ಪಂಜಾಬ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದ ರಾಹುಲ್
ಚಂಡೀಗಢ, ಜನವರಿ 27: ಗುರುವಾರ ಜಲಂಧರ್ನಲ್ಲಿ ನಡೆಯಲಿರುವ ವರ್ಚುವಲ್ ರ್ಯಾಲಿಗೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೃತಸರದ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದರು. ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆಯಾಗಿ ರಾಹುಲ್ ಗಾಂಧಿ ಅಮೃತಸರದ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದರು.
ಇದಾದ ಬಳಿಕ ಲಂಧರ್ನ ಮಿಥಾಪುರ್ನಲ್ಲಿ, ರಾಹುಲ್ ಗಾಂಧಿ ಸಂಜೆ ದೆಹಲಿಗೆ ಹಿಂದಿರುಗುವ ಮೊದಲು "ಪಂಜಾಬ್ ಫತೇ" ವರ್ಚುವಲ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಬಗ್ಗೆ ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. 'ಹರ್ಮಂದಿರ್ ಸಾಹಿಬ್ ಎಲ್ಲರ ಹೃದಯದಲ್ಲಿದ್ದಾರೆ' ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
117 ಕಾಂಗ್ರೆಸ್ ಅಭ್ಯರ್ಥಿಗಳೊಂದಿಗೆ ಅಮೃತಸರಕ್ಕೆ ಭೇಟಿ ನೀಡಲು ರಾಹುಲ್ ಸಜ್ಜು
ಇದಕ್ಕೂ ಮುನ್ನ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಮತ್ತು ಉಪ ಮುಖ್ಯಮಂತ್ರಿಗಳಾದ ಸುಖಜಿಂದರ್ ಸಿಂಗ್ ರಾಂಧವಾ ಮತ್ತು ಒಪಿ ಸೋನಿ ಅವರು ದೆಹಲಿಯಿಂದ ಅಮೃತಸರ ವಿಮಾನ ನಿಲ್ದಾಣದಲ್ಲಿ ಗಾಂಧಿ ಅವರನ್ನು ಬರಮಾಡಿಕೊಂಡರು. ಬಳಿಕ ಜೊತೆಯಾಗಿ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದ್ದಾರೆ.
ಅವರ ಜೊತೆಗೆ 109 ಕಾಂಗ್ರೆಸ್ ಚುನಾವಣಾ ಅಭ್ಯರ್ಥಿಗಳೂ ಇದ್ದರು. ನಿನ್ನೆಯಷ್ಟೇ ಈ ಬಗ್ಗೆ ಮಾಹಿತಿ ನೀಡಿದ್ದ ಕಾಂಗ್ರೆಸ್ ಎಲ್ಲಾ 117 ಕಾಂಗ್ರೆಸ್ ಅಭ್ಯರ್ಥಿಗಳು ಜೊತೆಯಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದರು. ರಾಹುಲ್ ಗಾಂಧಿ ಲಂಗರ್ನಲ್ಲಿ ಊಟ ಮಾಡಿದರು. ಪಂಜಾಬ್ನ ಭವಿಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. "ಹರ್ಮಂದಿರ್ ಸಾಹಿಬ್ನಲ್ಲಿ ಪಂಜಾಬ್ನ ಭವಿಷ್ಯಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಗಳೊಂದಿಗೆ ಪ್ರಾರ್ಥನೆ ಸಲ್ಲಿಸಿದೆ. ಜೊತೆಯಾಗಿ ಕುಳಿತು ಲಂಗರ್ನಲ್ಲಿ ಪ್ರಸಾದ ಸೇವನೆ ಮಾಡಿದೆ," ಎಂದು ರಾಹುಲ್ ಗಾಂಧಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ ವಿದೇಶಕ್ಕೆ: ಪಂಜಾಬ್ ರ್ಯಾಲಿ ಮುಂದೂಡಿಕೆ, ಕಾಂಗ್ರೆಸ್ನಲ್ಲಿ ಅಸಮಾಧಾನ
ಎಲ್ಲಾ ಅಭ್ಯರ್ಥಿಗಳೊಂದಿಗೆ ಭೇಟಿಯಾಗಲಿದ್ದ ರಾಹುಲ್
2022 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲಾ 117 ಪಕ್ಷದ ಅಭ್ಯರ್ಥಿಗಳೊಂದಿಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನವರಿ 27 ರಂದು ಅಮೃತಸರ ಮತ್ತು ಜಲಂಧರ್ಗೆ ಭೇಟಿ ನೀಡಲಿದ್ದಾರೆ. ಈ ಮೂಲಕ ಚುನಾವಣೆಗೂ ಮುನ್ನ ಕಾಂಗ್ರೆಸ್ ಶಕ್ತಿ, ಒಗ್ಗಟ್ಟು ಪ್ರದರ್ಶನಕ್ಕೆ ರಾಹುಲ್ ಗಾಂಧಿ ಮುಂದಾಗಿದ್ದಾರೆ ಎಂದು ವರದಿಯು ಉಲ್ಲೇಖ ಮಾಡಿತ್ತು. ಈ ಹಿಂದೆ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯ ರ್ಯಾಲಿಯನ್ನು ಜನವರಿ 3 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ದಿಡೀರ್ ಆಗಿ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿದ್ದರು. ಅದು ಹಲವಾರು ಗೊಂದಲಗಳಿಗೆ ಕಾರಣವಾಗಿತ್ತು.
ಈ ನಡುವೆ ಮುಂದಿನ ತಿಂಗಳು ನಡೆಯಲಿರುವ ರಾಜ್ಯ ಚುನಾವಣೆಗಾಗಿ ರೋಡ್ಶೋಗಳು ಮತ್ತು ರ್ಯಾಲಿಯ ಮೇಲಿನ ನಿಷೇಧವನ್ನು ಚುನಾವಣಾ ಆಯೋಗವು ಈ ತಿಂಗಳ ಅಂತ್ಯದವರೆಗೆ ವಿಸ್ತರಣೆ ಮಾಡಿದೆ. ಆದರೆ ಜನವರಿ 28 ರಿಂದ ಫೆಬ್ರವರಿ 8 ರವರೆಗೆ ನಿಗದಿಪಡಿಸಿದ ತೆರೆದ ಸ್ಥಳಗಳಲ್ಲಿ , 500 ಜನರು ಅಥವಾ ಶೇಕಡ 50ರಷ್ಟು ಜನರ ಸಮ್ಮುಖದಲ್ಲಿ ಸಭೆಯನ್ನು ನಡೆಸಲು ಅವಕಾಶ ನೀಡಲಾಗಿದೆ.
ಈ ಹಿಂದೆ ಕಾರ್ಯಕ್ರಮ ನಿಗದಿ ಆದ ಬಳಿಕ ರಾಹುಲ್ ಗಾಂಧಿ ವಿದೇಶ ಪ್ರವಾಸ ಹೊರಟ್ಟಿದ್ದರಿಂದ ಕಾಂಗ್ರೆಸ್ನಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ವಿಧಾನಸಭೆ ಚುನಾವಣೆಗಾಗಿ ಎಲ್ಲಾ ಸಿದ್ದತೆಗಳು ನಡೆಯುತ್ತಿರುವ ನಡುವೆ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿರುವುದು ಕಾಂಗ್ರೆಸ್ನಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿತ್ತು. ನವೆಂಬರ್ನಲ್ಲಿ ಸುಮಾರು ಮೂರು ವಾರಗಳ ಕಾಲ ಅಜ್ಞಾತ ವಿದೇಶಿ ಸ್ಥಳದಲ್ಲಿ ರಾಹುಲ್ ಗಾಂಧಿ ಇದ್ದರು. ಈ ನಡುವೆ ಪಂಜಾಬ್ ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಮತ್ತು ಪಕ್ಷಾಂತರ ನಡೆಯುತ್ತಿದೆ. ಈ ನಡುವೆ ಮತ್ತೆ ರಾಹುಲ್ ವಿದೇಶಕ್ಕೆ ತೆರಳಿರುವುದು ಕಾಂಗ್ರೆಸ್ನ ಪಂಜಾಬ್ ಘಟಕದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. (ಒನ್ಇಂಡಿಯಾ ಸುದ್ದಿ)