ರಫೇಲ್ ಮೇಲೆ 'ಓಂ' ಬರೆಯದೆ ಇನ್ನೇನು ಬರೆಯಬೇಕಿತ್ತು?: ರಾಜನಾಥ್ ಪ್ರಶ್ನೆ
ಭಿವಾನಿ, ಅಕ್ಟೋಬರ್ 17: ಫ್ರಾನ್ಸ್ನಿಂದ ಕಳೆದ ವಾರ ಭಾರತೀಯ ವಾಯುಪಡೆಗೆ ಹೊಸದಾಗಿ ಸೇರ್ಪಡೆಗೊಂಡ ರಫೇಲ್ ಯುದ್ಧ ವಿಮಾನಕ್ಕೆ ಫ್ರಾನ್ಸ್ನಲ್ಲಿಯೇ ಶಸ್ತ್ರ ಪೂಜೆ ಮಾಡಿದ್ದಕ್ಕಾಗಿ ವಿರೋಧಪಕ್ಷಗಳ ಟೀಕೆಗೆ ಗುರಿಯಾಗಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹಬ್ಬ ಹರಿದಿನಗಳಲ್ಲಿ ಆಯುಧ ಪೂಜೆ ಮಾಡುವುದು ಭಾರತೀಯ ಪರಂಪರೆ. ಅದನ್ನು ಆಚರಿಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಅವರು ಹೇಳಿದ್ದಾರೆ.
ಹರಿಯಾಣದಲ್ಲಿ ಗುರುವಾರ ಚುನಾವಣಾ ಪ್ರಚಾರ ನಡೆಸಿದ ಅವರು, 'ರಫೇಲ್ ಜೆಟ್ ಮೇಲೆ ನಾನು ಓಂ ಎಂದು ಬರೆದಿದ್ದಕ್ಕೆ ಅನೇಕರು ಆ ಪದ ಏಕೆ ಬರೆದಿದ್ದು ಎಂದು ಪ್ರಶ್ನಿಸಿದರು. ಓಂ ಎಂದು ಬರೆಯಬಾರದಾದರೆ ವಿಮಾನದ ಮೇಲೆ ನಾನು ಏನನ್ನು ಬರೆಯಬೇಕಿತ್ತು? ಎಂದು ನಾನು ರಾಹುಲ್ ಗಾಂಧಿ ಅವರನ್ನು ಕೇಳಲು ಬಯಸುತ್ತೇನೆ' ಎಂದರು.

ರಫೇಲ್ ಯುದ್ಧ ವಿಮಾನವನ್ನು ಫ್ರಾನ್ಸ್ನಿಂದ ಸ್ವೀಕರಿಸಿದ ಬಳಿಕ ರಾಜನಾಥ್ ಸಿಂಗ್ ಅವರು ವಿಮಾನದ ಮೇಲೆ ಓಂ ಎಂದು ಬರೆದಿದ್ದರು. ಅಲ್ಲದೆ, ಅದರ ಚಕ್ರಗಳಿಗೆ ನಿಂಬೆ ಹಣ್ಣು ಇರಿಸಿ ವಿಮಾನಕ್ಕೆ ಪೂಜೆ ಸಲ್ಲಿಸಿದ್ದರು. ಇದು ವ್ಯಾಪಕ ಟೀಕೆಗೆ ಒಳಗಾಗಿತ್ತು.
ಈ ಬಗ್ಗೆ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, 36 ರಫೇಲ್ ಜೆಟ್ ಯುದ್ಧ ವಿಮಾನಗಳ ಖರೀದಿಗಾಗಿ 59 ಸಾವಿರ ಕೋಟಿ ರೂ. ಒಪ್ಪಂದ ಮಾಡಿಕೊಂಡಿದ್ದಕ್ಕಾಗಿ ಬಿಜೆಪಿ ನಾಯಕರಲ್ಲಿ ತಪ್ಪಿತಸ್ಥ ಮನೋಭಾ ಕಾಡುತ್ತಿದೆ. ಅದಕ್ಕಾಗಿ ಅದರ ಮೊದಲ ವಿಮಾನವನ್ನು ಸ್ವೀಕರಿಸಲು ಖುದ್ದಾಗಿ ರಕ್ಷಣಾ ಸಚಿವರೇ ಫ್ರಾನ್ಸ್ಗೆ ತೆರಳಿದ್ದರು ಎಂದು ಟೀಕಿಸಿದ್ದರು.
ಥಾಣೆ ಮತ್ತು ಮುಂಬೈನಲ್ಲಿ ಪ್ರಚಾರ ನಡೆಸುವ ವೇಳೆ ರಾಜನಾಥ್ ಸಿಂಗ್, ಈ ವಿಮಾನಗಳು ಬಾಲಕೋಟ್ ದಾಳಿಯ ಸಂದರ್ಭದಲ್ಲಿಯೇ ಭಾರತ ಸೇನಾಪಡೆಗಳ ಜತೆ ಇರಬೇಕಿತ್ತು ಎಂದಿದ್ದರು.
ರಫೇಲ್ಗೆ ಅತ್ಯಧಿಕ ವೇಗದ ಶಕ್ತಿಯಿದೆ. ಅದು ಶಬ್ಧಕ್ಕಿಂತಲೂ ವೇಗವಾಗಿ ಚಲಿಸುತ್ತದೆ. ಇದು ನಮಗೆ ಮೊದಲೇ ಸಿಕ್ಕಿದ್ದರೆ ನಮ್ಮ ವಾಯುಪಡೆ ಯೋಧರು ಭಯೋತ್ಪಾದಕರ ಶಿಬಿರಗಳನ್ನು ನಾಶಪಡಿಸಲು ಪಾಕಿಸ್ತಾನಕ್ಕೆ ಹೋಗಬೇಕಾಗಿರಲಿಲ್ಲ. ರಫೇಲ್ ನೆರವಿನಿಂದ ಭಾರತದ ನೆಲೆಯಲ್ಲಿದ್ದುಕೊಂಡೇ ಉಗ್ರರ ನೆಲೆಗಳನ್ನು ನಾಶಮಾಡಬಹುದಾಗಿತ್ತು ಎಂದು ಹೇಳಿದ್ದರು.












Click it and Unblock the Notifications