Video..ಕಾಡಿನ ರಸ್ತೆ ಮಧ್ಯೆ ಮರಿ ಆನೆ ಅಟ್ಟಾಡಿಸಿದ ಬೈಕ ಸವಾರರು: ಆಕ್ರೋಶ
ಚಾಮರಾಜನಗರ, ಡಿಸೆಂಬರ್ 02: ದಟ್ಟ ಹಸಿರು ಹೊದಿಕೆ ಹೊಂದಿರುವ ಚಾಮರಾಜನಗರ ವ್ಯಾಪ್ತಿಯ ಅರಣ್ಯ ವ್ಯಾಪ್ತಿಯಲ್ಲಿ ನಿತ್ಯ ಒಂದಿಲ್ಲ ಒಂದು ಕಡೆ ವನ್ಯ ಜೀವಿಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಕೆಲವೊಮ್ಮೆ ಅವರು ರೈತರು ಬೆಳೆದ ಜಮೀನು, ತೋಟಗಳಿಗೆ ನುಗ್ಗುತ್ತವೆ. ಬೆಳೆಗಳಿಗೆ ಹಾನಿ ಮಾಡುವ ಮೂಲಕ ಮಾನವ- ಕಾಡು ಪ್ರಾಣಿ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಆದರೆ ಕೆಲವೊಮ್ಮೆ ಮನುಷ್ಯನೆ ಪ್ರಾಣಿಗಳ ಬಳಿ ಹೋಗಿ ಇನ್ನಿಲ್ಲದಂತೆ ತೊಂದರೆ ಕೊಡುತ್ತಾರೆ. ಅಂತದ್ದೆ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿಲ್ಲೆಯ ಕಾಡಿನಲ್ಲಿ ಹಾದು ಹೋಗುವ ರಸ್ತೆ ಮಧ್ಯೆ ನಿಂತಿದ್ದ ಸಣ್ಣ ಆನೆ ಮರಿಗೆ ದಾರಿ ಹೋಕ ವಾಹನ ಸವಾರರು ತೊಂದರೆ ಕೊಟ್ಟ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದೆ. ತಾಯಿಯಿಂದ ಬೇರ್ಪಟ್ಟಂತೆ ಕಾಣುವ ಮರಿಗೆ ವಾಹನ ಸವಾರರು ಕಿರಿ ಕಿರಿ ಉಂಟು ಮಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಈ ವಿಡಿಯೋ ಅನ್ನು ಕರ್ನಾಟಕ ಪೋರ್ಟ್ಪೊಲೀಯೋ ಹ್ಯಾಂಡಲ್ನಿಂದ ವಿಡಿಯೋ ಹಂಚಿಕೊಳ್ಳಲಾಗಿದೆ.

ಅರಣ್ಯದಲ್ಲಿ ಹೊರಟಿದ್ದ ಬೈಕ್ ಸವಾರರು ಅಜಾಗರೂಕ ವ್ಯಕ್ತಿಗಳಂತೆ ವರ್ತಿಸಿದ್ದಾರೆ. ದಾರಿಯಲ್ಲಿ ನಿಂತಿದ್ದ ಮರಿ ಆನೆಯನ್ನು ಬೈಕ್ ಮೇಲೆ ಬಂದು ಓಡಿಸಿದ್ದಾರೆ. ವೀಡಿಯೊ ರೆಕಾರ್ಡ್ ಮಾಡುವ ಒಂದೇ ಉದ್ದೇಶದಿಂದ ಹೊರಟಿದ್ದ ಬೈಕ್ ಸವಾರರು ಮರಳಿ ಬಂದು ಆನೆಯನ್ನು ಅಟ್ಟಾಡಿಸಿದ್ದಾರೆ.
ಮರಿ ಆನೆಯನ್ನು ಹೀಗೆ ರಸ್ತೆಯಲ್ಲಿ ವಿಡಿಯೋಗಾಗಿ ಓಡಾಡಿಸುವುದು, ಕೆರಳಿಸುವುದು ಬೇಜವಾಬ್ದಾರಿಯಾಗಿದೆ. ಇದು ವನ್ಯಜೀವಿಗಳಿಗೆ ತೊಂದರೆ ಕೊಡುವುದು ಹಾನಿಕಾರಕವಾಗಿದೆ. ಈ ನಡೆ ಮುಗ್ಧ ಪ್ರಾಣಿಗಳಿಗೆ ಅಪಾಯ ಉಂಟು ಮಾಡುವಂತಹವಾಗಿವೆ. ನೈಸರ್ಗಿಕ ಪರಿಸರ, ಪ್ರಾಣಿಗಳ ಆವಾಸ ಸ್ಥಾನದಲ್ಲಿ ಸಹಜವಾಗಿ ವರ್ತಿಸಬೇಕು. ಪ್ರಾಣಿಗಳನ್ನು ಅವುಗಳ ಪಾಡಿಗೆ ಬಿಟ್ಟು ಬಿಡಬೇಕು.
ಸವಾರರ ವಿರುದ್ಧ ಆಕ್ರೋಶ ವ್ಯಕ್ತ
ಅಲ್ಲದೇ ಮರಿ ಆನೆ ಕೆಣಕುವಾಗ ತಾಯಿ ಆನೆ ಬಂದಲ್ಲಿ ವಾಹನ ಸವಾರರ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಬಹುಶಃ ಇವರು ಬೇಕು ಅಂತಲೇ ದುರುದ್ದೇಶಪೂರ್ವಕವಾಗಿ ಹೀಗೆ ಮೂಕ ಪ್ರಾಣಿಗಳಿಗೆ ತೊಂದರೆ ಕೊಡುತ್ತಿದ್ದಾರೆ ಅಂತಲೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮರಿ ಕನಿಷ್ಠ 250 ಮೀಟರ್ಗಳಷ್ಟು ದೂರ ಓಡಿ ಬಂದಿದೆ. ಇಂತಹ ವಾಹನ ಸವಾರರು, ಪರಿಸರ, ಪ್ರಕೃತಿ ನಡುವೆ ಇದ್ದಾಗ ಜಾಗೃತಿಯಿಂದ ನಡೆದುಕೊಳ್ಳಬೇಕು. ಪರಿಸರಕ್ಕೆ ಹಾನಿ ಆಗುವಂತೆ, ಪ್ರಾಣಿಗಳನ್ನು ಕೆರಳಿಸುಂತೆ ಮಾಡುವವರ ವಿರುದ್ಧ ಕಠಿಣ ಶಿಕ್ಷೆ ಕೈಗೊಳ್ಳಬೇಕು. ಅರಣ್ಯ ಪ್ರದೇಶದಲ್ಲಿ ಈ ರೀತಿ ಯಾರು ನಡೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಕೆಲವು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.
ಈಗಲೇ ವನ್ಯ ಜೀವಿಗಳು ಹಾಗೂ ಮಾನವರ ಮಧ್ಯೆ ಆಗಾಗ ಸಂಘರ್ಷ ನಡೆಯುತ್ತಿದೆ. ಇಂತಹ ಘಟನೆಗಳು ಹೆಚ್ಚಾದರೆ ಕಾಡಂಚಿನ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಲೂ ಬಹುದು. ಪ್ರಾಣಿ, ಪಕ್ಷಿಗಳಿಗೆ ನಮ್ಮಂತೆ ಬುದುಕುವ ಹಕ್ಕಿದೆ. ನೈಸರ್ಗಿಕ ಸ್ಥಳಗಳನ್ನು ಯಥಾಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇದು ಉಲ್ಲಂಘನೆ ಆದಾಗ ಕ್ರಮ ಜರುಗಿಸಬೇಕು. ಪ್ರಾಣಿ, ಪ್ರಪ್ರಕೃತಿ ಸಂಪತ್ತು ರಕ್ಷಣೆಗೆ ನಾವೆಲ್ಲರು ಒಟ್ಟಾಗಬೇಕಿದೆ.












Click it and Unblock the Notifications