ಗುಂಡ್ಲುಪೇಟೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಈಶ್ವರಪ್ಪ
ಚಾಮರಾಜನಗರ, ಆಗಸ್ಟ್ 17: ಕಳೆದ ವಿಧಾನಸಭೆಯ ಉಪಚುನಾವಣೆಯ ಮತಯಾಚನೆ ಸಂದರ್ಭದಲ್ಲಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಪಟ್ಟಣದ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಅಂದು ಸೆಕ್ಟರ್ ಮ್ಯಾಜಿಸ್ಟ್ರೇಟ್ ಆಗಿದ್ದ ಚಿಕ್ಕಣ್ಣ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಪ್ರಕರಣ ದಾಖಲಿಸಿದ್ದು, ಹಿಂದೆ ವಿಚಾರಣೆಗೆ ಹಾಜರಾಗದೆ ವಾರಂಟ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಈಶ್ವರಪ್ಪನವರು ಖುದ್ದಾಗಿ ವಿಚಾರಣೆಗೆ ಆಗಮಿಸಿದರು. ಎಲ್ಲಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದ್ದು, ಈ ಪ್ರಕರಣವನ್ನೂ ಅಲ್ಲಿಗೆ ವರ್ಗಾಯಿಸುವಂತೆ ವಕೀಲರ ಮೂಲಕ ಮನವಿ ಸಲ್ಲಿಸಿದರು.

ನಂತರ ವರದಿಗಾರರೊಂದಿಗೆ ಮಾತನಾಡಿ, ಒಂದೆಡೆ ನೆರೆ ಇನ್ನೊಂದೆಡೆ ಬರಪೀಡಿತವಾಗಿ ಜನತೆ ಸಂಕಷ್ಟದಲ್ಲಿ ಸಿಲುಕಿದ್ದರೂ ಅವರ ಬಳಿ ತೆರಳುತ್ತಿಲ್ಲ. ಸಾಲ ಮನ್ನಾ ಬಗ್ಗೆ ಮುಖ್ಯಮಂತ್ರಿಗಳಿಗೆ ಸ್ಪಷ್ಟತೆಯಿಲ್ಲದೆ ಗೊಂದಲದ ಹೇಳಿಕೆ ನೀಡುತ್ತಿದ್ದು, ರೈತರನ್ನು ಹತಾಶರನ್ನಾಗಿಸಿದೆ. ಶಾಸಕರಿಗೆ ಇನ್ನೂ ಅನುದಾನವನ್ನೇ ನೀಡದೆ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿವೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ನೇಮಿಸಿದ್ದರೂ ಯಾರೂ ಭೇಟಿ ನೀಡುತ್ತಿಲ್ಲ. ರಾಜ್ಯ ಸರ್ಕಾರ ವರ್ಗಾವಣೆ ಮೂಲಕ ಹಣಮಾಡುವ ದಂಧೆಯಲ್ಲಿ ತೊಡಗಿದ್ದು ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಎನ್.ಮಲ್ಲೇಶ್, ರಾಜ್ಯ ಸಮಿತಿಯ ಸದಸ್ಯ ಹುಚ್ಚೇಗೌಡ, ಮುಖಂಡರಾದ ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಹಲವರು ಇದ್ದರು.












Click it and Unblock the Notifications