೀಚೆಗೆ ಉತ್ತರವನ್ನು ನೀಡಿದ್ದಾರೆ.
ಪಂಜಾಬ್ ಮುಖ್ಯಮಂತ್ರಿಯಾಗಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಏಕೆ ತೆಗೆದುಹಾಕಲಾಯಿತು ಎಂಬುದನ್ನು ನಾನು ನಿಮಗೆ ಹೇಳುತ್ತೇನೆ. ನಾನು ವಿದ್ಯುತ್ ಸರಬರಾಜು ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಬಡ ಜನರಿಗೆ ಉಚಿತ ವಿದ್ಯುತ್ ನೀಡಲು ಸಾಧ್ಯವಿಲ್ಲ ಎಂದಿದ್ದಕ್ಕೆ ಅವರನ್ನು ತೆಗೆದು ಹಾಕಲಾಯಿತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. (ಒನ್ಇಂಡಿಯಾ ಸುದ್ದಿ)