ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಟ್ಯಾಂಕ್ ಸ್ವಚ್ಛ: ಎಲ್ಲಾ ತೊಂಬೆಗಳಲ್ಲಿ ನೀರು ಕುಡಿದ ದಲಿತರು
ಚಾಮರಾಜನಗರ, ನವೆಂಬರ್ 20: ದಲಿತ ಮಹಿಳೆ ನೀರು ಕುಡಿದರೆಂದು ಗೋಮೂತ್ರ ಸಿಂಪಡಿಸಿ ಟ್ಯಾಂಕ್ ಸ್ಬಚ್ಛ ಮಾಡಿದ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಎಸಿ ಗೀತಾ ಹುಡೇದ, ಚಾಮರಾಜನಗರ ತಹಸಿಲ್ದಾರ್ ಬಸವರಾಜು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ್ದಾರೆ.
ದಲಿತ ಸಮುದಾಯದ ಮದುವೆಯೊಂದಕ್ಕೆ ಎಚ್ಡಿ ಕೋಟೆ ತಾಲೂಕಿನ ಸರಗೂರಿನಿಂದ ಬಂದಿದ್ದ ಮಹಿಳೆಯೊಬ್ಬರು ವಾಪಾಸ್ ತೆರಳುವಾಗ ಮೇಲ್ವರ್ಗದವರು ವಾಸಿಸುವ ಬೀದಿಯಲ್ಲಿದ್ದ ತೊಂಬೆನಲ್ಲಿಯೊಂದರಲ್ಲಿ ನೀರು ಕುಡಿದಿದ್ದಾರೆ. ಇದನ್ನು ಗಮನಿಸಿದ ಅದೇ ಬೀದಿಯವರು ಇಡೀ ತೊಂಬೆ ನೀರನ್ನು ಖಾಲಿ ಮಾಡಿಸಿ ಗಂಜಲ ಹಾಕಿ ತೊಳೆದಿದ್ದಾರೆ.
ಇನ್ನು ಮದುವೆಗೆ ಬಂದಿದ್ದ ಯುವಕರು ವಾಪಸ್ ತೆರಳುವ ವೇಳೆ "ನಮ್ಮೂರಿನ ಮಹಿಳೆ ನೀರು ಕುಡಿದಿದ್ದಕ್ಕೆ ನಿಮ್ಮ ಊರಿನ ಮೇಲ್ವರ್ಗದ ಜನರು ಟ್ಯಾಂಕ್ ಖಾಳಿ ಮಾಡಿ ಸ್ವಚ್ಚ ಮಾಡಿಸಿದರು" ಎಂದು ಹೆಗ್ಗೋಠಾರ ಗ್ರಾಮದ ದಲಿತ ಯುವಕನಿಗೆ ತಿಳಿಸಿ ಹೋಗಿದ್ದಾರೆ.

ಈ ವಿಚಾರವನ್ನು ಹೆಗ್ಗೋಠಾರ ಗ್ರಾಮದ ಯುವಕ ತಹಸಿಲ್ದಾರ್ ಮುಂದೆ ಈ ಅಮಾನವೀಯ ಘಟನೆಯನ್ನು ಹೇಳಿಕೊಂಡಿದ್ದಾರೆ.
ಗ್ರಾಮದ ತೊಂಬೆಗಳಲ್ಲಿ ನೀರು ಕುಡಿದ ದಲಿತ ಯುವಕರು
ಇನ್ನು ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಚರ್ಚೆಯ ಬಳಿಕ ತಹಸಿಲ್ದಾರ್ ಬಸವರಾಜು ಗ್ರಾಮದ ಎಲ್ಲಾ ತೊಂಬೆ ನಲ್ಲಿಗಳಿಗೆ ತೆರಳಿ ದಲಿತ ಯುವಕರಿಂದ ನೀರು ಕುಡಿಸಿದ್ದಾರೆ. ಜೊತೆಗೆ, ತೊಂಬೆಗಳ ಮೇಲೆ 'ಇದು ಸಾರ್ವಜನಿಕ ಆಸ್ತಿಯಾಗಿದ್ದು, ಎಲ್ಲಾ ಸಮುದಾಯದವರು ಇದನ್ನು ಬಳಸಬಹುದು' ಎಂದು ಬರೆಸಿದ್ದಾರೆ.
ಗ್ರಾಮದ ಯುವಕನಿಂದ ದೂರೊಂದನ್ನು ಪಡೆದಿದ್ದು ನೊಂದ ಮಹಿಳೆಯನ್ನು ಪತ್ತೆಹಚ್ಚಲು ತಾಲೂಕು ಆಡಳಿತ ಮುಂದಾಗಿದೆ. ಬಳಿಕ, ಆಕೆಯಿಂದಲೂ ದೂರನ್ನು ಪಡೆದು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ದಲಿತ ಕುಟುಂಬಕ್ಕೆ ದಲಿತರಿಂದಲೇ ಬಹಿಷ್ಕಾರ
ಗದಗ: ಮೇಲ್ವರ್ಗದವರು ಆ ಗ್ರಾಮದ ದಲಿತರಿಗೆ ಬಹಿಷ್ಕಾರ ಹಾಕಿದ್ದ ಪ್ರಕರಣಗಳನ್ನು ನಾವು ಕೇಳಿದ್ದೇವೆ. ಆದರೆ ಗದಗದ ನರಗುಂದದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಕುಟುಂಬ ಊರುಬಿಟ್ಟು 14 ವರ್ಷಗಳ ಬಳಿಕ ವಾಪಸ್ ಬಂದರೂ ಆ ಊರಿನ ಗ್ರಾಮಸ್ಥರು ಊರಿಗೆ ಸೇರಿಸದೇ ಮನೆಗೆ ಬೀಗ ಹಾಕಿ ಬಹಿಷ್ಕಾರ ಹಾಕಿದ್ದಾರೆ. ಇದರಿಂದ ನೊಂದ ಕುಟುಂಬ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದೊಂದೆ ಬಾಕಿ ಎಂದು ಗೋಳಾಡುತ್ತಿದ್ದಾರೆ.












Click it and Unblock the Notifications