ಕಾಂಗ್ರೆಸ್ಗೆ ಮತ್ತೆ ಸೇರುವ ವದಂತಿ: 'ಹೊಂದಾಣಿಕೆ ಸಮಯ ಮುಗಿದಿದೆ' ಎಂದ ಅಮರೀಂದರ್
ಚಂಡೀಗಢ, ಅಕ್ಟೋಬರ್ 30: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತೆ ಕಾಂಗ್ರೆಸ್ಗೆ ಸೇರ್ಪಡೆ ಆಗುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ವರದಿಗಳು ಹೇಳಿದೆ. ಆದರೆ ಈ ವದಂತಿಯನ್ನು ಅಲ್ಲಗಳೆದಿದ್ದು, "ಹೊಂದಾಣಿಕೆ ಸಮಯ ಮುಗಿದಿದೆ," ಎಂದು ಹೇಳಿದ್ದಾರೆ.
ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ರ ಸ್ಪಷ್ಟನೆಯನ್ನು ಅವರ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್ ನೀಡಿದ್ದು, ಈಗ ಹೊಂದಾಣಿಕೆಯ ಸಮಯ ಮುಗಿದಿದೆ ಎಂದು ಹೇಳಿದರು. ಕಾಂಗ್ರೆಸ್ನಿಂದ ಅಮರಿಂದರ್ ಸಿಂಗ್ ದೂರ ಆಗುವ ನಿರ್ಧಾರ ಅಂತಿಮವಾದ ನಿರ್ಧಾರ ಎಂದು ಅಮರಿಂದರ್ ಸಿಂಗ್ ತಿಳಿಸಿದ್ದಾರೆ. ಹಾಗೆಯೇ ಈ ನಿರ್ಧಾರವನ್ನು ಬಹಳಷ್ಟು ಯೋಚನೆ ಮಾಡಿ ಕೈಗೊಳ್ಳಲಾಗಿದೆ ಎಂದಿದ್ದಾರೆ.
"ಸೋನಿಯಾ ಗಾಂಧಿ ಬೆಂಬಲಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಆದರೆ ಈಗ ಕಾಂಗ್ರೆಸ್ನಲ್ಲಿ ಉಳಿಯುವುದಿಲ್ಲ" ಎಂದು ಸಿಂಗ್ ಹೇಳಿದ್ದಾರೆ ಎಂದು ತುಕ್ರಾಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬೇರೆ ಪಕ್ಷವನ್ನು ಸ್ಥಾಪನೆ ಮಾಡುವ ಬಗ್ಗೆ ಘೋಷಣೆ ಮಾಡಿದ ಬಳಿಕ ಕಾಂಗ್ರೆಸ್ ನಾಯಕರುಗಳು ಅಮರಿಂದರ್ ಸಿಂಗ್ ಕಾಂಗ್ರೆಸ್ನಲ್ಲಿಯೇ ಉಳಿಯುವಂತೆ ಮನವೊಲಿಸುವ ಯತ್ನವನ್ನು ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಈ ವರದಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಅಮರೀಂದರ್ ಸಿಂಗ್, "ಪಂಜಾಬ್ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಕುರಿತು ಶೀಘ್ರದಲ್ಲೇ ಭಾರತೀಯ ಜನತಾ ಪಕ್ಷ (ಬಿಜೆಪಿ), ಅಕಾಲಿ ಬಣಗಳು ಹಾಗೂ ಇತರೆ ಪಕ್ಷಗಳೊಂದಿಗೆ ಮಾತುಕತೆ ನಡೆಸಲಾಗುತ್ತದೆ," ಎಂಧು ಪುನರುಚ್ಚರಿಸಿದ್ದಾರೆ.
"ನಾನು ಶೀಘ್ರದಲ್ಲೇ ನನ್ನ ಸ್ವಂತ ಪಕ್ಷವನ್ನು ಪ್ರಾರಂಭಿಸುತ್ತೇನೆ. ರೈತರ ಸಮಸ್ಯೆ ಬಗೆಹರಿದ ನಂತರ ಪಂಜಾಬ್ನ 2022 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ, ಅದರ ಮೈತ್ರಿಯನ್ನು ಬಿಟ್ಟಿರುವ ಅಕಾಲಿ ಬಣಗಳು ಮತ್ತು ಇತರರೊಂದಿಗೆ ಸೀಟು ಹಂಚಿಕೆಗಾಗಿ ಮಾತುಕತೆ ನಡೆಸುತ್ತೇನೆ. ಪಂಜಾಬ್ ಮತ್ತು ಅದರ ರೈತರ ಹಿತಾಸಕ್ತಿಗಾಗಿ ನಾನು ಬಲವಾದ ಸಾಮೂಹಿಕ ಶಕ್ತಿಯನ್ನು ನಿರ್ಮಿಸಲು ಬಯಸುತ್ತೇನೆ," ಎಂದು ಮಾಜಿ ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಕಾಂಗ್ರೆಸ್ ಪಂಜಾಬ್ ಅಧ್ಯಕ್ಷನೊಂದಿಗೆ ವೈಮನಸ್ಸಿನ ಕಾರಣದಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಮರಿಂದರ್ ಸಿಂಗ್ ಇತ್ತೀಚೆಗೆ ಹೊಸ ಪಕ್ಷ ಸ್ಥಾಪನೆಯ ಬ್ಗೆಗ ಘೋಷಣೆ ಮಾಡಿದ್ದಾರೆ. "ಪಂಜಾಬ್ನ ಭವಿಷ್ಯಕ್ಕಾಗಿ ನಡೆಯುತ್ತಿರುವ ಹೋರಾಟವು ಈಗಲೂ ಮುಂದುವರಿದಿದೆ. ಒಂದು ವರ್ಷದಿಂದ ತಮ್ಮ ಉಳಿವಿಗಾಗಿ ಹೋರಾಡುತ್ತಿರುವ ನಮ್ಮ ರೈತರು ಸೇರಿದಂತೆ ಪಂಜಾಬ್ ಮತ್ತು ಅದರ ಜನರ ಹಿತಾಸಕ್ತಿಗಾಗಿ ನನ್ನದೇ ರಾಜಕೀಯ ಪಕ್ಷವನ್ನು ಆರಂಭಿಸುವ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡುತ್ತೇನೆ" ಎಂದು ಅಮರೀಂದರ್ ಹೇಳಿಕೆಯನ್ನು ಮಾಧ್ಯಮ ಸಲಹೆಗಾರ ರವೀನ್ ತುಕ್ರಲ್ ಟ್ವೀಟ್ ಮಾಡಿದ್ದಾರೆ.
"ರೈತರ ಪ್ರತಿಭಟನೆಯು ರೈತರ ಪರವಾದ ನಿರ್ಧಾರದ ಬಳಿಕ ಅಂತ್ಯವಾದರೆ ಮುಂದಿನ 2022 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು. ಹಾಗೆಯೇ ಅದೇ ರೀತಿಯ ಸಿದ್ಧಾಂತವನ್ನು ಹೊಂದಿರುವ ಅಕಾಳಿದಳದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದೆ ತೀರ್ಮಾನಿಸಲಾಗುತ್ತದೆ. ವಿಶೇಷವಾಗಿ ದಿಂಡಾಸ ಮತ್ತು ಬ್ರಹ್ಮಪುರ ಬಣಗಳೊಂದಿಗೆ," ಎಂದು ಇನ್ನೊಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
"ನನ್ನ ರಾಜ್ಯ ಹಾಗೂ ನನ್ನ ಜನರ ಭವಿಷ್ಯವನ್ನು ಸುರಕ್ಷತೆಗೊಳಿಸುವವರೆಗೂ ನಾನು ವಿರಾಮ ಪಡೆಯಲಾರೆ. ಪಂಜಾಬ್ಗೆ ರಾಜಕೀಯ ಸ್ಥಿರತೆಯ ಅಗತ್ಯವಿದೆ. ಹಾಗೆಯೇ ಆಂತರಿಕ ಹಾಗೂ ಬಾಹ್ಯ ಬೆದರಿಕೆಯಿಂದ ಸುರಕ್ಷತೆ ಅಗತ್ಯವಿದೆ. ಇಂದು ಅಪಾಯದಲ್ಲಿರುವ ಜನರ ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತೇನೆ ಎಂದು ನಾನು ಈ ಮೂಲಕ ಜನರಿಗೆ ಭರವಸೆಯನ್ನು ನೀಡುತ್ತೇನೆ," ಎಂಬ ಅಮರೀಂದರ್ ಸಿಂಗ್ ಹೇಳಿಕೆಯನ್ನು ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications