ರಾಜ್ಯಸಭೆ; ಹರ್ಯಾಣದಿಂದ ಕಾರ್ತಿಕೇಯ ಶರ್ಮಾ ನಾಮಪತ್ರ ಸಲ್ಲಿಕೆ
ಚಂಡೀಗಢ ಮೇ 31: ಹರ್ಯಾಣ ವಿಧಾನಸಭೆಯಿಂದ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ನಡೆಯುವ ಚುನಾವಣೆಗೆ ಕಾಂಗ್ರೆಸ್ ನಾಯಕ ವಿನೋದ್ ಶರ್ಮಾ ಪುತ್ರ ಹಾಗೂ ಮಾಧ್ಯಮ ಸಂಸ್ಥೆ ನ್ಯೂಸ್ಎಕ್ಸ್ ಮಾಲೀಕ ಕಾರ್ತಿಕೇಯ ಶರ್ಮಾ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಕಾರ್ತಿಕೇಯ ಶರ್ಮಾ ಜೆಸ್ಸಿಕಾ ಲಾಲ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮನು ಶರ್ಮಾ ಸಹೋದರ. ಇವರು ಮಾಧ್ಯಮ ಕ್ಷೇತ್ರದಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಎರಡನೇ ಅಭ್ಯರ್ಥಿ. ರಾಜಸ್ಥಾನದಿಂದ ರಾಜ್ಯಸಭೆ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜೀ ಗ್ರೂಪ್ ಮಾಲೀಕ ಸುಭಾಷ್ ಚಂದ್ರ ನಾಮಪತ್ರ ಸಲ್ಲಿಸಿದ್ದಾರೆ.
ಎರಡು ಮಾಧ್ಯಮ ಸಂಸ್ಥೆಗಳ ಮಾಲೀಕ: ನ್ಯೂಸ್ಎಕ್ಸ್ ಸಂಸ್ಥೆ ಜತೆಗೆ ಕಾರ್ತಿಕೇಯ ಶರ್ಮಾ ಸಂಡೇ ಗಾರ್ಡಿಯನ್ ಬ್ರಾಡ್ ಶೀಟ್ ಅನ್ನು ಹೊಂದಿರುವ ಐಟಿವಿ (ಇನ್ಫರ್ಮೇಷನ್ ಟಿವಿ ಪ್ರೈವೇಟ್ ಲಿಮಿಟೆಡ್)ಯ ವ್ಯವಸ್ಥಾಪಕ ನಿರ್ದೇಶಕರು. ಇವರು ಕಾಂಗ್ರೆಸ್ ನಾಯಕ ಮತ್ತು ಹರ್ಯಾಣದ ಮಾಜಿ ಸ್ಪೀಕರ್ ಕುಲದೀಪ್ ಶರ್ಮಾ ಮಗಳನ್ನು ವಿವಾಹವಾಗಿದ್ದಾರೆ.

ಹರ್ಯಾಣದಿಂದ ರಾಜ್ಯಸಭೆಗೆ ಅಜಯ್ ಮಕಾನ್ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಿದೆ. 2016ರಲ್ಲಿ ಹರ್ಯಾಣದಿಂದ ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಸ್ಪರ್ಧಿಸಿದ್ದ ಸುಭಾಷ್ ಚಂದ್ರ ಗೆಲುವು ಸಾಧಿಸಿದ್ದರು. ಸದ್ಯ ಅವರು ರಾಜಸ್ಥಾನದಿಂದ ಸ್ಪರ್ಧಿಸಿದ್ದಾರೆ.
ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದಾರೆ. ವಸುಂಧರಾ ರಾಜೇ ಸಂಪುಟದಲ್ಲಿದ್ದ ಮಾಜಿ ಸಚಿವ ಘನಶ್ಯಾಮ್ ತಿವಾರಿ ಬಿಜೆಪಿ ಪಕ್ಷದ ಅಭ್ಯರ್ಥಿ.

ನಾಮಪತ್ರ ಸಲ್ಲಿಸಲು ಕೊನೆಯ ದಿನ; ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿತ್ತು. 57 ರಾಜ್ಯಸಭೆ ಸದಸ್ಯರ ಅಧಿಕಾರಾವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಈ ಚುನಾವಣೆ ನಡೆಯುತ್ತಿದೆ. ಜೂನ್ 10ರಂದು 57 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.












Click it and Unblock the Notifications