ಚಾಮರಾಜನಗರ : ರಸ್ತೆಯಲ್ಲಿ ಹುರುಳಿ ಒಕ್ಕಣೆಗೆ ಮಹಿಳೆ ಬಲಿ
ಚಾಮರಾಜನಗರ, ಜನವರಿ 21 : ರಸ್ತೆಯಲ್ಲಿ ಒಕ್ಕಣೆ ಮಾಡದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಆದರೆ, ಅದಕ್ಕೆ ಸೊಪ್ಪು ಹಾಕದೆ ರೈತರು ಒಕ್ಕಣೆ ಮಾಡಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಮೃತಪಟ್ಟ ಮಹಿಳೆಯನ್ನು ನಾಗವಳ್ಳಿ ಗ್ರಾಮದ ಶಿಲ್ಪಶ್ರೀ ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಹುರುಳಿ ಬಳ್ಳಿ ಬೈಕ್ ಚಕ್ರಕ್ಕೆ ಸಿಲುಕಿ ನೆಲಕ್ಕುರುಳಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಶಿಲ್ಪಶ್ರೀ ಚಾಮರಾಜನಗರ ಜಿಲ್ಲಾ ಪೊಲೀಸ್ ಶಸ್ತ್ರಾಗಾರದಲ್ಲಿ ಕಾರ್ಯ ನಿರ್ವಹಿಸುವ ಪೇದೆ ರಮೇಶ್ ಎಂಬುವರ ಪತ್ನಿ. ಶಿಲ್ಪಶ್ರೀ ಜನವರಿ 17ರಂದು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ರಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗವಳ್ಳಿ ಗ್ರಾಮದ ಬಳಿ ಅಪಘಾತದಲ್ಲಿ ಗಾಯಗೊಂಡಿದ್ದರು.
ಗ್ರಾಮದಲ್ಲಿ ರಸ್ತೆಯುದ್ದಕ್ಕೂ ರೈತರು ಹುರುಳಿಬಳ್ಳಿಯನ್ನು ಒಕ್ಕಣೆಗಾಗಿ ಹರಡಿದ್ದರು. ಅನ್ಯ ಮಾರ್ಗವಿಲ್ಲದ ಕಾರಣ ಎಲ್ಲ ವಾಹನಗಳು ಸರ್ಕಸ್ ಮಾಡುತ್ತಾ ಹುರುಳಿ ಬಳ್ಳಿಗಳ ಮೇಲೆಯೇ ತೆರಳುತ್ತಿದ್ದವು. ಅದರಂತೆ ಶಿಲ್ಪಶ್ರೀ ಅವರು ತೆರಳುತ್ತಿದ್ದ ದ್ವಿಚಕ್ರ ವಾಹನವೂ ಒಕ್ಕಣೆ ಮೇಲೆಯೇ ಹೋಗಿದೆ.
ಈ ವೇಳೆ ಒಕ್ಕಣೆಗೆ ಹಾಕಿದ್ದ ಹುರುಳಿ ಬಳ್ಳಿ ಟೈರ್ಗೆ ಸುತ್ತಿಕೊಂಡಿದೆ. ಪರಿಣಾಮ ನಿಯಂತ್ರಣ ತಪ್ಪಿ ನೆಲಕ್ಕುರುಳಿದ್ದು, ಈ ವೇಳೆ ನೆಲಕ್ಕೆ ಬಿದ್ದ ಶಿಲ್ಪಶ್ರೀ ಅವರ ತಲೆ ರಸ್ತೆಗೆ ಬಡಿದಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಸುಮಾರು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಂಜೆ ಸಾವನ್ನಪ್ಪಿದ್ದಾರೆ. ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಸವಾರರ ಆಕ್ರೋಶ : ರಸ್ತೆಯಲ್ಲಿ ಹುರುಳಿ ಒಕ್ಕಣೆ ಮಾಡದಂತೆ ಈಗಾಗಲೇ ಪೊಲೀಸರು ಸೂಚನೆ ನೀಡಿದ್ದರೂ ರೈತರು ಒಕ್ಕಣೆಯನ್ನು ಕಣದಲ್ಲಿ ಮಾಡದೆ ರಸ್ತೆಯಲ್ಲಿ ಮಾಡುತ್ತಿರುವುದರಿಂದ ದ್ವಿಚಕ್ರವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಇತ್ತೀಚೆಗೆ ಜೀಪೊಂದು ಬೆಂಕಿ ಅವಘಡ ಸಂಭವಿಸಿ ಸುಟ್ಟು ಕರಕಲಾಗಿತ್ತು. ಇದೀಗ ಪ್ರಾಣ ಹಾನಿಯಾಗಿದೆ. ಇನ್ನು ಮುಂದೆಯಾದರೂ ಕಠಿಣ ಕ್ರಮ ಕೈಗೊಂಡು ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ಸಂಪೂರ್ಣ ನಿಷೇಧ ಮಾಡಬೇಕೆಂದು ವಾಹನ ಸವಾರರು ಒತ್ತಾಯಿಸಿದ್ದಾರೆ.