ನನಗೂ ಆತನಿಗೂ ಹೋಲಿಕೆ ಸರಿಯಲ್ಲ: ವಿ.ಸೋಮಣ್ಣ
ಚಾಮರಾಜನಗರ, ಜೂ. 8: ನನಗೆ 71 ಅವನಿಗೆ 46 ವರ್ಷ ವಯಸ್ಸು. ನಾನು 7 ಬಾರಿ ಎಂಎಲ್ಎ ಆಗಿದ್ದೀನಿ, ಆತ ಇನ್ನೂ ಒಂದು ಸಾರಿನೂ ಎಂಎಲ್ಎ ಆಗಿಲ್ಲ. ಆತನಿಗೂ ನನಗೂ ಯಾಕೆ ಹೋಲಿಸುತ್ತೀರಾ ಎಂದು ಸಚಿವ ವಿ.ಸೋಮಣ್ಣ ಪರೋಕ್ಷವಾಗಿ ವಿಜಯೇಂದ್ರಗೆ ಟಾಂಟ್ ಕೊಟ್ಟರು.
ನೀವು ಹಾಗೂ ವಿಜಯೇಂದ್ರ ಒಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಸೋಮಣ್ಣ, "ಮೊದಲು ಅವ ಎಂಎಲ್ಎ ಆಗಲಿ. ಈ ಪಕ್ಷದಲ್ಲಿ ದೇಶಕ್ಕೆ ಕೊಡುಗೆ ಕೊಟ್ಟ ಪುಣ್ಯಾತ್ಮರು ಬಹಳಷ್ಟು ಮಂದಿ ಇದ್ದಾರೆ, ಪಕ್ಷಕ್ಕೆ ದುಡಿದವರಿದ್ದಾರೆ ಅವರ ಮುಂದೆ ನಾವು ಗೌಣ ಹಾಗೂ ನಿಮಿತ್ತ ಮಾತ್ರ" ಎಂದು ವಿಜಯೇಂದ್ರರನ್ನು ಪರೋಕ್ಷವಾಗಿ ಕುಟುಕಿದರು.
ವಿಜಯೇಂದ್ರ ಮುಂದಿನ ಸಿಎಂ ಎಂದು ಘೋಷಣೆ
ವಿಜಯೇಂದ್ರ ಮುಂದಿನ ಸಿಎಂ ಎಂದು ಘೋಷಣೆ ಕೂಗಿದ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿ, ಎಲ್ಲವನ್ನೂ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ, ಮೊದಲು 2023 ಮೇ ಬರಲಿ ಅದಾದ ನಂತರ ವಿಜಯೇಂದ್ರಗೆ ಟಿಕೆಟ್ ಕೊಡಬೇಕು, ಬಳಿಕ ಅವರು ಗೆದ್ದು ಬರಬೇಕು ಎನ್ನುವ ಮೂಲಕ ವಿಜಯೇಂದ್ರಗೆ ಟಿಕೆಟ್ ಕೊಡುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ಆರ್ ಎಸ್ಎಸ್ ವಿರುದ್ಧದ ವಾಗ್ದಾಳಿ ಮತ್ತು ಟೀಕೆಗೆ ಪ್ರತಿಕ್ರಿಯಿಸಿ, "ಆರ್ ಎಸ್ ಎಸ್ ಸಂಘಟನೆಯ ದೇಶದ ದೊಡ್ಡ ಸಂಸ್ಥೆ, ತ್ಯಾಗದ ಭಾವನೆ, ದೇಶದ ಅಭಿವೃದ್ಧಿ, ದೂರದೃಷ್ಟಿಯ ಚಿಂತನೆ ಕೊಡುತ್ತಿರುವ ಸಂಸ್ಥೆ, ಎಲ್ಲಾ ವರ್ಗಕ್ಕೂ ಮಾನ್ಯತೆ ಕೊಟ್ಟು ವಿಭಿನ್ನವಾಗಿ ದೇಶದ ಪ್ರಗತಿಗೆ ಕಾರಣವಾಗಿ ಬೆಳೆಯುವ ದೊಡ್ಡ ಪೌಂಢೇಷನ್ ಹಾಕಿರುವ ಸಂಸ್ಥೆ ಬಗ್ಗೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಯಾರೂ ಮಾಡಬಾರದು, ಅನಾವಶ್ಯಕವಾಗಿ ಟೀಕಿಸುವವರು ಇದರ ಬಗ್ಗೆ ಸ್ವಲ್ಪ ಅರಿಯಬೇಕು" ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದರು.
ಬೆಂಗಳೂರಿಗೆ ಬಂದ್ರೆ ಕಥೆ ಮುಗಿದಂತೆ
ಬೆಂಗಳೂರಿನಲ್ಲಿ ಉಗ್ರ ಸೆರೆ ಸಿಕ್ಕಿದ ಕುರಿತು ಮಾತನಾಡಿ, ಗುಪ್ತಚರ ಇಲಾಖೆ ಮತ್ತು ಆಂತರಿಕ ಭದ್ರತಾ ವಿಭಾಗ ರಾಜ್ಯದಲ್ಲಿ ಸಶಕ್ತವಾಗಿದ್ದು ಇನ್ನು 3-4 ತಿಂಗಳುಗಳಲ್ಲಿ ಮತ್ತಷ್ಟು ಮಂದಿಯನ್ನು ಸೇರಿಸುವ ಜಾಗಕ್ಕೆ ಸೇರಿಸಲಾಗುತ್ತದೆ. ದಮನಕಾರಿ ಶಕ್ತಿಗಳನ್ನು ಮಟ್ಟ ಹಾಕುವ ಕೆಲಸ ನಡೆಯುತ್ತಿದ್ದು ಬೆಂಗಳೂರಿಗೆ ಉಗ್ರರು ಬಂದರೆ ಅವರ ಕಥೆ ಮುಗಿದಂತೆಯೇ ಎಂದರು.

ಇದೇ ವೇಳೆ, ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮೈ.ವಿ.ರವಿಶಂಕರ್ ಈ ಬಾರಿ ಚಿಂತಕರ ಚಾವಡಿಗೆ ಸೇರಲಿದ್ದಾರೆ. ಬಿಜೆಪಿ ಪರವಾದ ಅಲೆಯಿದ್ದು ಹೊಸ ಮತದಾರರು ಮೋದಿ ಕಾರ್ಯವನ್ನು ಮೆಚ್ಚಿದ್ದಾರೆ. ಈ ಬಾರಿ ಮೈ.ವಿ.ರವಿಶಂಕರ್ ಗೆದ್ದೇ ಗೆಲ್ಲುತ್ತಾರೆ ಎಂದು ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.
(ಒನ್ಇಂಡಿಯಾ ಸುದ್ದಿ)











Click it and Unblock the Notifications