ಹರ್ಯಾಣದ ಮುಂದಿನ ಸಿಎಂ ಆಗಿ ದುಷ್ಯಂತ್ ಆಯ್ಕೆ: ಕಾಂಗ್ರೆಸ್ಸಿನ ಘೋಷಣೆ
ಚಂದೀಗಢ, ಅಕ್ಟೋಬರ್ 24: ಚುನಾವಣಾ ಸಮೀಕ್ಷೆಗಳ ಫಲಿತಾಂಶ ಬುಡಮೇಲಾಗಿದೆ. ಬಿಜೆಪಿ ಹೈಕಮಾಂಡ್ ಮಾಡಿದ ತಂತ್ರಗಳು ನೆಲಕಚ್ಚಿವೆ. ಜನ ನಾಯಕ ಜನತಾ ಪಾರ್ಟಿ ಜೊತೆ ಚುನಾವಣೋತ್ತರ ಮೈತ್ರಿ ಸಾಧಿಸಿರುವ ಕಾಂಗ್ರೆಸ್ ಅಧಿಕಾರ ಗದ್ದುಗೆಗೇರಲು ಸಜ್ಜಾಗುತ್ತಿದೆ. ಜೆಜೆಪಿ ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳಿಗೂ ಅಸ್ತು ಎಂದಿರುವ ಕಾಂಗ್ರೆಸ್ ಹೈಕಮಾಂಡ್ ಜೆಜೆಪಿ ಮುಖಂಡ ದುಷ್ಯಂತ್ ಚೌಟಾಲರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದೆ.
ಹರ್ಯಾಣ ಕಾಂಗ್ರೆಸ್ ಮುಖ್ಯಸ್ಥ ಅಶೋಕ್ ತನ್ವಾರ್ ಅವರು ಜೆಜೆಪಿ ಮುಖ್ಯಸ್ಥ, ಮಾಜಿ ಉಪ ಪ್ರಧಾನಿ ದೇವಿಲಾಲ್ ಅವರ ಮರಿ ಮೊಮ್ಮಗ ದುಷ್ಯಂತ್ ಚೌಟಲರನ್ನು ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ. ಎಎನ್ಐ ಜೊತೆ ಮಾತನಾಡಿ ತನ್ವರ್, ಹರ್ಯಾಣದ ಮತದಾರರು ಬಿಜೆಪಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಜೆಜೆಪಿಗೆ ಸಿಎಂ ಸ್ಥಾನ ಬಿಟ್ಟುಕೊಡಲಾಗುತ್ತಿದ್ದು, ಕಾಂಗ್ರೆಸ್ಸಿನಿಂದ ಯಾವುದೇ ಷರತ್ತುಗಳಿಲ್ಲ ಎಂದಿದ್ದಾರೆ.

ಇದಕ್ಕೂ ಮುನ್ನ ಇಂದು ಜನ ನಾಯಕ್ ಜನತಾ ಪಾರ್ಟಿ(ಜೆಜೆಪಿ) ಕಿಂಗ್ ಮೇಕರ್ ಸಾಧ್ಯತೆ ಕಂಡು ಬರುತ್ತಿದ್ದಂತೆ ದುಷ್ಯಂತ್ ಅವರು ಜೆಜೆಪಿಗೆ ಸಿಎಂ ಸ್ಥಾನ ನೀಡುವ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ್ದರು.
ಹರ್ಯಾಣ 90 ಕ್ಷೇತ್ರಗಳಲ್ಲಿ, 41 ರಲ್ಲಿ ಬಿಜೆಪಿ, 31 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ ಜೆಜೆಪಿ 10, ಐಎನ್ಎಲ್ಡಿ 1 ಸ್ಥಾನಗಳಲ್ಲಿ ಮುನ್ನಡೆ, ಇತರೆ 8 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಟ್ರೆಂಡ್ ಪ್ರಕಾರ ಹರ್ಯಾಣದಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಬಹುಮತಕ್ಕೆ 46 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ. ಈಗ ಕಾಂಗ್ರೆಸ್+ಜೆಜೆಪಿ+ ಇತರೆ ಅಭ್ಯರ್ಥಿಗಳು ಸೇರಿ ಸರ್ಕಾರ ರಚನೆಗೆ ಮುಂದಾಗಿದ್ದಾರೆ.
ಬಹುಜನ ಸಮಾಜ ಪಕ್ಷ(ಬಿಎಸ್ ಪಿ), ಇಂಡಿಯನ್ ನ್ಯಾಷನಲ್ ಲೋಕದಳ(ಐಎನ್ ಎಲ್ ಡಿ) ಜೊತೆಗೆ ಜನ್ನಾಯಕ್ ಜನತಾ ಪಾರ್ಟಿ( ಜೆಜೆಪಿ) ಮೈತ್ರಿ ಸಾಧಿಸುವ ಮುನ್ನವೇ ಮಾತುಕತೆ ಮುರಿದು ಬಿದ್ದಿದೆ. ಕಳೆದ ಒಂದು ವಾರದಿಂದ ಮೈತ್ರಿ ಬದಲು ಈ ಪಕ್ಷಗಳ ನಡುವೆ ವೈಮನಸ್ಯ ಹೆಚ್ಚಾಗಿದ್ದು, ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ವರವಾಗಿ ಪರಿಣಮಿಸಲಿದೆ. ಹೀಗಾಗಿ, ಬಿಜೆಪಿ ವಿರುದ್ಧ ಒಗ್ಗೂಡಬೇಕಿದ್ದ ವಿಪಕ್ಷಗಳಲ್ಲಿನ ಒಡಕು ಬಿಜೆಪಿಗೆ ಜಯ ತರುವ ಎಲ್ಲಾ ಲಕ್ಷಣಗಳು ಕಾಣಿಸಿವೆ ಎಂದು ವಿಶ್ಲೇಷಿಸಲಾಗಿದೆ.
2014ರ ವಿಧಾನಸಭೆ ಚುನಾವಣೆಯಲ್ಲಿ 90 ಸ್ಥಾನಗಳ ಪೈಕಿ 47 ಸ್ಥಾನಗಳನ್ನು ಬಿಜೆಪಿ ಗೆದ್ದು ಅಧಿಕಾರಕ್ಕೆ ಬಂದರೆ, ಕಾಂಗ್ರೆಸ್ 15 ಸ್ಥಾನ ಮಾತ್ರ ಗಳಿಸಲು ಸಾಧ್ಯವಾಯಿತು. 2019ರಲ್ಲಿ ಹರ್ಯಾಣದಲ್ಲಿ ಅಕ್ಟೋಬರ್ 21ರಂದು ಮತದಾನ ಹಾಗೂ ಅಕ್ಟೋಬರ್ 24ರಂದು ಫಲಿತಾಂಶ ಹೊರಬರಲಿದೆ.












Click it and Unblock the Notifications