ಆಪರೇಷನ್ ಹಸ್ತದ ಅವಶ್ಯಕತೆ ನಮಗಿಲ್ಲ, ಪಕ್ಷಕ್ಕೆ ಬರುವವರನ್ನು ತಡೆಯಲ್ಲ: DCM ಡಿ.ಕೆ.ಶಿವಕುಮಾರ್
ಚಾಮರಾಜನಗರ, ಆಗಸ್ಟ್, 26: ಪೂರ್ಣ ಮೆಜಾರಿಟಿ ಇದೆ, ನಮಗೆ ಆಪರೇಷನ್ ಹಸ್ತದ ಅವಶ್ಯಕತೆಯಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಮರಾಜನಗರದಲ್ಲಿ ಹೇಳಿದರು.
ಚಾಮರಾಜನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಆಪರೇಷನ್ ಹಸ್ತ ಮಾಡುವ ಅವಶ್ಯಕತೆ ನಮಗಿಲ್ಲ. ಆದರೆ, ಪಕ್ಷ ಇಚ್ಚಿಸಿ ಬರುವವರನ್ನು ತಡೆಯಲಾಗುವುದಿಲ್ಲ. ನಮ್ಮ ಮೇಲೆ ವಿಶ್ವಾಸ ಇಟ್ಟವರಿಗೆ ನಾವು ಕೂಡ ವಿಶ್ವಾಸ ತೋರಿಸಬೇಕಾಗಲಿದೆ ಎಂದರು.

ಪ್ರಧಾನಿ ಭೇಟಿ ವೇಳೆ ಶಿಷ್ಟಾಚಾರ ಪಾಲಿಸಿಲ್ಲ ಎಂಬ ಬಿಜೆಪಿ ನಾಯಕ ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿ, ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದಕ್ಕೆ ಅವರಿಗೆ ಆಗುತ್ತಿಲ್ಲ. ಪ್ರಧಾನಿ ಮೋದಿ ಬರುವ ವಿಚಾರವನ್ನು ಆರ್.ಅಶೋಕ್ಗೆ ಹೇಳಿಲ್ಲ, ಪ್ರಧಾನ ಮಂತ್ರಿಗಳ ಕಚೇರಿಯಿಂದ ಗವರ್ನರ್ ಬರುವುದು ಬೇಡ, ಸಿಎಂ ಬರುವುದು ಬೇಡ, ಡಿಸಿಎಂ ಬರುವುದು ಬೇಡ ಅಂದಿದ್ದಾರೆ. ನಮಗೆ ಸಮಯ, ವ್ಯವಹಾರ ಪ್ರಜ್ಞೆ ಇದೆ. ಪ್ರೊಟೊಕಾಲ್ ಗೊತ್ತಿದೆ ಆದರೆ, ಅವರದೇ ಪಕ್ಷದ ನಾಯಕರಿಗೆ ಮಾಹಿತಿ ಇಲ್ಲ ಎಂದು ಹರಿಹಾಯ್ದರು.
ಇನ್ನು, ಇದೇ ವೇಳೆ ಆಕ್ಸಿಜನ್ ದುರಂತದಲ್ಲಿ ಮಡಿದ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಕೊಡಿಸುವ ವಿಚಾರವನ್ನು ಜಿಲ್ಲೆಯ ಜನಪ್ರನಿಧಿಗಳು, ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದು ಹೇಳಿದರು.
ಕೈ ಮುಖಂಡನ ಜೇಬಿಗೆ ಕತ್ತರಿ ಹಾಕಿ ಸಿಕ್ಕಿಬಿದ್ದ ವ್ಯಕ್ತಿ
ಇಂದು ಕಾರ್ಖಾನೆ ಭೂಮಿಪೂಜೆಗಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಮರಾಜನಗರಕ್ಕೆ ಆಗಮಿಸಿದ್ದರು. ನೆಚ್ಚಿನ ನಾಯಕನನ್ನು ಕಾಣಲು ಕೈ ಕಾರ್ಯಕರ್ತರು, ಮುಖಂಡರ ದಂಡೇ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಿರ್ಮಾಣ ಮಾಡಿದ್ದ ಹೆಲಿಪ್ಯಾಡ್ನಲ್ಲಿ ಸೇರಿತ್ತು. ಈ ವೇಳೆ, ಕಳ್ಳನೋರ್ವ ಕೈಚಳಕ ತೋರಲು ಹೋಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.
ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ಎಂಬವವರ ಜೇಬಿನಿಂದ 30 ಸಾವಿರ ರೂಪಾಯಿ ಎಗರಿಸುವಾಗ ಗೌಡಹಳ್ಳಿ ಮಹೇಶ್ ಎಂಬವವರು ಗಮನಿಸಿ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಕ್ಷಣ ಮಾತ್ರದಲ್ಲಿ 30 ಸಾವಿರ ರೂಪಾಯಿ ಎಗರಿಸಿ ಮಾಯವಾಗುತ್ತಿದ್ದ ಖದೀಮ ಯುವಕ ಸದ್ಯ ಪೊಲೀಸರ ವಶದಲ್ಲಿದ್ದಾನೆ. ಚುನಾವಣೆ ಪ್ರಚಾರಕ್ಕೆ ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ಭೇಟಿ ಕೊಟ್ಟಿದ್ದ ವೇಳೆ ಶಾಸಕರ ಪುತ್ರನ ಜೇಬಿಗೂ ಕತ್ತರಿ ಬಿದ್ದು 20 ಸಾವಿರ ರೂಪಾಯಿ ಕಳೆದುಕೊಂಡಿದ್ದರು.












Click it and Unblock the Notifications