ಪಂಜಾಬ್ ಕಾಂಗ್ರೆಸ್ನಲ್ಲಿ ನಿಲ್ಲದ ಆಂತರಿಕ ಕಲಹ: ಚನ್ನಿ ವಿರುದ್ಧ ತಿವಾರಿ ಕಿಡಿ
ಚಂಡೀಗಢ, ಜನವರಿ 12: ಬರುವ ತಿಂಗಳಿನಲ್ಲಿ ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಚುನಾವಣಾ ತಯಾರಿಯಲ್ಲಿ ತೊಡಗಿದೆ. ಈ ನಡುವೆ ಪಂಜಾಬ್ ಕಾಂಗ್ರೆಸ್ನಲ್ಲಿನ ಆಂತರಿಕ ಕಲಹ ಮಾತ್ರ ಕೊನೆಯಾಗಿಲ್ಲ. ಇನ್ನಷ್ಟು ಹೆಚ್ಚೇ ಆಗುತ್ತಿದೆ. ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಈಗ ಪಂಜಾಬ್ ಮುಖ್ಯಮಂತ್ರಿ, ಸಹವರ್ತಿ ಪಕ್ಷದ ಸಹೋದ್ಯೋಗಿ ಚರಂಜಿತ್ ಸಿಂಗ್ ಚನ್ನಿ ವಿರುದ್ಧ ವ್ಯಂಗ್ಯವಾಡಿದ್ದಾರೆ
"ಪಂಜಾಬ್ಗೆ ರಾಜ್ಯದ ಸವಾಲುಗಳಿಗೆ ಪರಿಹಾರಗಳನ್ನು ಕಂಡು ಕೊಳ್ಳಲು ಸಾಧ್ಯವಾಗುವ ಹಾಗೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಖ್ಯಮಂತ್ರಿಯ ಅಗತ್ಯವಿದೆ. ರಾಜ್ಯಕ್ಕೆ ರಾಜಕೀಯ ಮನರಂಜನೆಯಲ್ಲದ, ಬಿಟ್ಟಿಕೊಡುಗೆಯಲ್ಲದ ಸಿಎಂ ಬೇಕು," ಎಂದು ಹೇಳಿದ್ದಾರೆ. ಜಿ -23 ನ ಸದಸ್ಯ ತನ್ನ ಟ್ವಿಟ್ಟರ್ನಲ್ಲಿ ಚುನಾವಣೆಯನ್ನು ಎದುರು ನೋಡುತ್ತಿರುವ ರಾಜ್ಯದಲ್ಲಿ ಗಂಭೀರ ವ್ಯಕ್ತಿಗಳು ಮುಖ್ಯಸ್ಥರಾಗಬೇಕಾದ ಅಗತ್ಯವಿದೆ ಎಂದು ಬರೆದುಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ, "ಪಂಜಾಬ್ಗೆ ಗಂಭೀರ ಜನರು ಬೇಕಾಗಿದ್ದಾರೆ. ರಾಜಕೀಯ ಎಂಬುವುದು ಮನರಂಜನೆ, ಬಿಟ್ಟಿ ಕೊಡುಗೆ, ಸತತ ಚುನಾವಣೆಗಳಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟ ಆಡಳಿತದ ಮುಂಚೂಣಿಗಳು ಅಲ್ಲ," ಎಂದು ಚನ್ನಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಫೆಬ್ರವರಿ 14 ರಂದು ನಡೆಯಲಿರುವ ತನ್ನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಇನ್ನೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸಿಲ್ಲ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ. ಇನ್ನು ಪಕ್ಷದ ಪಂಜಾಬ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಹೊರತುಪಡಿಸಿ ಉತ್ತರ ರಾಜ್ಯದ ಕಾಂಗ್ರೆಸ್ ಘಟಕದ ಪ್ರಮುಖ ಮುಖಗಳಲ್ಲಿ ಚನ್ನಿ ಕೂಡಾ ಒಬ್ಬರಾಗಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಚನ್ನಿ ಪಂಜಾಬ್ ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿಯಾದರು.
ಪಂಜಾಬ್ನ ಮುಂದಿನ ಮುಖ್ಯಮಂತ್ರಿ ಯಾರು?
ಈ ನಡುವೆ ಪಂಜಾಬ್ನ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಅಲ್ಲಿನ ಜನರು ನಿರ್ಧರಿಸುತ್ತಾರೆ ಎಂದು ಸಿಧು ಮಂಗಳವಾರ ಹೇಳಿದ್ದಾರೆ. ಈ ಮೂಲಕ ಪಕ್ಷಕ್ಕೆ ಹೊಸ ವಾರ್ನಿಂಗ್ ನೀಡಿದ್ದಾರೆ. ತನ್ನದೇ ಆದ ನೀತಿಯ ಪ್ರಕಾರ ನಡೆದುಕೊಂಡು ಹೋಗುತ್ತಿರುವ ಸಿಧು ಪಕ್ಷದ ನಿಲುವಿಗೆ ವಿರುದ್ಧವಾಗಿ ಹಲವಾರು ಹೇಳಿಕೆಯನ್ನು ನೀಡಿದ್ದಾರೆ. "ನಿಮ್ಮ ಮನಸ್ಸಿನಲ್ಲಿ ಸುಳ್ಳು ಸುಳಿವು ಬೇಡ. ಪಂಜಾಬ್ನ ಜನರು ಶಾಸಕರನ್ನು ಆಯ್ಕೆ ಮಾಡುತ್ತಾರೆ ಮತ್ತು ಮುಖ್ಯಮಂತ್ರಿ ಯಾರು ಎಂದು ಅವರೇ ನಿರ್ಧರಿಸುತ್ತಾರೆ," ಎಂದು ಮಂಗಳವಾರ ಸಿಧು ತಿಳಿಸಿದ್ದಾರೆ. ಯಾರು ಮುಖ್ಯಮಂತ್ರಿಯಾಗಬೇಕೆಂದು ಪಂಜಾಬ್ನ ಜನರು ನಿರ್ಧರಿಸುತ್ತಾರೆ, ನಿಮಗೆ (ಕಾಂಗ್ರೆಸ್) ಹೈಕಮಾಂಡ್ ಸಿಎಂ ಮಾಡುತ್ತದೆ ಎಂದು ಯಾರು ಹೇಳಿದರು?," ಎಂದು ಪ್ರಶ್ನೆ ಮಾಡಿದ್ದಾರೆ. ಜನವರಿ 4 ರಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಿಧು, ಪಂಜಾಬ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸುವುದು ಕಾಂಗ್ರೆಸ್ ನಾಯಕತ್ವಕ್ಕೆ ಬಿಟ್ಟದ್ದು ಎಂದು ಹೇಳಿದ್ದರು.
2017ರಲ್ಲಿ 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಸಂಪೂರ್ಣ ಬಹುಮತವನ್ನು ಗಳಿಸಿ 10 ವರ್ಷಗಳ ಆಡಳಿತ ನಡೆಸಿದ ಎಸ್ಎಡಿ-ಬಿಜೆಪಿ ಸರ್ಕಾರವನ್ನು ಕೆಡವಿತು. ಆಮ್ ಆದ್ಮಿ ಪಕ್ಷ 20 ಸ್ಥಾನಗಳನ್ನು ಗೆದ್ದು ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಶಿರೋಮಣಿ ಅಕಾಲಿ ದಳ (ಎಸ್ಎಡಿ) ಕೇವಲ 15 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಬಿಜೆಪಿ 3 ಸ್ಥಾನಗಳನ್ನು ಪಡೆದುಕೊಂಡಿತ್ತು. ಈಗ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ಮತ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications