ಪಂಜಾಬ್ ಚುನಾವಣೆ: ಪ್ರಣಾಳಿಕೆ ಬಗ್ಗೆ 'ಕೈ' ನಾಯಕರಲ್ಲಿ ಭಿನ್ನಾಭಿಪ್ರಾಯ
ಚಂಡೀಗಢ ಜನವರಿ 22: ಪಂಜಾಬ್ ವಿಧಾನಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಸಿದ್ಧತೆಯಲ್ಲಿ ತೊಡಗಿವೆ. ಈ ಸಮಯದಲ್ಲಿ ಪಂಜಾಬ್ ಕಾಂಗ್ರೆಸ್ ನಾಯಕರ ನಡುವೆ ಭಿನ್ನಾಭಿಪ್ರಾಯಗಳು ಮತ್ತೆ ಕಾಣಿಸಿಕೊಳ್ಳುತ್ತಿವೆ. ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆಯಾದ ನಂತರ ಪಕ್ಷದ ನಾಯಕರಲ್ಲಿ ಬಂಡಾಯ ಶುರುವಾಗಿದೆ. ಇದೀಗ ಚುನಾವಣಾ ಪ್ರಣಾಳಿಕೆ ವಿಚಾರವಾಗಿ ಪಕ್ಷದ ಮುಖಂಡರ ನಡುವೆಯೇ ಭಿನ್ನಾಭಿಪ್ರಾಯಗಳ ಸುದ್ದಿ ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ, ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು ಟಿಕೆಟ್ ಆಕಾಂಕ್ಷಿಗಳು ಕೆಲವು ಸ್ಥಳೀಯ ವಿಷಯಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲು ಕಾಂಗ್ರೆಸ್ ಹೈಕಮಾಂಡ್ಗೆ ಸೂಚಿಸಿದ್ದಾರೆ. ಆದರೆ ಪಕ್ಷವು ಅವರ ಸಲಹೆಗಳನ್ನು ತಿರಸ್ಕರಿಸಿದೆ ಎನ್ನಲಾಗುತ್ತಿದೆ. ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ವಿಷಯಗಳು ರಾಜ್ಯದ ಎಲ್ಲಾ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅಭ್ಯರ್ಥಿಗಳು ವಾದಿಸಿದ್ದಾರೆಂದು ತಿಳಿದುಬಂದಿದೆ. ಸ್ಥಳೀಯ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ಗೆಲ್ಲುವ ಅಭ್ಯರ್ಥಿಗಳ ಮೇಲಿದೆ. ಹೀಗಾಗಿ ಈ ವಿಚಾರ ಸದ್ಯ ಮನಸ್ತಾಪಗಳಿಗೆ ಕಾರಣವಾಗಿದೆ.
ಪಂಜಾಬ್ ಕಾಂಗ್ರೆಸ್ನಲ್ಲಿ ಭಿನ್ನಾಭಿಪ್ರಾಯ
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಪಂಜಾಬ್ ನಲ್ಲಿ ಕಾರ್ಯವೈಖರಿ ಬಗ್ಗೆಯೂ ಪಕ್ಷದ ನಾಯಕರಲ್ಲಿ ಭಿನ್ನಾಭಿಪ್ರಾಯವಿದೆ. ಮೂಲಗಳ ಪ್ರಕಾರ, ಅಭ್ಯರ್ಥಿಗಳು ನವಜೋತ್ ಸಿಂಗ್ ಸಿಧು ಅವರು ರಚಿಸಿದ ಮಾದರಿ ಪ್ರಣಾಳಿಕೆಯಲ್ಲಿ ಕೆಲ ವಿಷಯಗಳನ್ನು ಸೇರಿಸಲು ಒತ್ತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಂಜಾಬ್ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪ್ರತಾಪ್ ಸಿಂಗ್ ಬಾಜ್ವಾ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು. ಸದ್ಯದಲ್ಲೇ ಪ್ರಣಾಳಿಕೆ ಸಮಿತಿ ಪ್ರಣಾಳಿಕೆ ಬಿಡುಗಡೆ ಮಾಡಲಿದೆ ಎಂದರು. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಧು ಅವರ ಘೋಷಣೆಗಳು ಮತ್ತು ಅವರ ಮಾದರಿಯನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗುತ್ತದೆಯೇ ಎಂದು ವರದಿಗಾರರು ಅವರನ್ನು ಕೇಳಿದಾಗ? ಈ ಕುರಿತು ಪ್ರತಾಪ್ ಸಿಂಹ ಬಾಜ್ವಾ ಅವರು, ಪ್ರಣಾಳಿಕೆಯು ಯಾವುದೇ ನಿರ್ದಿಷ್ಟ ವ್ಯಕ್ತಿಯದ್ದಾಗಿರುವುದಿಲ್ಲ, ಇದರಲ್ಲಿ ಕಾಂಗ್ರೆಸ್ನ ಎಲ್ಲಾ ಸದಸ್ಯರ ಅಭಿಪ್ರಾಯವನ್ನು ಸೇರಿಸಲಾಗುವುದು ಎಂದು ಹೇಳಿದ್ದಾರೆ.
ಎಲ್ಲರ ಸಲಹೆ ಮೇರೆಗೆ ಪ್ರಣಾಳಿಕೆ ಸಿದ್ಧ
ಪಂಜಾಬ್ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪ್ರತಾಪ್ ಸಿಂಗ್ ಬಾಜ್ವಾ ಮಾತನಾಡಿ, ಪ್ರಣಾಳಿಕೆಗೆ ಎಲ್ಲಾ ಕಾಂಗ್ರೆಸ್ ಸದಸ್ಯರಿಂದಲೂ ಸಲಹೆಗಳನ್ನು ತೆಗೆದುಕೊಳ್ಳಲಾಗಿದೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಮತ್ತು ಹಣಕಾಸು ಸಚಿವ ಮನ್ಪ್ರೀತ್ ಸಿಂಗ್ ಬಾದಲ್ ಸೇರಿದಂತೆ ಹಲವರು ಸಲಹೆ ನೀಡಿದ್ದಾರೆ. ಪ್ರತಿಯೊಬ್ಬರೂ ತಮ್ಮದೇ ಆದ ಸಲಹೆಗಳನ್ನು ನೀಡಿದ್ದಾರೆ. ಪ್ರಣಾಳಿಕೆಯು ಸಂಕ್ಷಿಪ್ತವಾಗಿರುತ್ತದೆ ಮತ್ತು ಅನೇಕ ಉತ್ತಮ ಸಲಹೆಗಳನ್ನು ಒಳಗೊಂಡಿರುತ್ತದೆ. ಈಡೇರಿಸಬಹುದಾದ ಭರವಸೆಗಳನ್ನು ಮಾತ್ರ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು. ಎರಡನೇ ಹಸಿರು ಕ್ರಾಂತಿ, ಗೋಧಿ ಮತ್ತು ಭತ್ತದ ಬೆಳೆ ವಲಯದಿಂದ ರೈತರನ್ನು ಹೊರತರುವುದು ಮುಂತಾದ ವಿಷಯಗಳ ಮೇಲೆ ಪ್ರಣಾಳಿಕೆಯು ಗಮನಹರಿಸಲಿದೆ ಎಂದು ಅವರು ಹೇಳಿದರು. ಇದರೊಂದಿಗೆ ಇತ್ತೀಚೆಗೆ ನವಜೋತ್ ಸಿಂಗ್ ಸಿಧು ಅವರು ಕೃಷಿ ವಿಷಯದ ಬಗ್ಗೆ ತಮ್ಮ ಮಾದರಿಯನ್ನು ಪ್ರಸ್ತುತಪಡಿಸುವಾಗ ಹಳದಿ ಕ್ರಾಂತಿಯನ್ನು ತರಲು ಒತ್ತು ನೀಡಿದ್ದರು.
ಸಾಮರ್ಥ್ಯ ನೋಡಿ ಭರವಸೆ
ಕಳೆದ ಕೆಲವು ವರ್ಷಗಳಲ್ಲಿ 75 ಲಕ್ಷ ಪಂಜಾಬಿಗಳು ವಿದೇಶಕ್ಕೆ ಹೋಗಿದ್ದಾರೆ ಎಂದು ಪ್ರತಾಪ್ ಸಿಂಗ್ ಬಾಜ್ವಾ ಹೇಳಿದ್ದಾರೆ. ಪ್ರತಿ ವರ್ಷ ಸುಮಾರು 1.5 ಲಕ್ಷ ಯುವಕರು ಉದ್ಯೋಗ ಅರಸಿ ವಿದೇಶಕ್ಕೆ ತೆರಳುತ್ತಿದ್ದಾರೆ. ಅವರು ವಲಸೆ ಹೋಗುವುದನ್ನು ನಿಲ್ಲಿಸಬೇಕು ಅಥವಾ ಕೆಲವು ವರ್ಷಗಳ ನಂತರ ಪಂಜಾಬಿಗಳು ಪಂಜಾಬಿನಲ್ಲಿಯೇ ಅಲ್ಪಸಂಖ್ಯಾತರಾಗಿ ಉಳಿಯುತ್ತಾರೆ. ಪ್ರಣಾಳಿಕೆಯಲ್ಲಿಯೂ ಈ ಅಂಶಕ್ಕೆ ಹೆಚ್ಚಿನ ಗಮನ ನೀಡಲಾಗುವುದು. ಇದೇ ವೇಳೆ ಮಹಿಳಾ ಸಬಲೀಕರಣ, ಕೈಗಾರಿಕೆ ಮತ್ತು ಕಾರ್ಮಿಕ ವರ್ಗದ ವಿಷಯವನ್ನೂ ಗಮನದಲ್ಲಿರಿಸಿಕೊಳ್ಳಲಾಗುವುದು ಎಂದು ಹೇಳಿದರು. ಕ್ರೀಡೆ ಮತ್ತು ಪಂಜಾಬಿ ಸಂಸ್ಕೃತಿಯ ಬಗ್ಗೆಯೂ ವಿಶೇಷ ಗಮನ ಹರಿಸಲಾಗುವುದು ಎಂದು ಹೇಳಿದರು. ಇದೇ ವೇಳೆ ಪ್ರಣಾಳಿಕೆಯಲ್ಲಿ ಸೇರಿಸುವುದಾಗಿ ವಿದ್ಯಾರ್ಥಿನಿಯರಿಗೆ ನವಜೋತ್ ಸಿಂಗ್ ಸಿಧು ನೀಡಿದ ಭರವಸೆಗೆ ಅವರು ಯಾವುದೇ ನಿಖರ ಉತ್ತರ ನೀಡಲಿಲ್ಲ. ಪಂಜಾಬ್ನ ಮೂಲಗಳು ಮತ್ತು ಸಾಮರ್ಥ್ಯಗಳನ್ನು ನೋಡಿದ ನಂತರವೇ ಪಕ್ಷವು ಯಾವುದೇ ಭರವಸೆಗಳನ್ನು ನೀಡುತ್ತದೆ ಎಂದು ಪ್ರತಾಪ್ ಸಿಂಗ್ ಬಾಜ್ವಾ ಹೇಳಿದರು.