ನವಜೋತ್ 8 ಲಕ್ಷ ವಿದ್ಯುತ್ ತೆರಿಗೆ ಬಾಕಿ: ಪಂಜಾಬ್ ಸಿಎಂ ವಿರುದ್ದ ಅಕಾಲಿದಳ ತರಾಟೆ
ಚಂಡೀಗಢ, ಜು. 03: ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಬಂಡಾಯ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪಾವತಿಸದ ವಿದ್ಯುತ್ ತೆರಿಗೆಗಳ ವರದಿಗಳ ಬಗ್ಗೆ ಶಿರೋಮಣಿ ಅಕಾಲಿ ದಳ (ಎಸ್ಎಡಿ) ಇಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ರನ್ನು ತರಾಟೆಗೆ ತೆಗೆದುಕೊಂಡಿದೆ.
ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ಕಳೆದ ಹಲವು ವಾರಗಳಿಂದ, ರಾಜ್ಯದ ಕಠಿಣ ವಿದ್ಯುತ್ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರ ತೆಗೆದುಕೊಂಡ ಇತ್ತೀಚಿನ ಕ್ರಮಗಳು ಸೇರಿದಂತೆ ಹಲವಾರು ವಿಷಯಗಳಲ್ಲಿ ತಮ್ಮದೇ ಪಕ್ಷದ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ.
"ಕ್ಯಾಪ್ಟನ್ ಸಾಹೇಬರೇ, ವಿದ್ಯುತ್ ಬಿಕ್ಕಟ್ಟಿನ ಮಧ್ಯೆ ಪಂಜಾಬ್ ಜನರಿಗೆ ಕಿರುಕುಳ ನೀಡುವ ನಡುವೆ ನಿಮಗೆ ಸ್ವಲ್ಪ ಸಮಯ ಸಿಕ್ಕಿದರೆ, ದಯವಿಟ್ಟು, ಲಕ್ಷಾಂತರ ರೂಪಾಯಿ ಮೌಲ್ಯದ ವಿದ್ಯುತ್ ಬಿಲ್ ಬಾಕಿ ಇರುವ ಸಚಿವರ ಕಡೆಗೆ ಗಮನ ಕೊಡಿ. ನಿಮ್ಮ ಆಶೀರ್ವಾದವನ್ನು ಅವರ ಮೇಲೂ ಸುರಿಸಿ," ಎಂದು ಎಸ್ಎಡಿ ಟ್ವೀಟ್ ಮಾಡಿದೆ.

ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ತನ್ನ ಅಮೃತಸರ ಮನೆಯ 8,67,540 ವಿದ್ಯುತ್ ಬಿಲ್ ಅನ್ನು ಪಂಜಾಬ್ ರಾಜ್ಯ ವಿದ್ಯುತ್ ನಿಗಮಕ್ಕೆ ಬಾಕಿ ಉಳಿಸಿ ಕೊಂಡಿದ್ದಾರೆ ಎಂದು ದಾಖಲೆಗಳು ತಿಳಿಸಿವೆ. ಪಾವತಿ ಮಾಡಲು ನಿನ್ನೆ ಕೊನೆಯ ದಿನಾಂಕವಾಗಿತ್ತು. ಈ ಬಗ್ಗೆ ನವಜೋತ್ ಸಿಂಗ್ ಸಿಧು ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ವಿದ್ಯುತ್ ಬಿಕ್ಕಟ್ಟಿನ ಬಗ್ಗೆ ಮುಖ್ಯಮಂತ್ರಿಯನ್ನು ಸಿಧು ಟೀಕಿಸಿದ್ದಾರೆ.
"ಪಂಜಾಬ್ನಲ್ಲಿ ವಿದ್ಯುತ್ ಕಡಿತದ ಅಗತ್ಯವಿಲ್ಲ. ನಾವು ಸರಿಯಾದ ದಿಕ್ಕಿನಲ್ಲಿ ಸಾಗಿದರೆ ಸಾಮಾನ್ಯ ಜನರ ಕಚೇರಿ ಸಮಯ ಅಥವಾ ಎಸಿ ಬಳಕೆಯನ್ನು ಮುಖ್ಯಮಂತ್ರಿ ನಿಯಂತ್ರಿಸುವ ಅಗತ್ಯವಿಲ್ಲ," ಎಂದು ಟ್ವೀಟ್ ಮಾಡಿದ್ದರು.
ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಕಾರಣದಿಂದಾಗಿ ಪಂಜಾಬ್ ಸರ್ಕಾರ ಗುರುವಾರ ಸರ್ಕಾರಿ ಕಚೇರಿಗಳ ಸಮಯವನ್ನು ಕಡಿತಗೊಳಿಸಿದೆ. ಹೆಚ್ಚಿನ ಇಂಧನ ಅಗತ್ಯವಿರುವ ಕೈಗಾರಿಕೆಗಳಿಗೆ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲು ಆದೇಶಿಸಿದೆ.
ಈ ನಡುವೆ ಅರವಿಂದ್ ಕೇಜ್ರಿವಾಲ್ರ ಆಮ್ ಆದ್ಮಿ ಪಕ್ಷವು ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಗೆದ್ದರೆ ಪ್ರತಿ ಮನೆಗೆ 300 ಯುನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿದ್ದು ಈಗ ವಿದ್ಯುತ್ ಕೊರತೆ ಪ್ರಮುಖ ಚುನಾವಣಾ ವಿಷಯವಾಗಿದೆ. ಮುಖ್ಯಮಂತ್ರಿ ಸಿಂಗ್ ವಿದ್ಯುತ್ ಸಚಿವಾಲಯದ ಉಸ್ತುವಾರಿ ವಹಿಸಿಕೊಂಡಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications