ಬಿಜೆಪಿ ಜತೆ ಕೈಜೋಡಿಸಿದ ಬೆನ್ನಲ್ಲೇ ಅಜಯ್ ಚೌಟಾಲಾಗೆ 'ಫರ್ಲೋ'
ಚಂಡೀಗಡ, ಅಕ್ಟೋಬರ್ 26: ಹರಿಯಾಣದಲ್ಲಿ ಸರ್ಕಾರ ರಚಿಸಲು ಜನನಾಯಕ ಜನತಾ ಪಕ್ಷದ (ಜೆಜೆಪಿ) ನಾಯಕ ದುಷ್ಯಂತ್ ಚೌಟಾಲಾ ಬಿಜೆಪಿ ಜತೆ ಕೈಜೋಡಿಸಿದ ಬೆನ್ನಲ್ಲೇ, ಜೈಲಿನಲ್ಲಿರುವ ಅವರ ತಂದೆ ಅಜಯ್ ಚೌಟಾಲಾ ಅವರಿಗೆ 'ಫರ್ಲೋ' ಮಂಜೂರಾಗಿದೆ.
ಹರಿಯಾಣ ಸರ್ಕಾರದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಜಯ್ ಚೌಟಾಲಾ 'ಫರ್ಲೋ'ಗೆ ಕೋರಿದ್ದರು. ಅದನ್ನು ಪರಿಗಣಿಸಿದ ಕಾರಾಗೃಹ ಅಧಿಕಾರಿಗಳು ಎರಡು ವಾರಗಳ ಫರ್ಲೋ ನೀಡಿದೆ. ಅವರು ಶನಿವಾರ ಸಂಜೆ ಅಥವಾ ಭಾನುವಾರ ಬೆಳಿಗ್ಗ ಬಿಡುಗಡೆ ಹೊಂದುವ ನಿರೀಕ್ಷೆಯಿದೆ.
ಮನೋಹರ್ ಲಾಲ್ ಖಟ್ಟರ್ ಅವರು ಮುಖ್ಯಮಂತ್ರಿಯಾಗಿ ಮತ್ತು ದುಷ್ಯಂತ್ ಚೌಟಾಲಾ ಉಪ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಅಜಯ್ ಚೌಟಾಲಾ ಈ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮನೆಯವರೊಂದಿಗೆ ಎರಡು ವಾರ ಕಳೆಯಲಿದ್ದಾರೆ. ಬಳಿಕ ಮತ್ತೆ ಜೈಲಿಗೆ ಮರಳಲಿದ್ದಾರೆ.

ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಅವರ ಮೊದಲ ಮಗನಾದ ಚೌಧರಿ ಅಜಯ್ ಸಿಂಗ್ ಚೌಟಾಲಾ ಅವರಿಗೆ ದುಷ್ಯಂತ್ ಚೌಟಾಲಾ ಮತ್ತು ದಿಗ್ವಿಜಯ್ ಚೌಟಾಲಾ ಎಂಬ ಇಬ್ಬರು ಮಕ್ಕಳಿದ್ದಾರೆ.
1999-2000ದ ಅವಧಿಯಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಹಗರಣದಲ್ಲಿ ಅಜಯ್ ಚೌಟಾಲಾ ಮತ್ತು ಓಂ ಪ್ರಕಾಶ್ ಚೌಟಾಲಾ ಅವರಿಗೆ ದೆಹಲಿಯ ನ್ಯಾಯಾಲಯವೊಂದು 2013ರಲ್ಲಿ ಹತ್ತು ವರ್ಷ ಜೈಲುಶಿಕ್ಷೆ ವಿಧಿಸಿತ್ತು. ತಂದೆಯೊಂದಿಗೆ ಸೆರೆವಾಸ ಅನುಭವಿಸುತ್ತಿರುವ ಅಜಯ್ ಚೌಟಾಲಾ 'ಫರ್ಲೋ' (ಗೈರು ಹಾಜರಿಯ ರಜೆ) ಮೇಲೆ ಬಿಡುಗಡೆ ಮಾಡಲಾಗಿದೆ.
ಸರ್ಕಾರ ರಚನೆಯ ಸಿದ್ಧತೆಯ ವೇಳೆಯಲ್ಲಿಯೇ ಅಜಯ್ ಚೌಟಾಲಾ ಅವರಿಗೆ ಫರ್ಲೋ ಸಿಕ್ಕಿರುವುದು ಟೀಕೆಗೆ ಗುರಿಯಾಗಿದೆ. ಬಿಜೆಪಿ ತನ್ನ ಅಧಿಕಾರ ಬಳಸಿಕೊಂಡು ಫರ್ಲೋ ದೊರಕಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.












Click it and Unblock the Notifications