ಮಾತಾಡಿ ಮಾತಾಡಿ ನವಜೋತ್ ಸಿಂಗ್ ಸಿಧು ಗಂಟಲಿಗೆ ಗಾಯ
ಚಂಡೀಗಡ, ಮೇ 13: ಪ್ರಧಾನಿ ಮೋದಿ ಮತ್ತು ಬಿಜೆಪಿಯ ಕಟು ಟೀಕಾಕಾರ, ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರ ಧ್ವನಿ ತಂತುಗಳಿಗೆ ಹಾನಿಯಾಗಿದೆ. ಅವರು ಸ್ಟೆರಾಯ್ಡ್ ಮತ್ತು ಚುಚ್ಚುಮದ್ದು ಪಡೆದುಕೊಳ್ಳುತ್ತಿದ್ದಾರೆ.
ದೇಶದ ಅನೇಕ ಭಾಗಗಳಲ್ಲಿ ನಿರಂತರ ಚುನಾವಣಾ ಪ್ರಚಾರ ಭಾಷಣಗಳನ್ನು ನಡೆಸಿರುವ ಸಿಧು ಅವರ ಧ್ವನಿಗೆ ತೀವ್ರ ಹಾನಿಯಾಗಿದೆ ಎಂದು ಅವರ ಸಚಿವಾಲಯ ಕಚೇರಿ ಪ್ರಕಟಣೆ ತಿಳಿಸಿದೆ.
ಮೋದಿ, ಅಂಬಾನಿ-ಅದಾನಿಯ ಬಿಜಿನೆಸ್ ಮ್ಯಾನೇಜರ್: ಸಿಧು ಟೀಕೆ
'ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಕಳೆದ 28 ದಿನಗಳಲ್ಲಿ ದೇಶದೆಲ್ಲೆಡೆ ಪ್ರಚಾರ ನಡೆಸಿ 80 ಸಮಾವೇಶಗಳಲ್ಲಿ ಭಾಷಣ ಮಾಡಿದ್ದಾರೆ. ನಿರಂತರವಾಗಿ ಮಾತನಾಡಿದ್ದು ಅವರ ಧ್ವನಿ ತಂತುಗಳಿಗೆ ಹಾನಿಯಾಗಲು ಕಾರಣವಾಗಿದ್ದು, ರಕ್ತವೂ ಬರುವಂತಾಗಿತ್ತು' ಎಂದು ಪ್ರಕಟಣೆ ತಿಳಿಸಿದೆ.
'ಸಿಧು ಅವರು ಭಾನುವಾರ ಬೆಳಿಗ್ಗೆ ಚಂಡೀಗಡದಲ್ಲಿ ವೈದ್ಯರನ್ನು ಸಂಪರ್ಕಿಸಿದ್ದು, ಅವರು ಎರಡು ಪರ್ಯಾಯ ಚಿಕಿತ್ಸೆಗಳನ್ನು ಸೂಚಿಸಿದ್ದರು. ಹಾನಿಯಾದ ಗಂಟಲಿನ ಮೇಲೆ ಮುಲಾಮು ಹಚ್ಚುವುದು- ಇದರಿಂದ ಅವರು ನಾಲ್ಕು ದಿನ ಮಾತನಾಡುವಂತೆ ಇಲ್ಲ, ಅಥವಾ ಉರಿ ಶಮನ ಮಾಡುವ ಇಂಜೆಕ್ಷನ್ ಮತ್ತು ಸ್ಟೆರಾಯ್ಡ್ ಚಿಕಿತ್ಸೆಯೊಂದಿಗೆ 48 ಗಂಟೆ ಸಂಪೂರ್ಣ ವಿಶ್ರಾಂತಿ.
'ಒಂದು ತಪ್ಪಾದ ಮತ ನಿಮ್ಮ ಮಕ್ಕಳು ಪಕೋಡಾ ಮಾರುವ ಹಾಗೆ ಮಾಡಬಹುದು'
ಆದರೆ, ಲೋಕಸಭೆ ಚುನಾವಣೆಯ ಕೊನೆಯ ಹಂತದ ಪ್ರಚಾರ ಕಾರ್ಯವನ್ನು ಉಳಿದಿರುವ ದಿನ ನಡೆಸಬೇಕು ಎಂದು ಸಿಧು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಅವರು ನಾಲ್ಕು ದಿನ ಮಾತನಾಡಲು ಅವಕಾಶವಿಲ್ಲದ ಮುಲಾಮು ಚಿಕಿತ್ಸೆಯ ಬದಲು ಎರಡು ದಿನ ವಿಶ್ರಾಂತಿ ಪಡೆಯುವ ಇಂಜೆಕ್ಷನ್ ಮತ್ತು ಸ್ಟೆರಾಯ್ಡ್ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಸ್ತುತ ಸಿಧು ಅವರು ವೈದ್ಯಕೀಯ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಶೀಘ್ರದಲ್ಲಿಯೇ ಚೇತರಿಸಿಕೊಳ್ಳಲಿದ್ದು, ಆದಷ್ಟು ಬೇಗನೆ ಪ್ರಚಾರಕ್ಕೆ ಮರಳಲಿದ್ದಾರೆ' ಎಂದು ಪ್ರಕಟಣೆ ತಿಳಿಸಿದೆ.
Navjot Singh Sidhu’s office: Navjot Singh Sidhu put on steroid medication and injections due to continuous speech damaging his vocal cords. At the moment Mr. Sidhu is under the medication & in process of a quick recovery to return-back to campaigning at the earliest. (file pic) pic.twitter.com/RI2mgML99l
— ANI (@ANI) 13 May 2019
ಕೊನೆಯ ಹಂತದ ಚುನಾವಣಾ ಪ್ರಚಾರಕ್ಕೆ ನಾಲ್ಕು ದಿನ ಮಾತ್ರ ಉಳಿದಿವೆ. ಇದರಲ್ಲಿ ಅವರು ಬಿಹಾರದ ಪಟ್ನಾ ಸಾಹಿಬ್, ಪೊಂಟಾ ಸಾಹಿಬ್ ಹಾಗೂ ಹಿಮಾಚಲ ಪ್ರದೇಶದ ಬಿಲಾಸ್ಪುರ್ ಮತ್ತು ನಾಲಗಡ್ಗಳಲ್ಲಿ ಪ್ರಚಾರ ಮಾಡಬೇಕಿದೆ. ಇನ್ನು ಎರಡು ದಿನ ಮಧ್ಯಪ್ರದೇಶದಲ್ಲಿ ಪ್ರಚಾರ ಮಾಡುವ ಯೋಜನೆ ಇದೆ.