ಪಂಜಾಬ್: ಸಾಲದ ಶೂಲಕ್ಕೆ ಬೆದರಿ ಇಡೀ ಕುಟುಂಬಕ್ಕೆ ಬೆಂಕಿಯಿಟ್ಟ ರೈತ
ಚಂಡೀಘರ್, ಅಕ್ಟೋಬರ್.18: ಪಂಜಾಬ್ ನಲ್ಲಿ ಸಾಲದ ಶೂಲಕ್ಕೆ ಒಂದೇ ಕುಟುಂಬದ ನಾಲ್ವರು ಬಲಿಯಾಗಿದ್ದಾರೆ. ನಿದ್ದೆಗೆ ಜಾರಿದ ಮನೆಯವರ ಮೇಲೆ ಸೀಮೆಎಣ್ಣೆ ಸುರಿದ ರೈತ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ರೈತ ಬರೆದ ಆತ್ಮಹತ್ಯೆ ಪತ್ರದಲ್ಲಿ ಲಾಕ್ ಡೌನ್ ನಿಂದಾಗಿ ಎದುರಿಸಿದ ಕಷ್ಟವನ್ನು ವಿವರಿಸಿದ್ದಾನೆ.
ಪಂಜಾಬ್ ನ ಫರಿದಕೋಟ್ ಜಿಲ್ಲೆ ಕಾಲೇರ್ ಗ್ರಾಮದಲ್ಲಿ ಇಂಥದೊಂದು ಮನ ಕಲುಕುವ ಘಟನೆ ನಡೆದಿದೆ. ಧರ್ಮಪಾಲ್ ಎಂಬ ರೈತ 8 ಲಕ್ಷ ರೂಪಾಯಿ ಸಾಲ ಮಾಡಿದ್ದು, ಅದನ್ನು ಹಿಂತಿರುಗಿ ನೀಡಲು ಸಾಧ್ಯವಾಗದ ಹಿನ್ನೆಲೆ ಸಾವಿಗೆ ಶರಣಾಗುತ್ತಿರುವುದಾಗಿ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಿದ್ದಾನೆ.
ಮಾರ್ಚ್.25ರಂದು ಮೊದಲ ಬಾರಿಗೆ ಭಾರತ ಲಾಕ್ ಡೌನ್ ಘೋಷಣೆಯಾದ ದಿನದಿಂದ ಇಂದಿನವರೆಗೂ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಕಳೆದ ಇಷ್ಟು ದಿನಗಳಲ್ಲಿ ಕುಟುಂಬವನ್ನು ನಿಭಾಯಿಸಿದ್ದೇ ದೊಡ್ಡ ಸವಾಲಾಗಿತ್ತು ಎಂದು ರೈತ ತನ್ನ ನೋವು ತೋಡಿಕೊಂಡಿದ್ದಾನೆ. 8 ಲಕ್ಷ ಹಣವನ್ನು ಒಬ್ಬರಲ್ಲಿ ಸಾಲವಾಗಿ ಪಡೆದಿದ್ದ ರೈತ, ಅಷ್ಟೇ ಮೊತ್ತವನ್ನು ಇನ್ನೊಬ್ಬರಿಗೆ ಸಾಲವಾಗಿ ನೀಡಿದ್ದನು. ನನ್ನಿಂದ ಸಾಲ ಪಡೆದ ವ್ಯಕ್ತಿ ನನಗೆ ಹಣ ವಾಪಸ್ ನೀಡದ ಕಾರಣಕ್ಕೆ, ನಾನು ಸಾಲ ಪಡೆದ ವ್ಯಕ್ತಿಗೆ ಹಣ ಹಿಂತಿರುಗಿಸಲು ಆಗುತ್ತಿಲ್ಲ ಎಂದು ಧರ್ಮಪಾಲ್ ತಮ್ಮ ಆತ್ಮಹತ್ಯೆ ಪತ್ರದಲ್ಲಿ ಬರೆದುಕೊಂಡಿದ್ದಾರೆ.

ಮಲಗಿದ್ದ ಕುಟುಂಬದವರ ಮೇಲೆ ಸೀಮೆಎಣ್ಣೆ:
"ಅವರು ಇಡೀ ಕುಟುಂಬ ಮಲಗಿದ್ದ ಕೋಣೆಯೊಳಗೆ ಎಲ್ಪಿಜಿ ಸಿಲಿಂಡರ್ ತಂದಿದ್ದರು. ನಂತರ ಕೊಠಡಿಯನ್ನು ಒಳಗಿನಿಂದ ಲಾಕ್ ಮಾಡಿ, ತನ್ನ ಮೇಲೆ ಮತ್ತು ಕುಟುಂಬದ ಸದಸ್ಯರ ಮೇಲೆ 10 ಲೀಟರ್ ಸೀಮೆಎಣ್ಣೆ ಸುರಿದು, ಸಿಲಿಂಡರ್ನ ನಿಯಂತ್ರಕವನ್ನು ತೆಗೆದುಹಾಕಿ ಬೆಂಕಿ ಹಚ್ಚಿಕೊಂಡಿದ್ದಾರೆ. ಕಣ್ಣು ಮುಚ್ಚು ಕಣ್ಣು ತೆಗೆಯುವುದರಲ್ಲೇ ಇಡೀ ಕೋಣೆಗೆ ಬೆಂಕಿ ಹೊತ್ತಿಕೊಂಡಿತು. ಇಡೀ ಕುಟುಂಬವು ಸಜೀವ ದಹನವಾಯಿತು" ಎಂದು ಫರೀದ್ಕೋಟ್ ಎಸ್ಪಿ ಸೇವಾ ಸಿಂಗ್ ಮಾಲ್ಹಿ ತಿಳಿಸಿದ್ದಾರೆ.












Click it and Unblock the Notifications