'ದೇಶದ್ರೋಹಿ' ಸಿಧುವನ್ನು ಕಾಂಗ್ರೆಸ್ಸಿನಿಂದ ಅಮಾನತು ಮಾಡಿ : ಶಿರೋಮಣಿ ಅಕಾಲಿ ದಳ
Recommended Video

ಚಂಡಿಗಢ, ಫೆಬ್ರವರಿ 18 : ಪುಲ್ವಾಮಾದಲ್ಲಿ ನಲವತ್ತೊಂಬತ್ತು ಭಾರತೀಯ ಯೋಧರ ಹತ್ಯೆ ನಡೆದರೂ, ಇದರಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ಆರೋಪಿಸಲಾಗುತ್ತಿದ್ದರೂ, ಈ ಹತ್ಯೆಯ ಹಿಂದೆ ಪಾಕಿಸ್ತಾನದ ಯಾವುದೇ ತಪ್ಪಿಲ್ಲ ಎನ್ನುತ್ತಿರುವ ಪಂಜಾಬ್ ಸಚಿವ ನವಜ್ಯೋತ್ ಸಿಂಗ್ ಸಿಧು ಅವರನ್ನು 'ದೇಶದ್ರೋಹಿ' ಎಂದು ಪ್ರಕಾಶ್ ಸಿಂಗ್ ಬಾದರ್ ಅವರು ಆರೋಪಿಸಿದ್ದಾರೆ.
ಶಿರೋಮಣಿ ಅಕಾಲಿ ದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್ ಅವರು, ಪಾಕಿಸ್ತಾನದ ಪರವಾಗಿ ಕಾಮೆಂಟ್ ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕ್ರಿಕೆಟ್ ಆಟಗಾರ ನವಜ್ಯೋತ್ ಸಿಂಗ್ ಸಿಧು ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಬೇಕು, ಸಂಪುಟದಿಂದ ಕಿತ್ತು ಬಿಸಾಡಬೇಕು ಮತ್ತು ದೇಶವಿರೋಧಿ ಹೇಳಿಕೆ ನೀಡಿರುವ ಅವರ ಮತ್ತು ಇತರರ ವಿರುದ್ಧ ಪ್ರಕರಣವನ್ನು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಪುಲ್ವಾಮಾ ದಾಳಿಯನ್ನು ಖಂಡಿಸಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ನಿರ್ಣಯ ಹೊರಡಿಸಿದ್ದಾರೆ. ಆದರೆ, ನವಜ್ಯೋತ್ ಸಿಂಗ್ ಸಿಧು ಅವರು ಪಾಕಿಸ್ತಾನವನ್ನು ಹೊಗಳುತ್ತಿದ್ದಾರೆ. ಇದರ ವಿರುದ್ಧ ಪ್ರತಿಭಟಿಸಲು, ದನಿಯೆತ್ತಲು ವಿಧಾನಸಭೆಯಲ್ಲಿ ನಮಗೆ ಅವಕಾಶ ಕೊಡಲಾಗುತ್ತಿಲ್ಲ. ಇನ್ನು ನಾವೆಲ್ಲಿ ಮಾತಾಡಬೇಕು ಎಂದು ಸಿರೋಮಣಿ ಅಕಾಲಿ ದಳದ ನಾಯಕ ಬಿಎಸ್ ಮಜೀಥಿಯಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಧು ಭಾವಚಿತ್ರ ಸುಟ್ಟು ಆಕ್ರೋಶ
ಪಂಜಾಬ್ ಬಜೆಟ್ ಅಧಿವೇಶನ ಶುರುವಾಗುವ ಮೊದಲು, ವಿಧಾನಸಭೆಯ ಹೊರಗಡೆ ಶಿರೋಮಣಿ ಅಕಾಲಿ ದಳದ ನಾಯಕರು ನವಜ್ಯೋತ್ ಸಿಂಗ್ ಸಿಧು ಅವರ ಭಾವಚಿತ್ರ, ಮತ್ತು ಸಿಧು ಅವರು ತಬ್ಬಿಕೊಂಡಿದ್ದ ಪಾಕಿಸ್ತಾನಿ ಸೇನಾಧಿಕಾರಿಯ ಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿಯೂ ಸಿಧು ಮತ್ತು ಶಿರೋಮಣಿ ಅಕಾಲಿ ದಳದ ಸದಸ್ಯರ ನಡುವೆ ಬಿಸಿಬಿಸಿ ಚರ್ಚೆಯಾಯಿತು. ಮಾತಿಗೆ ಬಗ್ಗದಿದ್ದಾಗ ಶಿರೋಮಣಿ ಅಕಾಲಿ ದಳದ ನಾಯಕರು ಸಭಾತ್ಯಾಗ ಮಾಡಿದರು.

ಸಿಧು ಅವರ ಈ ಮಾತು ಕೇಳಲು ಭಾರತೀಯರು ತಯಾರಿಲ್ಲ
ಅವರ ವಿರುದ್ಧ ಇಷ್ಟೆಲ್ಲಾ ಪ್ರತಿಭಟನೆ ನಡೆಯುತ್ತಿದ್ದರೂ, ತಮ್ಮ ಹೇಳಿಕೆ ಬದಲಿಸಲಾಗಲಿ, ನೀಡಿದ ಹೇಳಿಕೆಗೆ ಕ್ಷಮಾಪಣೆ ಕೇಳಲಾಗಲಿ ಸಿಧು ತಯಾರಿಲ್ಲ. ಪುಲ್ವಾಮಾದಲ್ಲಿ ನಡೆದ ದಾಳಿಗೆ ನೀವು ಪಾಕಿಸ್ತಾನವನ್ನು ಹೊಣೆ ಮಾಡಲು ಸಾಧ್ಯವಿಲ್ಲ. ಮಾಡಿದ್ಯಾರೋ, ಆರೋಪ ಮಾಡುತ್ತಿರುವುದು ಇನ್ನಾರಮ್ಯಾಲೆಯೇ? ಯಾವುದೇ ವ್ಯಕ್ತಿಯನ್ನು ತೆಗಳುವುದು ಸಾಧ್ಯವಿಲ್ಲ. ಭಯೋತ್ಪಾದನೆಗೆ ಯಾವುದೇ ರಾಷ್ಟ್ರವಿಲ್ಲ. ಎರಡೂ ರಾಷ್ಟ್ರಗಳ ನಡುವಿನ ಮಾತುಕತೆ ಮುಂದುವರೆಸಿ, ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಎಂದೂ ನನ್ನ ಮಾತಿಗೆ ನಾನು ಬದ್ಧ
ಇಂದಾಗಲಿ, ನಾಳೆಯಾಗಲಿ, ಮತ್ತಾವುದೇ ದಿನವಾಗಲಿ ನನ್ನ ಮಾತಿಗೆ ನಾನು ಬದ್ಧ. ಭಯೋತ್ಪಾದನೆಯಿಂದಾಗಿ ನಾವು ಅಭಿವೃದ್ಧಿಯನ್ನು ನಿಲ್ಲಿಸಬಾರದು. ನಾವು ಭಯೋತ್ಪಾದಕರ ಎದಿರು ತಲೆಬಗ್ಗಿಸಬಾರದು. ನಾವು ಉಗ್ರರ ಆಶಯವನ್ನು ನಾಶ ಮಾಡಬೇಕು. ನಾವು (ಕಾಶ್ಮೀರದಲ್ಲಿ) ಅಭಿವೃದ್ಧಿ ಮಾಡಿದಾಗ ಮಾತ್ರ ಅವರ ಕುಕೃತ್ಯ ಎಸಗುವ ಆಶಯವನ್ನು ನಾಶ ಮಾಡಲು ಸಾಧ್ಯ. ಭಯೋತ್ಪಾದಕರಿಗೆ ಯಾವುದೇ ದೇಶ, ಧರ್ಮ, ಜಾತಿಯಿಲ್ಲ. ಭಯೋತ್ಪಾದಕರಿಗೆ ಶಿಕ್ಷೆ ನೀಡಬಾರದು ಎಂದು ನಾನು ಎಲ್ಲೂ ಹೇಳಿಲ್ಲ. ಆದರೆ, ಯಾರು ದಾಳಿ ನಡೆಸಿದ್ದಾರೋ ಅವರ ಮೇಲೆ ಮಾತ್ರ ಕ್ರಮ ಕೈಗೊಳ್ಳಿ. ಬೇರೆಯವರನ್ನು ದಾಳಿಗೀಡು ಮಾಡಬಾರದು. ನನ್ನ ಈ ನಿಲುವಿನಲ್ಲಿ ಏನು ತಪ್ಪಿದೆ? ಎಂದು ನವಜ್ಯೋತ್ ಸಿಂಗ್ ಸಿಧು ಅವರು ಪ್ರಶ್ನಿಸಿದ್ದಾರೆ.

ರಿಯಾಲಿಟಿ ಶೋನಿಂದ ಸಿಧು ಔಟ್
ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ, ಬೇರೆ ನಾಯಕರು ಆಹ್ವಾನ ತಿರಸ್ಕರಿಸಿದ್ದರೆ, ಜನರ ಆಗ್ರಹವನ್ನು ಧಿಕ್ಕರಿಸಿ ನವಜ್ಯೋತ್ ಸಿಂಗ್ ಸಿಧು ಅವರು ಆ ಸಮಾರಂಭದಲ್ಲಿ ಭಾಗಿಯಾಗಿದ್ದರು, ಇಮ್ರಾನ್ ಅವರನ್ನು ಹಾಡಿ ಹೊಗಳಿದ್ದರು ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ತಬ್ಬಿಕೊಂಡು ವಿವಾದದ ಸುಳಿಗೆ ಸಿಲುಕಿದ್ದರು. ಈ ವಿವಾದಕ್ಕೆ ಪ್ರತಿಕ್ರಿಯಿಸಿದ್ದ ಇಮ್ರಾನ್ ಖಾನ್ ಅವರು, ಭಾರತ ಮತ್ತು ಪಾಕಿಸ್ತಾನದ ಸಂಬಂಧ ಕುದುರಿಸಲು ಸಿಧು ಅವರು ಪ್ರಧಾನಿಯಾಗುವವರೆಗೆ ಏಕೆ ಕಾಯುತ್ತೀರಿ ಎಂದು ವ್ಯಂಗ್ಯವಾಗಿ ಹೇಳಿದ್ದರು. ಸಿಧು ಅವರ ಈ ಪಾಕ್ ಪರ ನಿಲುವಿನಿಂದಾಗಿ ಅವರನ್ನು ಕಲರ್ಸ್ ಚಾನಲ್ ನಲ್ಲಿ ಬರುತ್ತಿದ್ದ 'ಕಪಿಲ್ ಶರ್ಮಾ ಶೋ' ನಿಂದ ಎತ್ತಂಗಡಿ ಮಾಡಲಾಗಿದೆ. ಅವರ ಜಾಗಕ್ಕೆ ಅರ್ಚನಾ ಪೂರಣ್ ಸಿಂಗ್ ಅವರನ್ನು ಕರೆತರಲಾಗಿದೆ.












Click it and Unblock the Notifications