Breaking: ಚಂಡೀಗಢ ವಿವಿ ವಿದ್ಯಾರ್ಥಿನಿಯರ ವಿಡಿಯೋ ವೈರಲ್, ಉನ್ನತ ತನಿಖೆಗೆ ಸಿಎಂ ಆದೇಶ
ಚಂಡೀಗಢ, ಸೆಪ್ಟಂಬರ್ 18: ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ವೈರಲ್ ಪ್ರಕರಣ ಸಂಬಂಧಿಸಿದಂತೆ ಉನ್ನತ ತನಿಖೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಭಾನುವಾರದಂದು ಆದೇಶಿಸಿದ್ದಾರೆ.
ವಿಶ್ವವಿದ್ಯಾಲಯದ 60 ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ಖಾಸಗಿ ವಿಡಿಯೋ ಒಂದನ್ನು ಮತ್ತೊಬ್ಬ ವಿದ್ಯಾರ್ಥಿನಿ ವಿಡಿಯೋ ಮಾಡಿ ತನ್ನ ಪ್ರಯಕರಿನಿಗೆ ಕಳುಹಿಸಿದ್ದಳು. ಆತ ಆ ವಿಡಿಯೋವನ್ನು ವೈರಲ್ ಮಾಡಿದ್ದರಿಂದ ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಪ್ರತಿಭಟನೆ ಮಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ನಾಲ್ವರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಚಂಡೀಗಢ ವಿವಿ ಹಾಸ್ಟೆಲ್ ಎಂಎಂಎಸ್ ವೈರಲ್, ನಾಲ್ವರು ಆತ್ಮಹತ್ಯೆ
ಈ ಪ್ರಕರಣದಲ್ಲಿ ಪ್ರಿಯಕರನಿಗೆ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿನಿಯನ್ನು ಬಂಧಿಸಿದ್ದಾರೆ. ಆಕೆ ತನ್ನ ತಪ್ಪನ್ನು ಪೊಲೀಸರೆದುರು ಒಪ್ಪಿಕೊಂಡಿದ್ದಾಳೆ. ಆದರೆ ಪೊಲೀಸರು 60 ವಿದ್ಯಾರ್ಥಿನಿಯರಿಗೆ ಬಗೆಗಿನ ವಿಡಿಯೊಗಳು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದ್ದು, ಈ ಬಗ್ಗೆ ವಿದ್ಯಾರ್ಥಿನಿಯರು ಆತಂಕ ಪಡಬಾರದು ಎಂದು ಎಂದು ಮೋಹಾಲಿ ಠಾಣೆಯ ಎಸ್.ಪಿ ವಿವೇಕ್ ಸೋನಿ ಅವರು ತಿಳಿಸಿದ್ದಾರೆ.
ಈಗಾಗಲೇ ಬಂಧಿಸಲಾದ ಯುವತಿ ಪ್ರಿಯಕರನಿಗೆ ಕಳಿಸಲು ಬಾತ್ರೂಮ್ನಲ್ಲಿ 60 ವಿದ್ಯಾರ್ಥಿನಿಯರ ವಿ೦ಡಿಯೋ ಶೂಟ್ ಮಾಡುವ ವೇಳೆ ಇತರ ಕೆಲ ವಿದ್ಯಾರ್ಥಿನಿಯರು ಅದನ್ನು ನೋಡಿದ್ದಾರೆ. ಬಂಧಿತ ಆರೋಪಿ ಯುವತಿಯೇ ದ್ವೇಷದ ಕಾರಣದಿಂದ ಈ ರೀತಿ ಮಾಡಿದ್ದಾರೆ. ಇದಕ್ಕೆ ಆಕೆಯ ಪ್ರಿಯಕರನ ಸಹಕಾರವು ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ
ಈ ಘಟನೆ ಖಂಡಿಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ವಿಡಿಯೋ ವೈರಲ್ ಪ್ರಕರಣದ ಉನ್ನತ ಮಟ್ಟದ ತನಿಖೆ ನಡೆಸಲು ಆದೇಶಿಸಿದ್ದಾರೆ. ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ಇಂತಹ ಅಹಿತಕರ ಘಟನೆ ಕೇಳಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಕರಣದ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ನಾನು ನಿರಂತರವಾಗಿ ಅಧಿಕಾರಗಳ ಜತೆ ಸಂಪರ್ಕದಲ್ಲಿದ್ದೇನೆ. ಯಾರೂ ಸಹ ಗಾಳಿಮಾತುಗಳನ್ನು ನಂಬಬಾರದು ಎಂದು ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಘಟನೆಯನ್ನು ಖಂಡಿಸಿದ್ದಾರೆ. ವಿದ್ಯಾರ್ಥಿನಿಯರ ಭವಿಷ್ಯದ ದೃಷ್ಟಿಯಿಂದ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ. ಚಂಡೀಗಢ ವಿಶ್ವವಿದ್ಯಾನಿಲಯದ ಪ್ರಕರಣವನ್ನು ಸಿನಿ ತಾರೆಯರು, ರಾಜಕೀಯ ಗಣ್ಯರು ಟ್ವಿಟ್ಟರ್ನಲ್ಲಿ ಖಂಡಿಸಿದ್ದಾರೆ.
ಅಲ್ಲದೇ ವಿದ್ಯಾರ್ಥಿನಿಯರ ಈ ಖಾಸಗಿ ವೈರಲ್ ವಿಡಿಯೋ ಪ್ರಕರಣ ಖಂಡಿಸಿ ಪಂಜಾಬ್ನ ಮೊಹಾಲಿಯಲ್ಲಿ ಖಾಸಗಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸೂಕ್ತ ಬಿಗಿ ಭದ್ರತೆ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.